ಹೈದರಾಬಾದ್ ಟೆಸ್ಟ್ ಸೋಲಿನ ನಂತರ ಟೀಂ ಇಂಡಿಯಾ ಸಂಕಷ್ಟ ಹೆಚ್ಚುತ್ತಲೇ ಇದೆ. ಈ ಸರಣಿಯ ಎರಡನೇ ಟೆಸ್ಟ್ ಫೆಬ್ರವರಿ 2 ರಿಂದ ವಿಶಾಖಪಟ್ಟಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ಇಬ್ಬರು ಆಟಗಾರರು ಹೊರಗುಳಿಯಲಿದ್ದು, ಯುವ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ.
ಎರಡನೇ ಟೆಸ್ಟ್ ಪಂದ್ಯಕ್ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಅನುಪಸ್ಥಿತರಿರಲಿದ್ದಾರೆ. ಭಾನುವಾರ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ರವೀಂದ್ರ ಜಡೇಜಾ ಅವರು ಕಾಲಿನ ಸ್ನಾಯು ನೋವಿಗೆ ಒಳಗಾಗಿದ್ದರೆ, ರಾಹುಲ್ ಬಲ ತೊಡೆಯ ನೋವಿನಿಂದ ಬಳಲುತ್ತಿದ್ದಾರೆ. ಎರಡನೇ ಟೆಸ್ಟ್ ಪಂದ್ಯಕ್ಕೆ ಮುಂಬೈ ಬ್ಯಾಟ್ಸ್ಮನ್ ಸರ್ಫರಾಜ್ ಖಾನ್, ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಮತ್ತು ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ನೀಡಲಾಗಿದೆ.

ವಾಷಿಂಗ್ಟನ್ ಸುಂದರ್ ಮತ್ತು ಸರ್ಫರಾಜ್ ಖಾನ್ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು. ಆದರೆ ಸೌರಭ್ ಕುಮಾರ್ ಬಗ್ಗೆ ನಿಮಗೆಷ್ಟು ಗೊತ್ತು? ಈ ಆಟಗಾರ ಇದುವರೆಗೆ ಐಪಿಎಲ್ ಆಡಿಲ್ಲ. ಆದರೆ ದೇಶೀಯ ಕ್ರಿಕೆಟ್ನಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ದೇಶೀಯ ಕ್ರಿಕೆಟ್ನಲ್ಲಿ ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದಾರೆ.
ಸೌರಭ್ ಇದುವರೆಗೆ 68 ಪ್ರಥಮ ದರ್ಜೆ ಪಂದ್ಯಗಳಲ್ಲಿ 27ರ ಸರಾಸರಿಯಲ್ಲಿ 2061 ರನ್ ಗಳಿಸಿದ್ದಾರೆ. ಅಲ್ಲದೆ ಬೌಲರ್ ಆಗಿ ಎದುರಾಳಿ ತಂಡದ 290 ಬ್ಯಾಟ್ಸ್ ಮನ್ ಗಳನ್ನು ಬಲಿ ಪಡೆದಿದ್ದಾರೆ. ಈ ಆಟಗಾರ ಯುಪಿ ಪರ ರಣಜಿ ಟ್ರೋಫಿಯಲ್ಲಿ ಆಡಲು ವಾಯುಪಡೆಯಲ್ಲಿನ ತನ್ನ ಕೆಲಸವನ್ನು ತೊರೆದಿದ್ದಾರೆ. ಆದರೆ ಇದಕ್ಕೂ ಮೊದಲು ಅವರು ಸೇನಾ ತಂಡದೊಂದಿಗೆ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ್ದರು.

ಸೌರಭ್ ಕುಮಾರ್ ಅವರು ವಾಯುಪಡೆಗೆ ಪದಾರ್ಪಣೆ ಮಾಡಿದ್ದು ಕ್ರೀಡಾ ಕೋಟಾದ ಮೂಲಕ. ಆದರೆ ಅವರು ಯುಪಿಗಾಗಿ ಆಡಲು ಬಯಸಿದ್ದರು, ಆದ್ದರಿಂದ ಅವರು ಕೆಲಸವನ್ನು ತೊರೆಯಲು ನಿರ್ಧರಿಸಿದ್ದರು. ಆದರೆ, ಈಗ ಈ ಆಟಗಾರ ಭಾರತ ಪರ ಆಡಲಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅನುಪಸ್ಥಿತಿಯಲ್ಲಿ ಸೌರಭ್ ಕುಮಾರ್ ಅವರನ್ನು ಪ್ಲೇಯಿಂಗ್ ಇಲೆವೆನ್ ನಲ್ಲಿ ಸೇರಿಸಿಕೊಳ್ಳಬಹುದು ಎಂದು ನಂಬಲಾಗಿದೆ.
ಎರಡನೇ ಟೆಸ್ಟ್ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್. ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್ ಮತ್ತು ಸೌರಭ್ ಕುಮಾರ್.