ದೇಶೀಯ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯು ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಶುಕ್ರವಾರ ಈ ಟೂರ್ನಿ ಎರಡನೇ ಸೆಮಿಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸೌರಾಷ್ಟ್ರ ತಂಡ 9 ವಿಕೆಟ್ಗಳಿಂದ ಪಂಜಾಬ್ ತಂಡವನ್ನು ಮಣಿಸಿ ಫೈನಲ್ಗೆ ಅರ್ಹತೆ ಪಡೆದಿದೆ. ಕರ್ನಾಟಕ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದ ವಿದರ್ಭ ಹಾಗೂ ಸೌರಾಷ್ಟ್ರ ತಂಡಗಳು ಫೈನಲ್ನಲ್ಲಿ ಕಾದಾಟ ನಡೆಸಲಿವೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಪಂಜಾಬ್ ತಂಡದ ಪರ ಇನಿಂಗ್ಸ್ ಆರಂಭಿಸಿದ ಹರ್ನೂರ್ ಸಿಂಗ್ ಹಾಗೂ ನಾಯಕ ಪ್ರಭಸಿಮ್ರನ್ ಸಿಂಗ್ ಜೋಡಿ ಮೊದಲ ವಿಕೆಟ್ಗೆ 12.1 ಓವರ್ಗಳಲ್ಲಿ 60 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಹರ್ನೂರ್ ಸಿಂಗ್ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 33 ರನ್ ಸಿಡಿಸಿ ಔಟ್ ಆದರು.

ಎರಡನೇ ವಿಕೆಟ್ಗೆ ನಾಯಕ ಪ್ರಭಸಿಮ್ರನ್ ಸಿಂಗ್ ಜೊತೆಗೂಡಿದ ಅನ್ಮೋಲ್ ಪ್ರೀತ್ ಸಿಂಗ್ ಜೋಡಿ ಸಹ ತಂಡಕ್ಕೆ ಆಧಾರವಾಯಿತು. ಈ ಜೋಡಿ ಸಮಯೋಚಿತ ಬ್ಯಾಟಿಂಗ್ ನಡೆಸಿ ಮಧ್ಯದ ಓವರ್ಗಳಲ್ಲಿ ವಿಕೆಟ್ ಬೀಳದಂತೆ ನೋಡಿಕೊಂಡಿತು. 2ನೇ ವಿಕೆಟ್ಗೆ ಈ ಜೋಡಿ 115 ಎಸೆತಗಳಲ್ಲಿ 109 ರನ್ ಸೇರಿಸಿತು. ಈ ವೇಳೆ ಪ್ರಭಸಿಮ್ರನ್ ಸಿಂಗ್ 9 ಬೌಂಡರಿ, 3 ಸಿಕ್ಸರ್ ಸಹಾಯದಿಂದ 33 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ನಮನ್ ಧೀರ್ (8) ಹಾಗೂ ನೇಹಾಲ್ ವಡೇರಾ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. ರಮಣದೀಪ್ ಸಿಂಗ್ 42 ರನ್ ಸಿಡಿಸಿದರು.
ಅನ್ಮೋಲ್ ಪ್ರೀತ್ ಸಿಂಗ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದರು. 105 ಎಸೆತಗಳಲ್ಲಿ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 100 ರನ್ ಬಾರಿಸಿದರು. ಅಂತಿಮವಾಗಿ ಪಂಜಾಬ್ 50 ಓವರ್ಗಳಲ್ಲಿ 291 ರನ್ ಕಲೆ ಹಾಕಿ ಆಲೌಟ್ ಆಯಿತು.

ಸೌರಾಷ್ಟ್ರ ತಂಡ ಮೂರನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿಯ ಪ್ರಶಸ್ತಿ ಎತ್ತುವ ಕನಸು ಕಾಣುತ್ತಿದೆ. ಇನ್ನು ವಿದರ್ಭ ತಂಡ ಚೊಚ್ಚಲ ಬಾರಿಗೆ ಟ್ರೋಫಿ ಎತ್ತುವ ಹಂಬಲದಲ್ಲಿದೆ.