ಇಂಗ್ಲೆಂಡ್ ವಿರುದ್ಧದ ರೋಚಕ ಪಂದ್ಯವನ್ನು ಗೆದ್ದು ಟೀಮ್ ಇಂಡಿಯಾ ಫೈನಲ್ಗೆ ಅರ್ಹತೆ ಪಡೆದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪರ ಸಂಜು ಸ್ಯಾಮ್ಸನ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ಫಲವಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಸಂಜು ಸ್ಯಾಮ್ಸನ್ ಈ ಪ್ರಶಸ್ತಿ ನನಗಲ್ಲ ಈ ಜನರೇಷನ್ ಬೌಲರ್ಗೆ ಸಲ್ಲಬೇಕು ಎಂದು ತಿಳಿಸಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರ ಈ ಶಿಸ್ತು ಬದ್ಧ ದಾಳಿಯನ್ನು ಕಂಡು ಬೆರಗಾಗದವರೇ ಇಲ್ಲ. ಅಂದು ಟೀಮ್ ಇಂಡಿಯಾ ಟಿ20 ವಿಶ್ವಕಪ್ ಫೈನಲ್ ಗೆದ್ದು, ಮುಂಬೈನಲ್ಲಿ ಸಂಭ್ರಮಾಚರಣೆ ನಡೆಸಿದಾಗ, ವಿರಾಟ್ ಕೊಹ್ಲಿ ಹೇಳಿದ ಆ ಮಾತು ಬುಮ್ರಾ ಅವರ ಸಾಮರ್ಥ್ಯವನ್ನು ತೋರಿಸುತ್ತದೆ. ಜಸ್ಪ್ರೀತ್ ಬುಮ್ರಾ ಒಬ್ಬ ಜನರೇಷನ್ ಬೌಲರ್ ಎಂದು ಹೇಳಿದ್ದರು. ಇದೇ ಮಾತನ್ನು ಗುರುವಾರ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಸಂಜು ಸ್ಯಾಮ್ಸನ್ ಹೇಳಿದರು. ಈ ಪಂದ್ಯ ಶ್ರೇಷ್ಠ ಪ್ರಶಸ್ತಿ ನನಗಲ್ಲ, ಜನರೇಷನ್ ಬೌಲರ್ಗೆ ನೀಡಬೇಕು ಎಂದು ತಿಳಿಸಿದ್ದರು.

ಸಂಜು ಸ್ಯಾಮ್ಸನ್ ಹೀಗೆ ಹೇಳಿದಕ್ಕೂ ಅರ್ಥ ಇದೆ. ಜಸ್ಪ್ರೀತ್ ಬುಮ್ರಾ ನಿಜಕ್ಕೂ ಒಬ್ಬ ಮಾರಕ ಬೌಲರ್. ಪಂದ್ಯ ಸಂಕಷ್ಟದಲ್ಲಿದ್ದಾಗ ಆಧಾರವಾಗುವ ಆಪದ್ಬಾಂಧವ. ತಮ್ಮ ಬಿಗುವಿನ ದಾಳಿಯ ಮೂಲಕವೇ ಎದುರಾಳಿ ಬ್ಯಾಟರ್ಗಳಿಗೆ ಕಂಟಕವಾಗುವ ಸ್ಟಾರ್. ಭಾರತ ಟಿ20 ವಿಶ್ವಕಪ್ ಫೈನಲ್ಗೆ ಅರ್ಹತೆ ಪಡೆಯುವಲ್ಲಿ ಜಸ್ಪ್ರೀತ್ ಬುಮ್ರಾ ದೊಡ್ಡ ಪಾತ್ರವನ್ನು ನಿಭಾಯಿಸಿದ್ದಾರೆ.
ಸಾಮಾನ್ಯವಾಗಿ ಜಸ್ಪ್ರೀತ್ ಬುಮ್ರಾ ಡೆತ್ ಓವರ್ಗಳಲ್ಲಿ 19ನೇ ಓವರ್ ಬೌಲ್ ಮಾಡುತ್ತಾರೆ. ಈ ಓವರ್ನ ಮೇಲೆ ಸೋಲು ಗೆಲುವಿನ ಲೆಕ್ಕಾಚಾರ ನಿಂತಿರುತ್ತದೆ. ಆದರೆ ಬುಮ್ರಾ ಸೆಮಿಫೈನಲ್ ಪಂದ್ಯದಲ್ಲಿ 18ನೇ ಓವರ್ ಮಾಡಿದರು. ಆಗಲೂ ಅದೇ ಪರ್ಫೆಕ್ಷನ್. ಇಂಗ್ಲೆಂಡ್ ತಂಡಕ್ಕೆ ಈ ಹಂತದಲ್ಲಿ ಗೆಲುವಿಗೆ 18 ಎಸೆತಗಳಲ್ಲಿ 45 ರನ್ಗಳ ಅವಶ್ಯಕತೆ ಇತ್ತು. ಆಗಲೇ ಬುಮ್ರಾ ಸತತ ಮೂರು ಎಸೆತಗಳನ್ನು ಯಾರ್ಕರ್ ಎಸೆದು ಸ್ಯಾಮ್ ಕರನ್, ಜಾಕಬ್ ಬೆಥೆಲ್ ಅವರಿಗೆ ಬಹುವಾಗಿ ಕಾಡಿದರು. ನಾಲ್ಕನೇ, ಐದನೇ ಎಸೆತದಲ್ಲಿ ಲೋ ಫುಲ್ ಟಾಸ್ ಎಸೆದರು. ಕೊನೆಯ ಎಸೆತದಲ್ಲಿ ಸಿಂಗಲ್ ರನ್ ನೀಡಿ ಮಾರಕವಾದರು. ಜಸ್ಪ್ರಿತ್ ಬುಮ್ರಾ ಅವರ ಬಿಗುವಾದ ದಾಳಿಯನ್ನು ಕಂಡು ಅಭಿಮಾನಿಗಳು ಬೆನ್ನು ತಟ್ಟಿದರು.
ಭಾರತದಲ್ಲಿ ಆಡುವುದು ಹಾಗೂ ಇಂತಹ ತಂಡವನ್ನು ಮುನ್ನಡೆಸುವುದು ಒಳ್ಳೆಯ ಅನುಭವ. ಸಂಜು ಸ್ಯಾಮ್ಸನ್ ಕ್ರೀಸ್ಗೆ ಹೋದಾಗಲೇ ಅವರಿಗೆ ಏನು ಮಾಡಬೇಕೆಂದು ತಿಳಿದಿತ್ತು. ಅವರು ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಬೌಲರ್ಗಳು ಪಂದ್ಯವನ್ನು ನಮ್ಮತ್ತ ಸೆಳೆದ ರೀತಿ ಅಸಾಧಾರಣವಾಗಿತ್ತು. ಬುಮ್ರಾ ಎಷ್ಟು ಸಮರ್ಥರು ಎಂಬುದು ನಿಮಗೆ ಈ ಪಂದ್ಯದಲ್ಲಿ ಅರ್ಥವಾಗುತ್ತದೆ. ನಾವು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಫಲವೇ ಜಯ ದಕ್ಕಿದೆ ಎಂದು ತಿಳಿಸಿದರು.