ಆಗಸ್ಟ್ 12 ಸೋಮವಾರ, ಭಾರತ ತಂಡದ ವಿಕೆಟ್ಕೀಪರ್ ಮತ್ತು ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಆಡುವ ಸಾಮರ್ಥ್ಯವಿದ್ದರೂ ಅವಕಾಶ ಮಾತ್ರ ಹೆಚ್ಚಾಗಿ ಸಂಜು ಅವರಿಗೆ ಸಿಗುತ್ತಿಲ್ಲ. ಅವಕಾಶ ಸಿಕ್ಕರೂ ಸಂಜು ಉತ್ತಮ ರನ್ ಕಲೆ ಹಾಕಿ ತಂಡಕ್ಕೆ ನೆರವಾಗುತ್ತಿಲ್ಲ. ಹೀಗಾಗಿ ಸಂಜು ಭಾರತ ಕ್ರಿಕೆಟ್ ಲೋಕದ ನತದೃಷ್ಟ ಆಟಗಾರರಾಗಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಶ್ರೀಲಂಕಾ ಸರಣಿಯ ಏಕದಿನ ತಂಡದಿಂದಲ್ಲೂ ಸಂಜು ಅವರನ್ನು ಕೈಬಿಡಲಾಗಿತ್ತು. ಆದರೆ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದ ಸಂಜು ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಇದೀಗ ಶ್ರೀಲಂಕಾ ಸರಣಿಯ ಏಕದಿನ ತಂಡದಿಂದ ಕೈಬಿಟ್ಟಿರುವ ಬಗ್ಗೆ ಸಂಜು ಬಹಿರಂಗವಾಗಿ ಮಾತನಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂಜು, ವಿಶೇಷವಾಗಿ ಆಯ್ಕೆ ವಿಷಯಗಳ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಆದರೆ ಅವರು ನಿಯಂತ್ರಿಸಬಹುದಾದ ವಿಷಯಗಳ ಮೇಲೆ ಗಮನಹರಿಸಲು ಪ್ರಯತ್ನಿಸುತ್ತೇನೆ. 'ಅವರು (ಬಿಸಿಸಿಐ ಆಯ್ಕೆ ಸಮಿತಿ) ನನ್ನನ್ನು ಆಡಲು ಕರೆದರೆ, ನಾನು ಹೋಗಿ ಆಟವಾಡುತ್ತೇನೆ. ಇಲ್ಲದಿದ್ದರೆ, ತೊಂದರೆ ಇಲ್ಲ. ಅದರ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ ಎಂದು ಸತತ ತಂಡದಿಂದ ಹೊರಗುಳಿಯುತ್ತಿರುವ ಬಗ್ಗೆ ಮೌನ ಮುರಿದ್ದಾರೆ.
ಭಾರತ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಯಾವುದೇ ತೊಂದರೆ ಇಲ್ಲ. ನಾನು ಧನಾತ್ಮಕವಾಗಿರಲು ಇಷ್ಟಪಡುತ್ತೇನೆ. ಏನು ನಿಯಂತ್ರಿಸಬಹುದು ಎಂಬುದರ ಮೇಲೆ ಗಮನಹರಿಸುತ್ತೇನೆ. ನನ್ನ ಅಭ್ಯಾಸ ಮತ್ತು ಕಠಿಣ ಪರಿಶ್ರಮದಿಂದ ಸಾಧ್ಯವಿರಷ್ಟು ಪ್ರಯತ್ನಗಳನ್ನು ಮಾಡುತ್ತೇನೆ. ಅದು ನನ್ನ ಆಟವನ್ನು ಸುಧಾರಿಸುತ್ತಿದೆ.
ನನ್ನ ವೃತ್ತಿಜೀವನವು ಬೆಳೆಯಬೇಕೆಂದು ನಾನು ಬಯಸುತ್ತೇನೆ. ಹಾಗಾಗಿ ನನ್ನ ಆಟವನ್ನು ಸುಧಾರಿಸಲು ಮತ್ತುನನ್ನ ನಿಯಂತ್ರಣದಲ್ಲಿರುವ ವಿಷಯಗಳ ಮೇಲೆ ಗಮನಹರಿಸುತ್ತೇನೆ ಎಂದು ಸಂಜು ತಿಳಿಸಿದ್ದಾರೆ.
'ಕಳೆದ 3-4 ತಿಂಗಳುಗಳು ನನ್ನ ವೃತ್ತಿಜೀವನದ ಅತ್ಯುತ್ತಮವಾಗಿದೆ. ವಿಶ್ವಕಪ್ ತಂಡದ ಭಾಗವಾಗುವುದು ಕನಸಿನಂತೆ, 3-4 ವರ್ಷಗಳ ಹಿಂದೆ ನಾನು ಬಯಸಿದ್ದೆ. ನನ್ನ ಕೊನೆಯ ಏಕದಿನ ವಿಶ್ವಕಪ್ ಆಡಬೇಕೆಂಬುದು ನನ್ನ ಆಸೆಯಾಗಿತ್ತು. ಆದರೆ, ತಂಡ ಸೇರಿಕೊಂಡು ಟಿ20 ವಿಶ್ವಕಪ್ ಗೆದ್ದ ನಂತರವೇ ಅದು ಸುಲಭದ ಮಾತಲ್ಲ ಎಂದು ಅರಿವಾಯಿತು.
ಆದರೆ ಕಳೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ನಾನು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ' ಎಂದು ಭಾರತ ತಂಡಕ್ಕೆ ಆಯ್ಕೆ ಆಗದಿರುವ ಬಗ್ಗೆ ಸಂಜು ತಮ್ಮ ಆಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸ್ಯಾಮ್ಸನ್ ಅದ್ಭುತ ಶತಕ ಗಳಿಸಿದ್ದರು. ಇದಾದ ಬಳಿಕ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕನಾಗಿ ಸಂಜು ಮಿಂಚಿದರು.
ಇದರ ಬೆನ್ನಲ್ಲೇ ಟಿ20 ವಿಶ್ವಕಪ್ ಭಾರತ ತಂಡಕ್ಕೂ ಆಯ್ಕೆ ಆಗಿದ್ದರು. ಆದರೆ, ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಕ್ಕಿರಲಿಲ್ಲ. ನಂತರ ಜಿಂಬಾಬ್ವೆ ಮತ್ತು ಶ್ರೀಲಂಕಾ ಪ್ರವಾಸದಲ್ಲಿ ಸಂಜು ಟಿ20 ತಂಡದಲ್ಲಿ ಸ್ಥಾನಪಡೆದರೂ ಹೇಳಿಕೊಳ್ಳುವಂತಹ ಪ್ರದರ್ಶನ ಬರಲಿಲ್ಲ.