ಬೆಂಗಳೂರು, ಸೆಪ್ಟೆಂಬರ್ 02: ಕೇರಳದ ಕ್ರಿಕೆಟರ್ ಸಚಿನ್ ಬೇಬಿ ವಿರುದ್ಧ ಆರೋಪ ಮಾಡಿದ್ದಕ್ಕಾಗಿ, ಸಂಜು ಸ್ಯಾಮ್ಸನ್ ಸೇರಿದಂತೆ 13 ಆಟಗಾರರ ವಿರುದ್ಧ ಕೇರಳ ಕ್ರಿಕೆಟ್ ಅಸೋಸಿಯೇಷನ್ (ಕೆಸಿಎ) ಶಿಸ್ತುಕ್ರಮಕ್ಕೆ ಮುಂದಾಗಿದೆ.
8 ಆಟಗಾರರಿಗೆ ದಂಡ ವಿಧಿಸಲಾಗಿದ್ದು, ಐವರು ಆಟಗಾರರರನ್ನು ಅಮಾನತುಗೊಳಿಸಲಾಗಿದೆ. ಕೇರಳದ ತಂಡದ ನಾಯಕನನ್ನು ಉದ್ದೇಶಪೂರ್ವಕವಾಗಿ ಅವಮಾನ ಮಾಡಿದ ಆರೋಪ ಹೊರೆಸಲಾಗಿದೆ.
ಸಂಜು ಸೇರಿದಂತೆ ಐಪಿಎಲ್ ಶತಕ ವೀರರ ಪಟ್ಟಿ
ತಂಡದಲ್ಲಿ ಸಚಿನ್ ಬೇಬಿ ಸರಿಯಾಗಿ ವರ್ತನೆ ತೋರುತ್ತಿಲ್ಲ. ಅವರು ತಂಡದ ಒಗ್ಗಟ್ಟಿಗೆ ಕುತ್ತುಂಟು ಮಾಡುತ್ತಿದ್ದಾರೆ. ಅವರಿಗೆ ನಾಯಕತ್ವದ ಯಾವುದೇ ಗುಣವಿಲ್ಲ ಎಂದು ತಂಡದ ಆಟಗಾರರು, ಕೇರಳ ಕ್ರಿಕೆಟ್ ಸಂಸ್ಥೆಗೆ ದೂರು ನೀಡಿದ್ದರು. ಕೆಸಿಎ ಈ ಬಗ್ಗೆ ಸಮಿತಿ ರಚಿಸಿ, ತನಿಖೆ ನಡೆಸಿ, ಸಚಿನ್ ಬೇಬಿ ಮೇಲಿನ ಆರೋಪಗಳು ಸುಳ್ಳು ಎಂದು ವರದಿ ನೀಡಿದೆ.
ಕೇರಳದ ಆಟಗಾರರಾದ ಅಭಿಷೇಕ್ ಮೋಹನ್, ಅಕ್ಷಯ್ ಕೆ.ಸಿ., ಫಾರೂಕ್ ಅಹ್ಮದ್, ನಿದ್ದೀಶ್ ಎಂ.ಡಿ., ಸಂಜು ಸಾಮ್ಸನ್, ಸಲ್ಮಾನ್ ನಿಜರ್, ಸಿಜೋಮನ್ ಜೋಸೆಫ್ ಹಾಗೂ ವಿಎ ಜಗದೀಶ್ ವಿರುದ್ಧ ಸಂಸ್ಥೆ ಈ ಕ್ರಮ ಕೈಗೊಂಡಿದ್ದು, ದಂಡ ರೂಪದ ನಗದನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಪಿಸುವಂತೆ ಸೂಚಿಸಲಾಗಿದೆ ಎಂದು ಕೆಸಿಎ ಕಾರ್ಯದರ್ಶಿ ಶ್ರೀಜೇಶ್ ನಾಯರ್ ಹೇಳಿದ್ದಾರೆ.