ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ ಸೆಪ್ಟೆಂಬರ್ 27 ರಿಂದ ಕಾನ್ಪುರದ ಐತಿಹಾಸಿಕ ಗ್ರೀನ್ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮೊದಲು ಚೆನ್ನೈನಲ್ಲಿ ಉಭಯ ತಂಡಗಳ ನಡುವೆ ಸೆಪ್ಟೆಂಬರ್ 19 ರಿಂದ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಎರಡನೇ ಪಂದ್ಯ ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಯೋಜನೆ ಗೊಂಡಿದೆ.
ಈ ಟೆಸ್ಟ್ ಸರಣಿಯ ವೇಳಾಪಟ್ಟಿ ಮತ್ತು ಟೀಮ್ ಇಂಡಿಯಾವನ್ನು ಈಗಾಗಲೇ ಬಿಸಿಸಿಐ ಬಿಡುಗಡೆ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ತಮ್ಮ ಸಿದ್ಧತೆ ಆರಂಭಿಸಿದ್ದಾರೆ. ಮಂಗಳವಾರ ಕಾನ್ಪುರ ಪೊಲೀಸ್ ಕಮಿಷನರ್ ಅಖಿಲ್ ಕುಮಾರ್, ಹೆಚ್ಚುವರಿ ಸಿಪಿಡಿಎಸ್ ಹರೀಶ್ ಚಂದರ್, ಡಿಸಿಪಿ ಪೂರ್ವ ಎಸ್ಕೆ ಸಿಂಗ್ ಇಡೀ ಸ್ಟೇಡಿಯಂ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿಗಳು ಸ್ಟೇಡಿಯಂನ ಪ್ರತಿ ಗ್ಯಾಲರಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಪೊಲೀಸ್ ಕಮಿಷನರ್ ಜೊತೆಗೆ ಕಾನ್ಪುರ ಕ್ರಿಕೆಟ್ ನಿರ್ದೇಶಕ ಸಂಜಯ್ ಕಪೂರ್ ಮತ್ತು ಯುಪಿಸಿಎ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ಹಿಂದೆಯೂ ಪಂದ್ಯಗಳು ನಡೆದ ರೀತಿಯಲ್ಲಿಯೇ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಪೊಲೀಸ್ ಆಯುಕ್ತರು ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈಗಾಗಲೇ ಭಾರತ ಮತ್ತು ಬಾಂಗ್ಲಾದೇಶ ಎರಡನೇ ಟೆಸ್ಟ್ ಪಂದ್ಯಕ್ಕೆ ಭದ್ರತಾ ವ್ಯವಸ್ಥೆಗಳ ನೀಲನಕ್ಷೆಯನ್ನು ರಚಿಸಲಾಗಿದೆ. ಪ್ರೇಕ್ಷಕರು ಮೈದಾನದೊಳಗೆ ನುಗ್ಗಿ ಆಟಗಾರರ ಬಳಿ ಬರದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ. ಇದಲ್ಲದೆ, ಯುಪಿಸಿಎ ಅಧಿಕಾರಿಗಳು ತಮಗೆ ಬೇಕಾದ ಭದ್ರತಾ ಸಿದ್ಧತೆಗಳ ಬಗ್ಗೆ ಪೂರ್ವ ಡಿಸಿಪಿಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ.
ಸ್ಟೇಡಿಯಂನ ಸ್ವಚ್ಛತೆ ಮತ್ತು ಬಣ್ಣ ಬಳಿಯುವ ಕಾರ್ಯವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಗ್ರೀನ್ ಪಾರ್ಕ್ನ ಆಡಳಿತ ಅಧಿಕಾರಿಗಳಿಗೆ ಸೂಚಿಸಿಲಾಗಿದೆ. ಈ ಕಾಮಗಾರಿಯಲ್ಲಿ ನಿರ್ಲಕ್ಷ್ಯ ವಹಿಸದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಇದೇ ವೇಳೆ ಗ್ರೀನ್ ಪಾರ್ಕ್ನ ಕಳಪೆ ಒಳಚರಂಡಿ ವ್ಯವಸ್ಥೆ ಬಗ್ಗೆಯೂ ಗಮನ ಹರಿಸಲಾಗಿದೆ.
ಎಲ್ಲದಕ್ಕಿಂತ ಮುಖ್ಯವಾಗಿ ಭಾರತ ಮತ್ತು ಬಾಂಗ್ಲಾದೇಶ ಟೆಸ್ಟ್ ಪಂದ್ಯವನ್ನು ನಿಗದಿತ ಸಮಯಕ್ಕೆ ಆರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಟಗಾರರಿಂದ ಹಿಡಿದು ಪ್ರೇಕ್ಷಕರವರೆಗೆ ಯಾರಿಗೂ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಸದ್ಯ ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಯುಪಿ ಟಿ-20 ಲೀಗ್ನತ್ತ ಅಧಿಕಾರಿಗಳು ಗಮನ ಹರಿಸಿದ್ದಾರೆ.