
ನವದೆಹಲಿ, ಜುಲೈ 25: ಟೀಮ್ ಇಂಡಿಯಾ ಪರ ಆರಂಭಿಕರಾಗಿ ಮೈದಾನದಲ್ಲಿ ಅನೇಕಸಾರಿ ಸೆಣಸಾಡಿದ್ದ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ್ ಜೋಡಿ ಮೈದಾನದ ಹೊರಗಿದ್ದು ಮತ್ತೆ ಕ್ರಿಕೆಟ್ ರಂಗಕ್ಕಾಗಿ ಶ್ರಮಿಸಲಿದೆ. ಸೆಹ್ವಾಗ್, ಗಂಭೀರ್ ಹೆಸರು ಡೆಲ್ಲಿ ಆ್ಯಂಡ್ ಡಿಸ್ಟ್ರಿಕ್ಟ್ ಕ್ರಿಕೆಟ್ ಅಸೋಸಿಯೇಷನ್ ಸಮಿತಿಯಲ್ಲಿ ಕಾಣಿಸಿಕೊಂಡಿರುವುದು ಇದಕ್ಕೆ ಕಾರಣ.
ಸೆಹ್ವಾಗ್ ಮತ್ತು ಗಂಭೀರ್ ಇಬ್ಬರೂ ತಮ್ಮ ಹಳೆಯ ತಂಡದ ಸಹ ಆಟಗಾರರಾದ ಆಕಾಶ್ ಚೋಪ್ರ, ರಾಹುಲ್ ಸಾಂಘ್ವಿ ಅವರಿರುವ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ತಂಡ ಮುಂಬರುವ ದಿನಗಳಲ್ಲಿ ದೆಹಲಿ ಕ್ರಿಕೆಟಿಗೆ ಮಾರ್ಗಸೂಚಿ ರೂಪಿಸುವುದರೊಂದಿಗೆ ತರಬೇತುದಾರರ ಆಯ್ಕೆ, ಆಯ್ಕೆ ಸಮಿತಿ ರಚನೆ ಸೇರಿದಂತೆ ಕ್ರಿಕೆಟ್ ಗೆ ಸಂಬಂಧಿಸಿದ ಇನ್ನಿತರ ಪ್ರಮುಖ ಸಂಗತಿಗಳಲ್ಲಿ ಪಾತ್ರವಹಿಸಲಿದೆ.
ಡಿಡಿಸಿಯೆ ಅಧ್ಯಕ್ಷ ರಜತ್ ಶರ್ಮಾ ಅವರು ಪತ್ರಿಕಾ ಪ್ರಕಟನೆ ಮೂಲಕ ಸೆಹ್ವಾಗ್, ಗಂಭೀರ್ ಅವರನ್ನು ಸಮಿತಿಗೆ ಸೇರಿಸಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಲೋಧಾ ಸಮಿತಿಯ ಶಿಫಾರಸಿನಂತೆಯೇ ಇಬ್ಬರನ್ನೂ ಆರಿಸಲಾಗಿದೆ ಎಂದು ತಿಳಿಸಿದ್ದಾರೆ.
ಗಂಭೀರ್ ಈಗ ಸಕ್ರಿಯ ಆಟಗಾರನಾಗಿದ್ದೂ ಅವರನ್ನು ಸಮಿತಿಗೆ ಹೇಗೆ ಆರಿಸಿಕೊಂಡಿರಿ ಎಂಬ ಪ್ರಶ್ನೆಯೂ ಈ ವೇಳೆ ಉದ್ಭವಿಸುವುದರಿಂದ ಇದಕ್ಕೆ ಮುಂಚಿತವಾಗೇ ಉತ್ತರಿಸಿರುವ ಶರ್ಮಾ, ಗಂಭೀರ್ ಅವರಿಗೆ ಪ್ರಮುಖ ಸ್ಥಾನವೊಂದನ್ನು ನೀಡಿದ್ದೇವೆ ಎಂದಿದ್ದಾರೆ. ಮೂಲಗಳ ಪ್ರಕಾರ ಗಂಭೀರ್ ಗೆ ವಿಶೇಷ ಆಹ್ವಾನಿತ ಸ್ಥಾನ ನೀಡಲಾಗಿದೆ.
ಡಿಡಿಸಿಎ ಸರ್ಕಾರದ ಪ್ರತಿನಿಧಿಯಾಗಿದ್ದ ಗೌತಮ್, ಕಳೆದ ವರ್ಷವೇ ಡಿಡಿಸಿಎ ಸಮಿತಿಗೆ ನೇಮಕವಾಗುವುದರಲ್ಲಿದ್ದರು. ಆದರೆ ಆಗ ಆಡಳಿತಾಧಿಕಾರಿಯಾಗಿದ್ದ ನ್ಯಾಯಧೀಶ ವಿಕ್ರಮಜೀತ್ ಸೇನ್ ಅವರು ಗಂಭೀರ್ ಆಯ್ಕೆಯನ್ನು ಮುಂದೂಡಿದ್ದರು.