ನವದೆಹಲಿ, ಅ.19 : ಮುಂದಿನ ವಿಶ್ವಕಪ್ಗೆ ವಿರೇಂದ್ರ ಸೆಹ್ವಾಗ್ ಮತ್ತು ಯುವರಾಜ್ ಸಿಂಗ್ ಟೀಮ್ ಇಂಡಿಯಾಕ್ಕೆ ವಾಪಸಾಗುವುದು ಕಷ್ಟಸಾಧ್ಯ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ವಿಶ್ವಕಪ್ ತುಂಬಾ ಹತ್ತಿರವಾಗಿದ್ದು ಟೀಮ್ ಇಂಡಿಯಾ ನಾಯಕ ಎಂ.ಎಸ್.ಧೋನಿ ತಂಡದಲ್ಲಿ ಯಾವುದೇ ವಿಶೇಷ ಬದಲಾವಣೆ ಬಯಸುವುದಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಶನಿವಾರ ಇಂಡಿಯಾ ಟುಡೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಕಂಡ ಅತ್ಯುತ್ತಮ ಆಟಗಾರರಲ್ಲಿ ಯುವಿ ಮತ್ತು ವೀರು ಮುಖ್ಯವಾದವರು. ಆದರೆ ಈಗ ಅವರಿಗೆ ಸಮಯ ಕೈ ಕೊಟ್ಟಿದೆ ಎಂದು ಗಂಗೂಲಿ ವಿಶ್ಲೇಷಿಸಿದ್ದಾರೆ.[ನರೇಂದ್ರ ಮೋದಿ ಕೋರಿಕೆ ಈಡೇರಿಸಿದ ಸಚಿನ್]
ಮುಂದಿನ ಫೆಬ್ರವರಿಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಭಾರತ ತಂಡಕ್ಕಿದೆ. ಟೀಮ್ ಇಂಡಿಯಾ ಇಂದು ಅತ್ಯುತ್ತಮ ಸಂಘಟಿತ ತಂಡವಾಗಿದ್ದು ಏಕದಿನ ಮತ್ತು ಟೆಸ್ಟ್ ನಲ್ಲಿ ಉತ್ತಮ ಸಾಧನೆ ಮಾಡುತ್ತ ಮುನ್ನುಗ್ಗುತ್ತಿದೆ. ಆದರೆ ಏಕದಿನದಲ್ಲಿ ಪ್ರದರ್ಶನ ಮತ್ತಷ್ಟು ಸದೃಢವಾಗಿದೆ ಎಂದು ಹೇಳಿದ್ದಾರೆ.
ಭಾರತ ತಂಡದಲ್ಲಿ ನಾಲ್ಕರಿಂದ ಐದು ಅತ್ಯುತ್ತಮ ಅಂಶಗಳಿವೆ. ಒಂದು ತಂಡ ಚಾಂಪಿಯನ್ ಆಗಬೇಕಾದರೆ ಇಂಥ ಅಂಶಗಳು ಮುಖ್ಯವಾಗುತ್ತವೆ. ವಿರಾಟ್ ಮತ್ತು ರೈನಾ ಬ್ಯಾಟ್ ನಿಂದ ರನ್ ಹರಿಸುತ್ತಿದ್ದಾರೆ. ವಿರಾಟ್ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಪಂದ್ಯ ಗೆಲ್ಲಿಸಿಕೊಟ್ಟ ದಾಖಲೆಗಳಿವೆ. ಇತ್ತೀಚಿನ ರೈನಾ ಫಾರ್ಮ್ ಅತ್ಯುತ್ತಮವಾಗಿದೆ, ಈ ಎಲ್ಲ ಅಂಶಗಳು ಭಾರತಕ್ಕೆ ನೆರವಾಗಲಿದೆ ಎಂದು ಹೇಳಿದ್ದಾರೆ. [ಚಕರ್ಸ್ಸ್ ಗಳಿಗೆ ಹರ್ಭಜನ್ ಸಿಂಗ್ ರೋಲ್ ಮಾಡೆಲ್!]
ಭಾರತವನ್ನು ಬಿಟ್ಟರೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ಈ ಬಾರಿ ಪ್ರಶಸ್ತಿ ರೇಸ್ ನಲ್ಲಿರುವಂತೆ ಕಾಣುತ್ತದೆ. 2003ರ ವಿಶ್ವಕಪ್ ಫೈನಲ್ ಸೋತಿದ್ದು ಇಂದಿಗೂ ಕಾಡುತ್ತಿದೆ. ಆದರೆ ಅತ್ಯುತ್ತಮ ತಂಡವೊಂದರ ವಿರುದ್ಧ ಸೋತಿದ್ದೇವೆ ಎಂಬ ಸಣ್ಣ ಸಮಾಧಾನವೂ ಇದೆ ಎಂದು ದಾದಾ ಹೇಳಿದ್ದಾರೆ.
ನಾಯಕನಾಗಿ ಭಾರತಕ್ಕೆ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿರುವ ದಾದಾ, ಯುವರಾಜ್ ಸಿಂಗ್ ಮತ್ತು ವಿರೇಂದ್ರ ಸೆಹ್ವಾಗ್ ಅವರನ್ನು ಮ್ಯಾಚ್ ವಿನ್ನರ್ಸ್ ಎಂದೇ ಪರಿಗಣಿಸಿದ್ದರು. ಇಬ್ಬರು ಆಟಗಾರ ಮೇಲೆ ವಿಶೇಷ ನಂಬಿಕೆ ಇಟ್ಟುಕೊಂಡಿದ್ದ ಬಂಗಾಳದ ಮಹಾರಾಜ ಯುವಿ ಮತ್ತು ವೀರು ಕಳಪೆ ಫಾರ್ಮ್ ನಲ್ಲಿದ್ದಾಗಲೂ ಅವಕಾಶ ನೀಡಿದ್ದರು.