ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಎರಡನೇ ಟೆಸ್ಟ್ ಪಂದ್ಯ ಗುರುವಾರ (ಅ.24) ರಿಂದ ಪುಣೆಯಲ್ಲಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಯಾವ ಕಾಂಬಿನೇಷನ್ನೊಂದಿಗೆ ಕಣಕ್ಕೆ ಇಳಿಯಲಿದೆ ಎಂಬ ಕುತೂಹಲ ಮನೆ ಮಾಡಿದೆ. ಟೀಮ್ ಇಂಡಿಯಾದಲ್ಲಿ ಬದಲಾವಣೆ ಖಚಿತ ಎಂಬ ಮಾಹಿತಿ ಲಭ್ಯವಾಗುತ್ತಿದೆ.
ಬೆಂಗಳೂರು ಟೆಸ್ಟ್ನಿಂದ ದೂರ ಉಳಿದಿದ್ದ ಶುಭಮನ್ಗಿಲ್ ಎರಡನೇ ಟೆಸ್ಟ್ ಪಂದ್ಯಕ್ಕೆ ತಂಡವನ್ನು ಸೇರುವ ಸಾಧ್ಯತೆ ಇದೆ. ಇವರು ತಂಡಕ್ಕೆ ಎಂಟ್ರಿ ನೀಡುತ್ತಿದ್ದಂತೆ, ಟೀಮ್ ಇಂಡಿಯಾದ ಒಬ್ಬ ಬ್ಯಾಟರ್ ಸ್ಥಾನಕ್ಕೆ ಕತ್ತರಿ ಬೀಳಲಿದೆ. ಹಾಗಿದ್ದರೆ ಸ್ಥಾನ ಕಳೆದುಕೊಳ್ಳಲಿರುವ ಆಟಗಾರ ಎಂಬ ಪ್ರಶ್ನೆಗಳು ಎದ್ದಿವೆ. ಆದರೆ ಇದಕ್ಕೆ ಅಭಿಮಾನಿಗಳು ಕೆಎಲ್ ರಾಹುಲ್ ಅವರನ್ನು ಕೈ ಬಿಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ.

ಬೆಂಗಳೂರು ಟೆಸ್ಟ್ನಲ್ಲಿ ನೀಡಿರುವ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಅಭಿಮಾನಿಗಳು ಕೆಎಲ್ ರಾಹುಲ್ ಅವರನ್ನು ಕೈ ಬಿಡುವಂತೆ ಸೂಚಿಸುತ್ತಿದ್ದಾರೆ. ಆದರೆ ಟೀಮ್ ಮ್ಯಾನೇಜ್ಮೆಂಟ್ ತಲೆಯಲ್ಲಿ ಯಾವೆಲ್ಲಾ ವಿಚಾರಗಳು ಓಡಾಡುತ್ತಿವೆ ಎಂಬ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ. ಆದರೆ ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಕಳೆದ ಪಂದ್ಯದ ಶತಕ ವೀರನಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಇದೆ ಎಂದು ತಿಳಿದು ಬಂದಿದೆ.
ಟೀಮ್ ಇಂಡಿಯಾದ ಪರ ಬೆಂಗಳೂರಿನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಆಟಗಾರ ಸರ್ಫರಾಜ್ ಖಾನ್. ಇವರು ಮೊದಲ ಟೆಸ್ಟ್ನ ಎರಡನೇ ಇನಿಂಗ್ಸ್ನಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿ 150 ರನ್ ಸಿಡಿಸಿದ್ದರು. ಇವರ ಈ ಪ್ರದರ್ಶನವನ್ನು ಗಮನಸಿದ ಬಳಿಕ ಇವರನ್ನು ತಂಡದಿಂದ ಹೊರಗಿಡುವುದು ಅಸಾಧ್ಯ ಎಂದು ಹೇಳಲಾಗುತ್ತಿತ್ತು. ಆದರೆ ಸರ್ಫರಾಜ್ ಅವರು ಎರಡನೇ ಟೆಸ್ಟ್ಗೂ ಮುನ್ನ ಅಭ್ಯಾಸದಲ್ಲಿ ಭಾಗವಹಿಸಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಇವರು ಎರಡನೇ ಟೆಸ್ಟ್ನಲ್ಲಿ ಆಡುವುದು ಇನ್ನು ಕನ್ಫರ್ಮ್ ಆಗಿಲ್ಲ.
ಸತತ ವೈಫಲ್ಯಗಳನ್ನು ಅನುಭವಿಸಿದರೂ ಕರ್ನಾಟಕದ ಕೆಎಲ್ ರಾಹುಲ್ ಅವರಿಗೆ ಟೀಮ್ ಇಂಡಿಯಾ ಬ್ಯಾಕ್ ಅಪ್ ಮಾಡುತ್ತಿದೆ. ಇವರಿಗೆ ಎರಡನೇ ಟೆಸ್ಟ್ನಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಚಾನ್ಸ್ ಸಿಗುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಏನು ಎಂಬುದು ಇನ್ನು ಬಹಿರಂಗವಾಗಿಲ್ಲ. ಆದರೆ ಇವರ ಬೆನ್ನಿಗೆ ನಾಯಕ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭೀರ್ ನಿಂತಿದ್ದಾರೆ ಎಂದು ತಿಳಿದು ಬಂದಿದೆ. ಇವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುತ್ತದಾ ಎಂಬುದನ್ನು ಇನ್ನು ನಿಶ್ಚಿತವಾಗಿಲ್ಲ.

ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದಿದ್ದ ಸರ್ಫರಾಜ್ ಖಾನ್ ಅಬ್ಬರಿಸಿದ್ದರು. ಈಗ ಗಿಲ್ ಗಾಯದಿಂದ ಚೇತರಿಸಿಕೊಂಡಿದ್ದು ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಇವರು ತಂಡ ಸೇರಿದರೆ ಯಾರಿಗೆ ಗೇಟ್ ಪಾಸ್ ನೀಡಲಾಗುತ್ತದೆ ಎಂಬುದೇ ಕುತೂಹಲ ಹೆಚ್ಚಿಸಿದೆ.