
ನವದೆಹಲಿ, ಫೆಬ್ರವರಿ 16: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡಲು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮುಂದಾಗಿದ್ದಾರೆ. ಭಯೋತ್ಪಾದಕರ ದಾಳಿಗೆ ಬಲಿಯಾದ ಸೈನಿಕರ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ತಾನು ಭರಿಸುವುದಾಗಿ ಸೆಹ್ವಾಗ್ ಹೇಳಿಕೊಂಡಿದ್ದಾರೆ.
ಉಗ್ರರು ಸಂಚು ಹೂಡಿ ನಡೆಸಿದ ದಾಳಿಗೆ ಸುಮಾರು 45ಕ್ಕೂ ಹೆಚ್ಚು ಭಾರತೀಯ ಯೋಧರು ಸಾವನ್ನಪ್ಪಿದ್ದರು. ಘಟನೆ ಇಡೀ ಭಾರತೀಯರನ್ನು ದುಃಖದಲ್ಲಿ ಮುಳುಗಿಸಿದೆ. ಸೈನಿಕರ ಸಾವಿಗೆ ಕ್ರೀಡಾರಂಗವೂ ಕಂಬನಿಯೊಂದಿಗೆ ಸಂತಾಪ ಸೂಚಿಸಿದೆ. ಅದರಲ್ಲೂ ಸೆಹ್ವಾಗ್ ಮಾನವೀಯ ಮುಖಕ್ಕಾಗಿ ಭಾರತೀಯರ ಮನ ಗೆದ್ದಿದ್ದಾರೆ.
ಪುಲ್ವಾಮಾ ದಾಳಿಗೆ ಸಂಬಂಧಿಸಿ ಟ್ವೀಟ್ ಮಾಡಿರುವ ವೀರೂ, 'ಹೆಚ್ಚಿನದೇನೂ ನಾವು ಮಾಡುವಂತಿಲ್ಲ. ಆದರೆ ಏನಿಲ್ಲವೆಂದರೂ ನಾನು ಹುತಾತ್ಮ ಯೋಧರ ಮಕ್ಕಳಿಗೆ ಝಾಜ್ಜರ್ ನಲ್ಲಿರುವ ಸೆಹ್ವಾಗ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ವಿದ್ಯಾಭ್ಯಾಸ ಒದಗಿಸುವ ಸಂಪೂರ್ಣ ಜವಾಬ್ದಾರಿ ಹೊರಲು ಬಯಸಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಹರ್ಯಾಣ ರಾಜ್ಯದ ಝಾಜ್ಜರ್ನಲ್ಲಿ ವೀರೇಂದ್ರ ಅವರ ಸೆಹ್ವಾಗ್ ಅಂತಾರಾಷ್ಟ್ರೀಯ ವಿದ್ಯಾಸಂಸ್ಥೆಯಿದೆ. ಅದರಲ್ಲಿ ತಾನು ಮೃತ ಯೋಧರ ಎಲ್ಲಾ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತೇನೆ. ಯೋಧರಿಗೆ ನಾನು ಸಲ್ಲಿಸುವ ಗೌರವಿದೆಂದು ತಾನು ಭಾವಿಸುವುದಾಗಿ ಸೆಹ್ವಾಗ್ ಹೇಳಿಕೊಂಡಿದ್ದಾರೆ.