ಭಾರತ ಹಾಗೂ ಬಾಂಗ್ಲಾದೇಶ ನಡುವಣ ಟೆಸ್ಟ್ ಸರಣಿ ಮುಗಿದಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಜಯದ ನಗೆ ಬೀರಿದೆ. ಇನ್ನು ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು ಎದುರು ನೋಡುತ್ತಿದ್ದಾರೆ. ಅಕ್ಟೋಬರ್ 16 ರಿಂದ ಕಿವೀಸ್ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಯಲ್ಲಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡಬೇಕೆಂದು ಮುಂಬೈ ತಂಡದ ಯುವ ಬ್ಯಾಟರ್ ಒತ್ತಾಯಿಸಿದ್ದಾರೆ.
ಲಕ್ನೋನಲ್ಲಿ ಭಾರತ ಇತರೆ ಹಾಗೂ ಮುಂಬೈ ತಂಡಗಳ ನಡುವೆ ಇರಾನಿ ಕಪ್ ಕ್ರಿಕೆಟ್ ಟೂರ್ನಿಯ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮುಂಬೈ ತಂಡ ಎರಡನೇ ದಿನದಾಟ ಮುಕ್ತಾಯಕ್ಕೆ 9 ವಿಕೆಟ್ ನಷ್ಟಕ್ಕೆ 536 ರನ್ ಗಳಿಸಿದೆ. ಮುಂಬೈ ತಂಡದ ಪರ ಸ್ಟಾರ್ ಯುವ ಆಟಗಾರ ಸರ್ಫರಾಜ್ ಖಾನ್ ಡಬಲ್ ಸೆಂಚೂರಿ ಬಾರಿಸಿದ್ದಾರೆ.

ಸರ್ಫರಾಜ್ ಖಾನ್ ಮೊದಲ ದಿನದಾಟದ ಅಂತ್ಯಕ್ಕೆ ಅರ್ಧಶತಕ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದರು. ಬುಧವಾರ ಎರಡನೇ ದಿನದಾಟವನ್ನು ಆರಂಭಿಸಿದ ಮುಂಬೈ ತಂಡದ ಪರ ಸರ್ಫರಾಜ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರ ಅಬ್ಬರದ ಆಟಕ್ಕೆ ಬ್ರೇಕ್ ಹಾಕಲು ಭಾರತ ಇತರೆ ತಂಡದ ಯಾವೊಬ್ಬ ಬೌಲರ್ಗೂ ಸಾಧ್ಯವಾಗಲಿಲ್ಲ. ಸರ್ಫರಾಜ್ ಹಂತ ಹಂತವಾಗಿ ಇನಿಂಗ್ಸ್ ಬೆಳೆಸುತ್ತಾ ಸಾಗಿದರು.
ಸರ್ಫರಾಜ್ ಖಾನ್ 276 ಎಸೆತಗಳಲ್ಲಿ 25 ಬೌಂಡರಿ, 4 ಸಿಕ್ಸರ್ ಸಹಾಯದಿಂದ 221 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದಾರೆ. ಮೂರನೇ ದಿನದಾಟದಲ್ಲಿ ಸರ್ಫರಾಜ್ ಮತ್ತೆ ಯಾವ ದಾಖಲೆ ನಿರ್ಮಿಸುತ್ತಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಸರ್ಫರಾಜ್, ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಗೆ ತಮ್ಮನ್ನು ಆಯ್ಕೆ ಮಾಡಿ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡುವಂತೆ ಒತ್ತಾಯಿಸಿದಂತೆ, ಇರಾನಿ ಟ್ರೋಫಿಯಲ್ಲಿ ಅವರು ಆಡಿದ ಇನಿಂಗ್ಸ್..

ಇರಾನಿ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ತಂಡ ಉತ್ತಮ ಮೊತ್ತದತ್ತ ದಾಪುಗಾಲು ಇಟ್ಟಿದೆ. ಮುಂಬೈ ಪರ ಅಜಿಂಕ್ಯ ರಹಾನೆ 97, ಶ್ರೇಯಸ್ ಅಯ್ಯರ್ 57, ತನುಷ್ ಕೋಟ್ಯಾನ್ 64 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಭಾರತ ಇತರೆ ತಂಡದ ಪರ ಮುಕೇಶ್ ಕುಮಾರ್ 4, ಯಶ್ ದಯಾಳ್ ಹಾಗೂ ಪ್ರಸಿದ್ಧ ಕೃಷ್ಣಾ ತಲಾ ಎರಡು ವಿಕೆಟ್ ಕಬಳಿಸಿದರು.