ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿದೆ. ಶನಿವಾರ ಮೊದಲಾವಧಿಯಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಆರ್ಭಟ ನಡೆಸಿದ್ದಾರೆ. ಪಿಚ್ನ ಸಂಪೂರ್ಣ ಲಾಭ ಪಡೆದ ಆತಿಥೇಯ ತಂಡದ ಬ್ಯಾಟರ್ಸ್ ಅಬ್ಬರಿಸಿದ್ದಾರೆ. ಭಾರತ 12 ರನ್ಗಳ ಹಿನ್ನಡೆ ಅನುಭವಿಸುತ್ತಿದ್ದಾಗ ಪಂದ್ಯಕ್ಕೆ ಮಳೆ ಕಾಟ ನೀಡಿದೆ.
ಶನಿವಾರ ಭಾರತ ತಂಡ ಎರಡನೇ ಇನಿಂಗ್ಸ್ನಲ್ಲಿ 3 ವಿಕೆಟ್ಗೆ 180 ರನ್ಗಳಿಂದ ಆಟ ಮುಂದುವರಿಸಿತು. ಈ ವೇಳೆ ಸರ್ಫರಾಜ್ ಖಾನ್ 70 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದರು. ಆದರೆ ನಾಲ್ಕನೇ ದಿನದಾಟಕ್ಕೆ ಮೈದಾನಕ್ಕೆ ಇಳಿದಾಗ ಸರ್ಫರಾಜ್ ತಾವು ಮೂರನೇ ದಿನದಾಟದಲ್ಲಿ ಯಾವು ಫಾರ್ಮ್ ಕಂಡುಕೊಂಡಿದ್ದರೋ ಅದೇ ಫಾರ್ಮ್ ಮುಂದುವರೆಸಿದರು. ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸರ್ಫರಾಜ್ ಎಲ್ಲರ ಚಿತ್ತ ಕದ್ದರು.

ಸರ್ಫರಾಜ್ ಖಾನ್ 154 ಎಸೆತಗಳಲ್ಲಿ 16 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 125 ರನ್ ಸಿಡಿಸಿದ್ದಾರೆ. ಇನ್ನು ರಿಷಭ್ ಪಂತ್ ಸಹ 5 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 53 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ನಾಲ್ಕನೇ ದಿನದಾಟದಲ್ಲಿ 21 ಓವರ್ ಬೌಲ್ ಮಾಡಲಾಗಿತ್ತು. ಆಗಲೇ ತುಂತುರು ಮಳೆ ಪಂದ್ಯಕ್ಕೆ ಕಾಟ ನೀಡಿದೆ. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನು ಜಸ್ಟ್ 12 ರನ್ ಅವಶ್ಯಕತೆ ಇತ್ತು ಆಗಲೇ ಮಳೆ ಪಂದ್ಯಕ್ಕೆ ಕಾಟ ನೀಡಿತು. ಇದರಿಂದ ಪಂದ್ಯವನ್ನು ನಿಲ್ಲಿಸಲಾಗಿದೆ. ಅಲ್ಲದೆ ಭೋಜನ ವಿರಾಮದ ಘೋಷಣೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಮಳೆ ಟೆಸ್ಟ್ ಪಂದ್ಯದ ಮೊದಲ ದಿನದಾಟಕ್ಕೆ ಸಂಪೂರ್ಣ ಕಾಟ ನೀಡಿತ್ತು. ಆದರೆ ಎರಡನೇ ಹಾಗೂ ಮೂರನೇ ದಿನದಾಟ ಸಂಪೂರ್ಣ ನಡೆಯಲು ನೆರವಾಯಿತು. ಆದರೆ ನಾಲ್ಕನೇ ದಿನದಾಟದ ಮೊದಲಾವಧಿಯಲ್ಲಿ ಮತ್ತೆ ಆರಂಭವಾಗಿದೆ. ಮಳೆ ನಿಂತ ಕೆಲವೇ ಅರ್ಧ ಗಂಟೆಗಳಲ್ಲಿಆಟ ಆರಂಭವಾಗಬಹುದು. ಭಾರತ ಶನಿವಾರದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದೆ. ಈ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆಯನ್ನು ಸಾಧಿಸುವ ಕನಸಿನಲ್ಲಿ ಟೀಮ್ ಇಂಡಿಯಾ ಇದ್ದು, ಈ ಆಸೆ ನೆರವೇರ ಬೇಕಾದಲ್ಲಿ ಮಳೆ ನಿಲ್ಲಬೇಕಾಗುತ್ತದೆ.
ಸರ್ಫರಾಜ್ ಖಾನ್ ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದ ಮೊದಲ ಶತಕ ಬಾರಿಸಿದ್ದಾರೆ. ಅಮೋಘ ಬ್ಯಾಕ್ ಫುಟ್ ಪಂಚ್, ಅಪರ್ ಕಟ್ಗಳನ್ನು ಪ್ರಯೋಗಿಸಿದ ಸರ್ಫರಾಜ್ ಅಮೋಘವಾಗಿ ಬ್ಯಾಟ್ ಮಾಡಿದರು. ತಮ್ಮ ಟೆಸ್ಟ್ ವೃತ್ತಿ ಜೀವನದ ನಾಲ್ಕನೇ ಪಂದ್ಯದಲ್ಲಿ ಸರ್ಫರಾಜ್, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಶತಕ ಬಾರಿಸಿದರು. ಈ ಮೂಲಕ ತಮ್ಮಲ್ಲಿರುವ ಕ್ಷಮತೆಯನ್ನು ಬಹಿರಂಗ ಗೊಳಿಸಿದ್ದಾರೆ.