ಧೋನಿಯನ್ನು ಮೆಂಟರ್ ಆಗಿ ಆಯ್ಕೆ ಮಾಡಿದ್ದು ತಂಡದ ಇತರರನ್ನು ತುಳಿಯುವುದಕ್ಕಾ?; ಬಿಸಿಸಿಐ ಹೇಳಿದ್ದಿಷ್ಟು

2016ರ ನಂತರ ಯಾವುದೇ ವರ್ಷಗಳಲ್ಲಿಯೂ ಅಂತರರಾಷ್ಟ್ರೀಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಿರಲಿಲ್ಲ. ಹೀಗೆ ಕಳೆದ 4 ವರ್ಷಗಳಿಂದ ನಡೆಯದೇ ಇದ್ದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಈ ವರ್ಷ ಆಯೋಜಿಸಲಾಗಿದ್ದು ಮುಂಬರಲಿರುವ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಈ ಬಹುನಿರೀಕ್ಷಿತ ಟೂರ್ನಿ ನಡೆಯಲಿದೆ.
ಭಾರತದಲ್ಲಿ ನಡೆಯಬೇಕಿದ್ದ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಕೊರೋನಾವೈರಸ್ ಕಾರಣದಿಂದಾಗಿ ಯುಎಇಗೆ ಸ್ಥಳಾಂತರಿಸಲಾಗಿದ್ದು ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಟೂರ್ನಿ ನಡೆಯಲಿದೆ. ಹೀಗಾಗಿ ಮುಂಬರಲಿರುವ ಈ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ದೇಶಗಳೂ ಕೂಡ ಟೂರ್ನಿಯಲ್ಲಿ ಭಾಗವಹಿಸಲಿರುವ ತಮ್ಮ ತಂಡಗಳನ್ನು ಪ್ರಕಟಿಸಿದ್ದವು. ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಾಗಿ ಬಿಸಿಸಿಐ ಕೂಡ ಭಾರತ ತಂಡವನ್ನು ಪ್ರಕಟ ಮಾಡಿತ್ತು. ಹೀಗೆ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಾಗಿ ಭಾರತ ತಂಡದ ಆಟಗಾರರನ್ನು ಪ್ರಕಟ ಮಾಡುವುದಲ್ಲದೇ, ಈ ತಂಡಕ್ಕೆ ಮಾರ್ಗದರ್ಶಕನನ್ನಾಗಿ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಹೆಸರನ್ನು ಬಿಸಿಸಿಐ ಪ್ರಕಟಿಸಿತ್ತು.
ಯಾವುದೇ ಸುಳಿವನ್ನೂ ನೀಡದೇ ಮಾರ್ಗದರ್ಶಕ ಸ್ಥಾನಕ್ಕೆ ಎಂಎಸ್ ಧೋನಿ ಅವರ ಹೆಸರನ್ನು ಬಿಸಿಸಿಐ ಪ್ರಕಟಿಸಿದ ಕೂಡಲೇ ಚರ್ಚೆಗಳು ದೊಡ್ಡಮಟ್ಟದಲ್ಲಿಯೇ ನಡೆದವು. ಕೆಲವರು ಬಿಸಿಸಿಐನ ಈ ನಿರ್ಧಾರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನೂ ಕೊಂಚ ಮಂದಿ ಈ ಆಯ್ಕೆಯ ಅಗತ್ಯವೇ ಇರಲಿಲ್ಲ ಎಂದು ಬಿಸಿಸಿಐ ನಿರ್ಧಾರವನ್ನು ವಿರೋಧಿಸಿದ್ದರು. ಇನ್ನೂ ಕೆಲವರು ಎಂಎಸ್ ಧೋನಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಮೆಂಟರ್ ಆಗಿ ಆಯ್ಕೆಯಾಗಿರುವುದರಿಂದ ಇತರ ಆಟಗಾರರು ದುರ್ಬಲಗೊಳ್ಳುತ್ತಾರೆ ಎಂಬ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಇದೀಗ ಬಿಸಿಸಿಐನ ಖಜಾಂಚಿ ಅರುಣ್ ಧುಮಾಲ್ ಮುಕ್ತವಾಗಿ ಮಾತನಾಡಿದ್ದು ಎಂಎಸ್ ಧೋನಿ ಅವರನ್ನು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ತಂಡದ ಮಾರ್ಗದರ್ಶಕರನ್ನಾಗಿ ನೇಮಕಗೊಳಿಸಿದ್ದು ಇತರ ಆಟಗಾರರನ್ನು ತುಳಿಯಲಿಕ್ಕೆ ಎಂದು ಮಾತನಾಡುತ್ತಿರುವವರಿಗೆ ಈ ಕೆಳಕಂಡಂತೆ ಉತ್ತರಗಳನ್ನು ನೀಡಿದ್ದಾರೆ.

ಧೋನಿ ಆಯ್ಕೆಯಿಂದ ಇತರ ಆಟಗಾರರನ್ನು ತುಳಿದಂತಾಗುತ್ತದೆ ಎಂದವರಿಗೆ ಅರುಣ್ ಧುಮಾಲ್ ಕೊಟ್ಟ ಉತ್ತರವಿದು
'ಎಂಎಸ್ ಧೋನಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಭಾರತ ತಂಡದಲ್ಲಿ ಮಾರ್ಗದರ್ಶಕನಾಗಿರುವುದು ತುಂಬ ಉತ್ತಮವಾದ ವಿಷಯ. ಸದ್ಯಕ್ಕಿರುವ ಟೀಮ್ ಇಂಡಿಯಾ ಆಟಗಾರರು ಎಂಎಸ್ ಧೋನಿ ಕುರಿತಾಗಿ ದೊಡ್ಡಮಟ್ಟದ ಗೌರವವನ್ನು ಹೊಂದಿದ್ದಾರೆ. ಹೀಗಾಗಿ ಧೋನಿ ಮಾರ್ಗದರ್ಶಕನಾಗಿ ತಂಡದಲ್ಲಿರುವುದು ಬೇರೆ ಯಾವುದೇ ಆಟಗಾರರನ್ನು ಸಹ ತುಳಿಯುವುದಕ್ಕಾಗಲಿ ಅಥವಾ ಕಡೆಗಣಿಸುವುದಕ್ಕಾಗಲಿ ಅಲ್ಲ' ಎಂದು ಅರುಣ್ ಧುಮಾಲ್ ಸ್ಪಷ್ಟನೆ ನೀಡಿದ್ದಾರೆ.

ಆತನ ನಾಯಕತ್ವದಲ್ಲಿಯೇ ಭಾರತ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದು
'ಎಂಎಸ್ ಧೋನಿ ಟೀಮ್ ಇಂಡಿಯಾ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕ. ಅವರ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ ಉದ್ಘಾಟನಾ ಆವೃತ್ತಿಯ ಟಿ ಟ್ವೆಂಟಿ ವಿಶ್ವಕಪ್ ಟ್ರೋಫಿ, 2010 ಮತ್ತು 2016ರ ಏಷ್ಯಾಕಪ್ ಟ್ರೋಫಿಗಳು, ಪ್ರತಿಷ್ಠಿತ 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದುಕೊಂಡಿದೆ. ನಾಯಕನಾಗಿ ಧೋನಿಯವರ ಈ ದಾಖಲೆಗಳು ಅತ್ಯದ್ಭುತವಾಗಿದ್ದು ಇಂತಹ ಕ್ರಿಕೆಟಿಗನನ್ನು ಟೀಮ್ ಇಂಡಿಯಾ ಮೆಂಟರ್ ಆಗಿ ತಂಡದಲ್ಲಿ ಹೊಂದುವುದಕ್ಕೆ ಹೆಮ್ಮೆ ಎನಿಸುತ್ತದೆ' ಎಂದು ಅರುಣ್ ಧುಮಾಲ್ ಶ್ಲಾಘಿಸಿದ್ದಾರೆ.

ಕೊಹ್ಲಿ ನಾಯಕತ್ವ ಬಿಡುತ್ತಿರುವುದರ ಕುರಿತು ಕೂಡ ಅರುಣ್ ಧುಮಾಲ್ ಮಾತು
ಇನ್ನೂ ಮುಂದುವರಿದು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿರುವ ವಿರಾಟ್ ಕೊಹ್ಲಿ ನಿರ್ಧಾರದ ಕುರಿತು ಕೂಡ ಮಾತನಾಡಿರುವ ಅರುಣ್ ಧುಮಾಲ್ ಬಿಸಿಸಿಐ ಕಡೆಯಿಂದ ವಿರಾಟ್ ಕೊಹ್ಲಿ ಮೇಲೆ ನಾಯಕತ್ವವನ್ನು ತ್ಯಜಿಸುವ ವಿಚಾರವಾಗಿ ಯಾವುದೇ ಒತ್ತಡವಿರಲಿಲ್ಲ ಎಂದಿದ್ದಾರೆ. 'ವಿರಾಟ್ ಕೊಹ್ಲಿ ಉತ್ತಮವಾಗಿಯೇ ತಂಡವನ್ನು ಮುನ್ನಡೆಸುತ್ತಿದ್ದರು ಆದರೆ ತಮ್ಮ ಸ್ವಇಚ್ಛೆಯಿಂದಲೇ ಅವರು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಕೈಗೊಂಡಿದ್ದಾರೆಯೇ ಹೊರತು ಬಿಸಿಸಿಐ ಯಾವುದೇ ಒತ್ತಡವನ್ನು ಸಹ ಹೇರಿರಲಿಲ್ಲ' ಎಂದು ಅರುಣ್ ಧುಮಾಲ್ ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications