ಭಾರತ ಕ್ರಿಕೆಟ್ ತಂಡದ ವಿಕೆಟ್ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಒಂದು ತಿಂಗಳಿಗೂ ಹೆಚ್ಚು ಕಾಲ ಮೈದಾನದಿಂದ ಹೊರಗುಳಿದಿದ್ದಾರೆ. ಸಂಜು ಸ್ಯಾಮ್ಸನ್ ಅವರ ತೋರು ಬೆರಳಿನಲ್ಲಿ ಮುರಿತಕ್ಕೆ ಒಳಗಾಗಿದ್ದಾರೆ. ಪರಿಣಾಮ ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಕ್ರಿಕೆಟ್ ಆಡುವಂತಿಲ್ಲ. ಹೀಗಾಗಿ ಮುಂಬರುವ ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ನಲ್ಲಿಯೂ ಅವರು ತಮ್ಮ ತವರು ತಂಡ ಕೇರಳ ಪರ ಆಡಲು ಸಾಧ್ಯವಾಗುವುದಿಲ್ಲ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದ ಮೊದಲ ಎಸೆತದಲ್ಲಿಯೇ ಸಂಜು ಸ್ಯಾಮ್ಸನ್ ಸಿಕ್ಸರ್ ಬಾರಿಸಿ ಗಮನ ಸೆಳೆದಿದ್ದರು. ಮುಂಬೈನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯದ ವೇಳೆ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಎಸೆತದಿಂದ ಸಂಜು ಸ್ಯಾಮ್ಸನ್ ಬೆರಳಿಗೆ ಪೆಟ್ಟಾಗಿದೆ.

ಗಂಟೆಗೆ ಸುಮಾರು 150 ಕಿ.ಮೀ ವೇಗದಲ್ಲಿ ಎಸೆದ ಆರ್ಚರ್ ಅವರ ಮೂರನೇ ಚೆಂಡು ಸ್ಯಾಮ್ಸನ್ ಅವರ ಬೆರಳಿಗೆ ಬಡಿಯಿತು. ಸ್ಯಾಮ್ಸನ್ ನಂತರ ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು. ಆದರೆ ಡಗ್-ಔಟ್ಗೆ ಮರಳಿದ ನಂತರ ಊತ ಹೆಚ್ಚಾಯಿತು. ಸ್ಕ್ಯಾನ್ನಲ್ಲಿ ಮೂಳೆ ಮುರಿತ ಪತ್ತೆಯಾಗಿದೆ. ಸ್ಯಾಮ್ಸನ್ ತಿರುವನಂತಪುರಕ್ಕೆ ಮರಳಿದ್ದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಪುನರ್ವಸತಿ ಮುಗಿಸಿದ ಬಳಿಕವೇ ತರಬೇತಿ ಆರಂಭಿಸಲಿದ್ದಾರೆ ಎಂದು ತಿಳಿದು ಬಂದಿದೆ. ಸ್ಪರ್ಧಾತ್ಮಕ ಪಂದ್ಯಗಳಿಗೆ ಹಿಂದಿರುಗುವ ಮೊದಲು ಅವರಿಗೆ ಎನ್ಸಿಎ ಅನುಮೋದನೆಯ ಅಗತ್ಯವಿದೆ.
ಐಪಿಎಲ್ಗೂ ಅನುಮಾನ!
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು. 'ಸ್ಯಾಮ್ಸನ್ ಅವರ ಬಲ ತೋರು ಬೆರಳು ಮುರರಿದಿ. ನೆಟ್ಸ್ನಲ್ಲಿ ಅಭ್ಯಾಸ ಆರಂಭಿಸಲು ಐದರಿಂದ ಆರು ವಾರಗಳು ಬೇಕಾಗುತ್ತದೆ. ಆದ್ದರಿಂದ, ಫೆಬ್ರವರಿ 8 ರಿಂದ 12 ರವರೆಗೆ ಪುಣೆಯಲ್ಲಿ ಕೇರಳ (ಜಮ್ಮು ಮತ್ತು ಕಾಶ್ಮೀರ ವಿರುದ್ಧ) ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ನಲ್ಲಿ ಆಡುವ ಸಾಧ್ಯತೆಯಿಲ್ಲ. ಅವರು ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ಗೆ ಮರಳುವ ಎಲ್ಲಾ ಸಾಧ್ಯತೆಗಳಿವೆ ಎಂದು ವರದಿಗಳಾಗಿವೆ.
ಬಾಂಗ್ಲಾದೇಶ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 7 ಪಂದ್ಯಗಳಲ್ಲಿ ಮೂರು ಶತಕಗಳಿಂದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆದಿದ್ದರು. ಇಂಗ್ಲೆಂಡ್ ವಿರುದ್ಧ ಸರಣಿಯುದ್ದಕ್ಕೂ ಸ್ಯಾಮ್ಸನ್ ಪ್ರದರ್ಶನ ನಿರಾಶಾದಾಯಕವಾಗಿತ್ತು. ಐದು ಪಂದ್ಯಗಳಲ್ಲಿ ಕೇವಲ 51 ರನ್ ಗಳಿಸಲಷ್ಟೇ ಶಕ್ತವಾಗಿದ್ದರು. ಇದೀಗ ಅವರು ಏಕದಿನ ಭಾರತ ತಂಡದ ಭಾಗವಾಗಿಲ್ಲ. ವಿಜಯ್ ಹಜಾರೆ ಟ್ರೋಫಿಯಲ್ಲಿ ಒಂದು ಪಂದ್ಯವನ್ನು ಆಡದ ಕಾರಣ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗುವುದನ್ನು ತಪ್ಪಿಸಿಕೊಂಡಿದ್ದಾರೆ.