ಭಾರತ ಟಿ20 ವಿಶ್ವಕಪ್ಗೆ ತಯಾರಿ ನಡೆಸುತ್ತಿದೆ. ಈ ಮೆಗಾ ಟೂರ್ನಿಗೆ ಟೀಮ್ ಇಂಡಿಯಾ ಭರದ ಸಿದ್ಧತೆಗಳನ್ನು ನಡೆಸುತ್ತಿದೆ. ಆದರೆ ತಂಡಕ್ಕೆ ಆ ಒಂದು ಚಿಂತೆ ಬಹುವಾಗಿ ಕಾಡುತ್ತಿದೆ. ಆರಂಭಿಕರಾಗಿ ಕಣಕ್ಕೆ ಇಳಿಯುವ ಸಂಜು ಸ್ಯಾಮ್ಸನ್ ರನ್ ಕಲೆ ಹಾಕುವಲ್ಲಿ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಇವರ ಸ್ಥಾನದ ಮೇಲೆ ಈಗ ಅಪಾಯದ ತೂಗುಗತ್ತಿ ನೇತಾಡುತ್ತಿದೆ.
ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಸಂಜು ಸ್ಯಾಮ್ಸನ್. ಇವರು ಕಳೆದ ವರ್ಷ ಭರ್ಜರಿ ಫಾರ್ಮ್ನಲ್ಲಿದ್ದರು. ಇವರ ಆಟಕ್ಕೆ ಬ್ರೇಕ್ ಹಾಕುವುದೇ ದೊಡ್ಡ ಸವಾಲಾಗಿತ್ತು. ಆದರೆ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ತಂಡದ ಸಂಯೋಜನೆ ಬದಲಾಯಿತು. ಸಂಜು ಆರಂಭಿಕ ಸ್ಥಾನದಿಂದ, ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಆರಂಭಿಸಿದರು. ರನ್ ವೈಫಲ್ಯ ಇವರನ್ನು ಬೆನ್ನು ಬಿಡದೆ ಕಾಡಲು ಆರಂಭಿಸಿತು. ಪರಿಣಾಮ ಕೆಲ ಪಂದ್ಯದಿಂದ ಇವರನ್ನು ಹೊರಗಿಡಲಾಯಿತು.

ಈಗ ಮತ್ತೆ ಅವರಿಗೆ ಆರಂಭಿಕರಾಗಿ ಬಡ್ತಿ ನೀಡಿ ಅವಕಾಶವನ್ನು ನೀಡಲಾಯಿತು. ಆದರೆ ಸಂಜು ಸ್ಯಾಮ್ಸನ್ ಸತತ ಅವಕಾಶವನ್ನು ಕೈ ಚೆಲ್ಲುತ್ತಿರುವುದು ಮ್ಯಾನೇಜ್ಮೆಂಟ್ ಚಿಂತೆಯನ್ನು ಹೆಚ್ಚಿಸಿದೆ. ಆಡಿದ ನಾಲ್ಕು ಟಿ20 ಪಂದ್ಯಗಳಲ್ಲಿ ಸಂಜು ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಇವರಿಗೆ ಟಿ20 ವಿಶ್ವಕಪ್ನಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡಬೇಕಾ ಎಂಬ ಪ್ರಶ್ನೆಗಳು ಎದ್ದಿವೆ.
ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗಿ ಇಶಾನ್ ಕಿಶನ್ ಅವರನ್ನು ಸಹ ತಂಡಕ್ಕೆ ಸೇರಿಸಿಕೊಂಡಿದೆ. ಇಶಾನ್ ಅಮೋಘ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಇದರಿಂದ ಸಂಜು ಅವರ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿದೆ. ತಿಲಕ್ ವರ್ಮಾ ಗಾಯಕ್ಕೆ ತುತ್ತಾಗಿದ್ದರಿಂದ ಆಡುವ ಬಳಗದಲ್ಲಿ ಸ್ಥಾನ ಪಡೆದ ಇಶಾನ್ ಕಿಶನ್ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಸಂಜು ಸ್ಯಾಮ್ಸನ್ ಅವರು ಶನಿವಾರ ನಡೆಯಲಿರುವ ಕೊನೆಯ ಪಂದ್ಯದಲ್ಲಿ ಅಬ್ಬರ ನಡೆಸದೇ ಇದ್ದರೆ, ಟಿ20 ವಿಶ್ವಕಪ್ನಲ್ಲಿ ಸ್ಥಾನ ಸಿಗುವುದು ಡೌಟ್ ಎನ್ನಲಾಗುತ್ತಿದೆ.

ಸಂಜು ಸ್ಯಾಮ್ಸನ್ ನ್ಯೂಜಿಲೆಂಡ್ ವಿರುದ್ಧ ನಾಲ್ಕೂ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಇವರು 10ರ ಸರಾಸರಿಯಲ್ಲಿ ಕೇವಲ 40 ರನ್ ಕಲೆ ಹಾಕಿದ್ದಾರೆ. ಇನ್ನು ಸರಣಿಯಲ್ಲಿ ಮೂರು ಪಂದ್ಯ ಆಡಿರುವ ಇಶಾನ್ ಕಿಶನ್ 37ರ ಸರಾಸರಿಯಲ್ಲಿ 112 ರನ್ ಸಿಡಿಸಿದ್ದಾರೆ. ಹೀಗಾಗಿ ಇವರ ಸ್ಥಾನದ ಮೇಲೆ ಅಪಾಯದ ತುಗುಗತ್ತಿ ನೇತಾಡುತ್ತಿದೆ.
ಇವರ ಆಟದ ಬಗ್ಗೆ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸುನಿಲ್ ಗವಾಸ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ನಾಲ್ಕನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಫುಟ್ ವರ್ಕ್ ಇರಲಿಲ್ಲ. ಅವರು ಎಲ್ಲಿಯೋ ನಿಂತು ಯಾವುದೋ ಹೊಡೆತಕ್ಕೆ ಮುಂದಾದಂತೆ ಕಂಡು ಬಂದಿತು. ರೂಮ್ ಮಾಡಿಕೊಂಡು ಆಡಲು ಹೋಗಿ ಮೂರು ಸ್ಟಂಪ್ಗಳನ್ನು ಬಿಟ್ಟರು. ಇದನ್ನೆ ಕಾಯುತ್ತಿದ್ದ ಬೌಲರ್ ಮೇಲುಗೈ ಸಾಧಿಸಿದರು ಎಂದು ತಿಳಿಸಿದ್ದಾರೆ.