ದೇಶೀಯ ಟೂರ್ನಿಯಲ್ಲಿ ತಮ್ಮ ಧಮಾಕೆದಾರ್ ಪ್ರದರ್ಶನದ ಮೂಲಕ ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟಿದರು. ಇರಾನಿ ಟ್ರೋಫಿಯಲ್ಲಂತೂ ಬಿರುಸಿನ ದ್ವಿಶತಕ ಬಾರಿಸಿ, ಅಬ್ಬರಿಸಿದರು. ಸಿಕ್ಕ ಅವಕಾಶದಲ್ಲಿ ಮಿಂಚು ಹರಿಸುತ್ತಿದ್ದ ಸರ್ಫರಾಜ್ ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರು. ಎಲ್ಲರೂ ಈ ಬಾರಿ ಬಿಗ್ ಇನಿಂಗ್ಸ್ ಫಿಕ್ಸ್ ಎಂದೇ ಭಾವಿಸಿದ್ದರು.
ವಿರಾಟ್ ಕೊಹ್ಲಿ ಔಟ್ ಆಗುತ್ತಿದ್ದಂತೆ ಪ್ಯಾಡ್ಗಳನ್ನು ಕಟ್ಟಿ ಕೊಂಡು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ಸರ್ಫರಾಜ್ ಅಂಗಳಕ್ಕೆ ಎಂಟ್ರಿ ನೀಡುವಾಗ ಕಾನ್ಫಿಡೆಂಟ್ ಇತ್ತು. ಆದರೆ ಇವರ ಮುಖದ ಮೇಲಿನ ಕಾನ್ಫಿಡೆಂಟ್ ಪಿಚ್ ವರ್ತನೆಯನ್ನು ನೋಡಿ ಬದಲಾಯಿತು. ಈ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ನಿಜಕ್ಕೂ ಸವಾಲೇ ಆಗಿತ್ತು. ಆದರೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನೀಡಿದ್ದ ಟಾಸ್ಕ್ನ್ನು ಸರ್ಫರಾಜ್ ಕೈ ಚೆಲ್ಲಿದ್ದಾರೆ.

ಸರ್ಫರಾಜ್ ಸ್ವಾಭಾವಿಕವಾಗಿ ಅಗ್ರೇಸಿವ್ ಪ್ಲೇಯರ್.. ಲೂಸ್ ಬೌಲ್ಗಳನ್ನು ನೋಡುತ್ತಲೇ ಇರುತ್ತಾರೆ. ಅಲ್ಲದೆ ಕೆಟ್ಟ ಎಸೆತಗಳನ್ನು ಬೌಂಡರಿ ಗೆರೆ ದಾಟಿಸುವುದೇ ಇವರ ಉದ್ದೇಶ. ಬೆಂಗಳೂರು ಟೆಸ್ಟ್ನಲ್ಲೂ ಇದೇ ಧಾಟಿಯಲ್ಲಿ ಬ್ಯಾಟ್ ಮಾಡಲು ಮುಂದಾದರು. ಆದರೆ, ಪರಿಸ್ಥಿತಿ ಇವರು ಅಂದುಕೊಂಡಂತೆ ಇರಲಿಲ್ಲ. ಇವರು ಮ್ಯಾಟ್ ಹೆನ್ರಿ ಅವರ ಎಸೆತವನ್ನು ಸರ್ಫರಾಜ್ ಹಾಫ್ ವಾಲಿ ಎಂದು ತಿಳಿದು ದಂಡಿಸಲು ಮುಂದಾದರು.
ಸರ್ಫರಾಜ್ ಟೈಮಿಂಗ್ ಸರಿಯಾಗಿ ಆಗಲಿಲ್ಲ. ಪರಿಣಾಮ ಚೆಂಡು ಮಿಡ್ ಆಫ್ನಲ್ಲಿದ್ದ ಡ್ವೇನ್ ಕಾನ್ವೆ ಅವರ ಕೈ ಸೇರಿತು. ಸರ್ಫರಾಜ್ ಔಟ್ ಆಗುತ್ತಿದ್ದಂತೆ ಬೌಲರ್ ಸೇರಿ, ಬ್ಯಾಟರ್ಗೂ ಅಚ್ಚರಿ ಕಾದಿತ್ತು.
ಅಂದಹಾಗೆ ಸರ್ಫರಾಜ್ ಖಾನ್ ಏನು ಮಾಡಬೇಕಿತ್ತು ಎಂಬ ಪ್ರಶ್ನೆಗಳು ಎದ್ದಿವೆ. ಸರ್ಫರಾಜ್ ಮೊದಲ ಇನಿಂಗ್ಸ್ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಇದು ತಂಡದ ಅನುಭವಿಗೆ ನೀಡುವ ಸ್ಥಾನ. ಈ ಸ್ಥಾನದಲ್ಲಿ ಅನುಭವಿ ಆಟಗಾರ ಬಂದು, ಮಧ್ಯಮ ಕ್ರಮಾಂಕ ಹಾಗೂ ಟಾಪ್ ಆರ್ಡರ್ ಬ್ಯಾಟರ್ಗಳ ನಡುವೆ ಕೊಂಡಿಯಂತೆ ಆಡುತ್ತಾರೆ. ಆದರೆ ಸರ್ಫರಾಜ್ ಬರುತ್ತಿದ್ದಂತೆ ಲೂಸ್ ಶಾಟ್ ಒಂದನ್ನು ಪ್ರಯೋಗಿಸಿ ಪೆವಿಲಿಯನ್ಗೆ ಹೋಗುವ ಸ್ವಾತಂತ್ರ್ಯವನ್ನು ಪಡೆದರು.
ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಸರ್ಫರಾಜ್ಗೆ ಇಂಗ್ಲೆಂಡ್ ವಿರುದ್ಧದ ಸರಣಿಗೆ ತಂಡದಲ್ಲಿ ಅವಕಾಶ ಸಿಕ್ಕಿತು. ಈ ಟೆಸ್ಟ್ನಲ್ಲಿ ಅನುಭವಿ ಬ್ಯಾಟರ್ಗಳು ತಂಡದಿಂದ ಹೊರ ನಡೆದಿದ್ದಾಗ ಅವರ ಸ್ಥಾನವನ್ನು ಯುವ ಆಟಗಾರ ತುಂಬಿದರು. ಆಡಿದ ಮೂರು ಪಂದ್ಯಗಳಲ್ಲಿ ಮೂರು ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ಇವರಿಗೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಈಗ ಸಿಕ್ಕ ಅವಕಾಶವನ್ನು ಸರ್ಫರಾಜ್ ಕೈ ಚೆಲ್ಲಿದ್ದಾರೆ. ಎರಡನೇ ಇನಿಂಗ್ಸ್ನಲ್ಲಿ ಸಮಯೋಚಿತ ಆಟ ಆಡಿದರೆ, ಮುಂದೆ ಅವಕಾಶದ ಆಸೆ. ಇಲ್ಲವಾದಲ್ಲಿ ಸರ್ಫರಾಜ್ಗೆ ಕಷ್ಟವಾಗುತ್ತದೆ.