ಬಾಂಗ್ಲಾದೇಶದ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಯುವ ಆಟಗಾರ ಸರ್ಫರಾಜ್ ಖಾನ್ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಸರ್ಫರಾಜ್ ಮೇಲೆ ಭರವಸೆ ಇಟ್ಟು ಸ್ಥಾನ ನೀಡಲಾಗಿದೆ.
ಚೆನ್ನೈನಲ್ಲಿ ನಡೆಯಲಿರುವ ಮೊದಲ ಟೆಸ್ಟ್ಗೆ ಟೀಮ್ ಇಂಡಿಯಾ ಇನ್ನೇನು ಕೆಲವೇ ದಿನಗಳಲ್ಲಿ ತಯಾರಿ ನಡೆಸಲಿದೆ. ಆದರೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಸರ್ಫರಾಜ್ ಖಾನ್ ಮಾತ್ರ ದುಲೀಪ್ ಟ್ರೋಫಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಸಕ್ತ ದುಲೀಪ್ ಟ್ರೋಫಿಯಲ್ಲಿ ಭಾರತ ಬಿ ತಂಡದ ಭಾಗವಾಗಿರುವ ಸರ್ಫರಾಜ್ ಖಾನ್, ಭರವಸೆ ಮೂಡಿಸಿದ್ದಾರೆ.

ಎರಡನೇ ಪಂದ್ಯಕ್ಕೆ ಮುನ್ನ ಸರ್ಫರಾಜ್ ಖಾನ್ ಅವರನ್ನು ಭಾರತ ಬಿ ತಂಡದಿಂದ ಕೈ ಬಿಟ್ಟಿಲ್ಲ. 2024 ರ ದುಲೀಪ್ ಟ್ರೋಫಿಯ ಟೀಮ್ ಇಂಡಿಯಾ ಬಿ ತಂಡದ ನಾಲ್ವರು ಆಟಗಾರರು ಬಾಂಗ್ಲಾದೇಶದೊಂದಿಗಿನ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಇದರಲ್ಲಿ ರಿಷಬ್ ಪಂತ್, ಯಶಸ್ವಿ ಜೈಸ್ವಾಲ್, ಯಶ್ ದಯಾಳ್ ಮತ್ತು ಸರ್ಫರಾಜ್ ಖಾನ್ ಸೇರಿದ್ದಾರೆ.
ಭಾರತ ಬಿ ತಂಡದಲ್ಲಿ ಸ್ಥಾನ ಪಡೆದಿದ್ದ ಯಶಸ್ವಿ ಜೈಸ್ವಾಲ್, ಪಂತ್ ಮತ್ತು ಯಶ್ ದಯಾಳ್ ಅವರನ್ನು ಮುಂದಿನ ಪಂದ್ಯದಿಂದ ಕೈ ಬಿಡಲಾಗಿದೆ. ಆದರೆ ಸರ್ಫರಾಜ್ ಅವರನ್ನು ಬಿಡುಗಡೆ ಗೊಳಿಸದ ಕಾರಣ ಇವರು ಸೆಪ್ಟೆಂಬರ್ 12 ರಿಂದ ನಡೆಯಲಿರುವ ಇಂಡಿಯಾ ಬಿ ಪಂದ್ಯದಲ್ಲಿ ಮೈದಾನಕ್ಕೆ ಇಳಿಯಲಿದ್ದಾರೆ.
ಇನ್ನು ಭಾರತ ಬಿ ತಂಡದಲ್ಲಿರುವ ಸ್ಟಾರ್ ಆಟಗಾರರು ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರಿಂದ ಇವರಿಗೆ ಬದಲಿ ಆಟಗಾರರನ್ನು ಘೋಷಣೆ ಮಾಡಲಾಗಿದೆ. ಭಾರತ ಬಿ ತಂಡದಲ್ಲಿ ರಿಂಕು ಸಿಂಗ್, ಆಕಿಬ್ ಖಾನ್, ಸುಯ್ಯಾಶ್ ಪ್ರಭುದೇಸಾಯಿ ಮತ್ತು ಹಿಮಾಂಶು ಮಂತ್ರಿ ಭಾರತ ಬಿ ತಂಡವನ್ನು ಸೇರಿದ್ದಾರೆ. ಈಗಾಗಲೇ ಮೊದಲ ಟೆಸ್ಟ್ ಪಂದ್ಯಕ್ಕೆ ನಾಲ್ವರು ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಲಾಗಿದ್ದು, ಈ ಆಟಗಾರರು ಅವರ ಸ್ಥಾನವನ್ನು ತುಂಬಲಿದ್ದಾರೆ. ಭಾರತ ಬಿ ತಂಡದ ಎರಡನೇ ಪಂದ್ಯ ಮುಗಿದ ಬಳಿಕ ಸರ್ಫರಾಜ್ ಖಾನ್ ಚೆನ್ನೈನಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಆಡುವ ಅವಕಾಶ ಪಡೆದಿರುವ ಸರ್ಫರಾಜ್ ಖಾನ್ ಅವರಿಗೆ ಆಡುವ ಬಳಗದಲ್ಲಿ ಸ್ಥಾನ ಸಿಗುವುದು ಕೊಂಚ ಕಷ್ಟ ಎಂದು ಹೇಳಲಾಗುತ್ತಿದೆ. ಇವರಿಗಿಂತ ಅನುಭವಿ ಆಟಗಾರರು ತಂಡದಲ್ಲಿದ್ದರಿಂದ ಇವರಿಗೆ ಸ್ಥಾನ ಸಿಗುವುದು ಡೌಟ್.
ಭಾರತ ಬಿ ತಂಡ: ಅಭಿಮನ್ಯು ಈಶ್ವರನ್ (ನಾಯಕ), ಸರ್ಫರಾಜ್ ಖಾನ್, ಮುಶೀರ್ ಖಾನ್, ನಿತೀಶ್ ಕುಮಾರ್ ರೆಡ್ಡಿ, ವಾಶಿಂಗ್ಟನ್ ಸುಂದರ್, ನವದೀಪ್ ಸೈನಿ, ಮುಕೇಶ್ ಕುಮಾರ್, ರಾಹುಲ್ ಚಹಾರ್, ಆರ್. ಸಾಯಿ ಕಿಶೋರ್, ಮೋಹಿತ್ ಎ., ಎನ್.ಜಗದೀಶನ್, ಎಸ್ ಪ್ರಭುದೇಸಾಯಿ, ರಿಂಕು ಸಿಂಗ್, ಹಿಮಾಂಶು ಮಂತ್ರಿ