
ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಸಂಜು ಸ್ಯಾಮ್ಸನ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾದ ಭವಿಷ್ಯದ ತಾರೆಯಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಅವರು ತಪ್ಪುಗಳನ್ನು ತಿದ್ದಿಕೊಂಡು ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಭಜ್ಜಿ ಹೇಳಿದ್ದಾರೆ.
ಐಪಿಎಲ್ನಲ್ಲಿ ನಿಡಿದ ಶ್ರೇಷ್ಠ ಪ್ರದರ್ಶನದಿಂದಾಗಿ ಸಂಜು ಸ್ಯಾಮ್ಸನ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದರು. ಇದು ಸಂಜು ಸ್ಯಾಮ್ಸನ್ಗೆ ಸಿಕ್ಕ ಅದ್ಭುತವಾದ ಅವಕಾಶವಾಗಿದ್ದು ಇದನ್ನು ಸಂಜುಸ್ಯಾಮ್ಸನ್ ಅದ್ಭುತವಾಗಿ ಬಳಸಿಕೊಳ್ಳಲಿದ್ದಾರೆ ಎಂದು ಎಲ್ಲರೂ ವಿಶ್ವಾಸವನ್ನು ಹೊಂದಿದ್ದರು.
ಆದರೆ ಯುವ ಆಟಗಾರ ತನಗೆ ಸಿಕ್ಕ ಅದ್ಭುತವಾದ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ತನಗೆ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲು ಸಂಜು ವಿಫಲರಾಗಿದ್ದು ಮೂರು ಪಂದ್ಯಗಳಲ್ಲಿ ಕೇವಲ 48 ರನ್ಗಳನ್ನು ಬಾರಿಸಿದ್ದಾರೆ.
"ಸಂಜು ಅವರಿಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ದೊರೆತಿದೆ. ಇದು ಆತನಿಗಿನ್ನೂ ಮೊದಲನೇ ಅಥವಾ ಎರಡನೇ ಪ್ರವಾಸ. ಆತ ಕಲಿತುಕೊಳ್ಳಲಿದ್ದಾನೆ. ಆತನಲ್ಲಿ ಹೆಚ್ಚಿನ ಸಾಮರ್ಥ್ಯವಿದೆ ಹಾಗೂ ಭಾರತಕ್ಕೆ ಸರಣಿ ಗೆಲ್ಲಿಸಬಲ್ಲವನಾಗಿದ್ದಾರೆ ಎಂಬುದು ನಮಗೆ ತಿಳಿದಿದೆ" ಎಂದು ಹರ್ಭಜನ್ ಸಿಂಗ್ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.
"ಈ ಆಟಗಾರರು ಭಾರತ ಕ್ರಿಕೆಟ್ ತಂಡದ ಭವಿಷ್ಯವಾಗಿದ್ದಾರೆ. ಅವರು ತಪ್ಪುಗಳನ್ನು ಮಾಡದಿದ್ದರೆ ಕಲಿಯಲಾರರು. ಸಂಜು ಸ್ಯಾಮ್ಸನ್ ಬಳಿಯಿರುವ ಕೌಶಲ್ಯ ಹಾಗೂ ಸಾಮರ್ಥ್ಯವನ್ನು ಹೊಂದಿರುವ ಆಟಗಾರ. ಆತ ಇನ್ನಷ್ಟು ಕಲಿಯಲಿದ್ದು ಮತ್ತಷ್ಟು ಉತ್ತಮ ಆಟಗಾರನಾಗಲಿದ್ದಾನೆ" ಎಂದು ಹರ್ಭಜನ್ ಸಿಂಗ್ ಹೇಳಿಕೆಯನ್ನು ನೀಡಿದ್ದಾರೆ