ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ 4 ಪಂದ್ಯಗಳ ಟಿ20 ಸರಣಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಪ್ರವಾಸದ ಮೊದಲ ಪಂದ್ಯದಲ್ಲಿಯೇ ಸಂಜು ಸ್ಯಾಮ್ಸನ್ ಸ್ಫೋಟಕ ಶತಕ ಬಾರಿಸುವ ಮೂಲಕ ಸುದ್ದಿಯಾಗಿದ್ದರು. ನವೆಂಬರ್ 8 ರಂದು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 50 ಎಸೆತಗಳಲ್ಲಿ 107 ರನ್ಗಳ ಅದ್ಭುತ ಶತಕವನ್ನು ಬಾರಿಸಿದ್ದರು. ಆದರೆ, ಇದಾದ ಬಳಿಕ ಸತತ ಎರಡು ಪಂದ್ಯಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗದೆ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ಗೆ ಮರಳಿದ್ದರು.
ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ನಡುವೆ, ಸಂಜು ಸ್ಯಾಮ್ಸನ್ ತಂದೆ ಸ್ಯಾಮ್ಸನ್ ವಿಶ್ವನಾಥ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಅವರು, 3 ಮಾಜಿ ಟೀಮ್ ಇಂಡಿಯಾ ನಾಯಕರು ಮತ್ತು ಒಬ್ಬ ಕೋಚ್ ತಮ್ಮ ಮಗನ ವೃತ್ತಿಜೀವನವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಲಯಾಳಂ ಮಾಧ್ಯಮವೊಂದರ ಜೊತೆ ಮಾತನಾಡಿರುವ ಸಂಜು ತಂದೆ ವಿಶ್ವನಾಥ್ ಅವರು ಮಲಯಾಳಂನಲ್ಲಿ ಮಾತನಾಡುತ್ತಾ, ಟೀಮ್ ಇಂಡಿಯಾದ ಮಾಜಿ ನಾಯಕರಾದ ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮತ್ತು ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ನಾಯಕತ್ವವು ಸಂಜುವಿನ 10 ವರ್ಷಗಳು ವ್ಯರ್ಥವಾಯಿತು ಎಂದು ಆರೋಪಿಸಿದ್ದಾರೆ. ಸಂಜು ಅವರ ತಂದೆಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇದೇ ವೇಳೆ ವಿಶ್ವನಾಥ್ ಅವರು ತಮ್ಮ ಮಗನ ಪ್ರತಿಭೆ ಬಗ್ಗೆಯೂ ಮಾತನಾಡಿದ್ದಾರೆ. ಮಗನ ಪ್ರತಿಭೆಯನ್ನು ಅಲ್ಲಗಳೆಯುವಂತಿಲ್ಲ, ಆದರೆ ಮಗನಿಗೆ ಅವಕಾಶಗಳು ಸಿಗುತ್ತಿಲ್ಲ ಎಂದಿದ್ದಾರೆ. ಅಲ್ಲದೆ, ಸಂಜು ಅವರನ್ನು ಪ್ರೋತ್ಸಾಹಿಸಿದಕ್ಕೆ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಳಲ್ಲಿ ಸಂಜು ಬಾರಿಸಿದ ಎರಡೂ ಶತಕಗಳನ್ನು ಗಂಭೀರ್ ಮತ್ತು ಯಾದವ್ ಅವರಿಗೆ ವಿಶ್ವನಾಥ್ ಅರ್ಪಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ಸಂಜು ಬೇಡದ ದಾಖಲೆಯನ್ನು ಮಾಡಿದ್ದರು. ಶತಕ ಸಿಡಿಸಿದ ಮರು ಪಂದ್ಯದಲ್ಲೇ ಶೂನ್ಯಕ್ಕೆ ಔಟಾದ 4ನೇ ಬ್ಯಾಟರ್ ಎಂಬ ಕೆಟ್ಟ ದಾಖಲೆ ಪಟ್ಟಿಗೆ ಸಂಜು ತಮ್ಮ ಹೆಸರು ಸೇರಿಸಿಕೊಂಡಿದ್ದರು. ಈ ಮೊದಲು ಋತುರಾಜ್ ಗಾಯಕ್ವಾಡ್, ರೋಹಿತ್ ಶರ್ಮಾ ಹಾಗೂ ಅಭಿಷೇಕ್ ಶರ್ಮಾ ಶತಕ ಸಿಡಿಸಿದ ಬಳಿಕ ಶೂನ್ಯ ಔಟಾಗಿದ್ದರು.