ಪ್ರಮುಖ ಬೆಳವಣಿಗೆಯಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2023-24ರ ಋತುವಿಗಾಗಿ ಭಾರತ ಕ್ರಿಕೆಟ್ ತಂಡದ ಆಟಗಾರರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರ ಕೇಂದ್ರ ಒಪ್ಪಂದಗಳನ್ನು ನವೀಕರಿಸದೇ ಹೊರಗಿಡಲಾಯಿತು.
ಟೀಮ್ ಮ್ಯಾನೇಜ್ಮೆಂಟ್ ಮತ್ತು ಬಿಸಿಸಿಐನಿಂದ ಸತತ ನಿರ್ದೇಶನಗಳ ಹೊರತಾಗಿಯೂ ಇಬ್ಬರೂ ಆಟಗಾರರು ತಮ್ ರಾಜ್ಯಗಳ ಪರ ರಣಜಿ ಪಂದ್ಯಗಳನ್ನು ಆಡದೆ ಹಿಂದೆ ಸರಿದಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಗಮನಾರ್ಹವಾಗಿ, ಶ್ರೇಯಸ್ ಅಯ್ಯರ್ ಬೆನ್ನುನೋವಿನ ಕಾರಣವೊಡ್ಡಿ ಬರೋಡಾ ವಿರುದ್ಧದ ಮುಂಬೈನ ರಣಜಿ ಟ್ರೋಫಿ 2024ರ ಕ್ವಾರ್ಟರ್ ಫೈನಲ್ ಪಂದ್ಯವನ್ನು ಆಡಲಿಲ್ಲ. ಆದರೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್ಸಿಎ) ವೈದ್ಯಕೀಯ ತಂಡವು ಅವರು ಆಡಲು ಫಿಟ್ ಎಂದು ಘೋಷಿಸಿತು.
ಇದೇ ವೇಳೆ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ ರಣಜಿ ಪಂದ್ಯವನ್ನು ತೊರೆದ ನಂತರ, ಅವರು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಅಕಾಡೆಮಿಯಲ್ಲೂ ಕಾಣಿಸಿಕೊಂಡರು. ಇದು ಭಾರತ ತಂಡದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರನ್ನು ಕೆರಳಿಸಿತು.
ರೇವ್ಸ್ಪೋರ್ಟ್ಜ್ ವರದಿಯ ಪ್ರಕಾರ, ಬಿಸಿಸಿಐ ಶ್ರೇಯಸ್ ಅಯ್ಯರ್ ಅವರ ಕೇಂದ್ರೀಯ ಒಪ್ಪಂದವನ್ನು ನವೀಕರಿಸದಿರುವಲ್ಲಿ ಈ ಅಂಶವು ಪ್ರಮುಖ ಪಾತ್ರ ವಹಿಸಿದೆ.

ಗಮನಾರ್ಹವಾಗಿ, ಮುಖ್ಯ ಆಯ್ಕೆಗಾರನ ಪಾತ್ರದಲ್ಲಿ ಒಪ್ಪಂದಗಳನ್ನು ಅಂತಿಮಗೊಳಿಸುವ ಜವಾಬ್ದಾರಿಯನ್ನು ಅಜಿತ್ ಅಗರ್ಕರ್ ಹೊಂದಿದ್ದರು. ಆದ್ದರಿಂದ ಗುತ್ತಿಗೆ ಒಪ್ಪಂದದ ಆಟಗಾರರ ಪಟ್ಟಿಯಿಂದ ಶ್ರೇಯಸ್ ಅಯ್ಯರ್ ಹೆಸರನ್ನು ಹೊರಗಿಡಲು ನಿರ್ಧರಿಸಿದರು.
ಸಂಪೂರ್ಣ ವಿವಾದದ ಬಳಿಕ, ಮುಂಬೈನ ಬಿಕೆಸಿ ಮೈದಾನದಲ್ಲಿ ತಮಿಳುನಾಡು ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್ಗೆ ಶ್ರೇಯಸ್ ಅಯ್ಯರ್ ತಮ್ಮನ್ನು ತಾವು ಲಭ್ಯವಾಗಿಸಿಕೊಂಡಿದ್ದಾರೆ.
29 ವರ್ಷದ ಶ್ರೇಯಸ್ ಅಯ್ಯರ್ 2023ರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಿದ 11 ಇನ್ನಿಂಗ್ಸ್ಗಳಿಂದ 66.25ರ ಸರಾಸರಿಯಲ್ಲಿ 530 ರನ್ ಗಳಿಸಿದರು. ಇದರಲ್ಲಿ 113.24 ಸ್ಟ್ರೈಕ್ ರೇಟ್ನೊಂದಿಗೆ ಎರಡು ಶತಕ ಮತ್ತು ಮೂರು ಅರ್ಧಶತಕ ಬಾರಿಸಿದರು.
ಆದಾಗ್ಯೂ, ಶ್ರೇಯಸ್ ಅಯ್ಯರ್ ಅವರ ಟೆಸ್ಟ್ ಸ್ವರೂಪದ ಫಾರ್ಮ್ 2023ರಿಂದ 12 ಇನ್ನಿಂಗ್ಸ್ಗಳಿಂದ 17ರ ಸರಾಸರಿಯಲ್ಲಿ ಕೇವಲ 187 ರನ್ ಗಳಿಸಿದ್ದಾರೆ. ಅಯ್ಯರ್ ತಮ್ಮ ಕೊನೆಯ 13 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ ಒಂದೇ ಒಂದು ಅರ್ಧಶತಕವನ್ನು ಗಳಿಸಿಲ್ಲ.
ಸದ್ಯ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಮುಂಬೈ ಮೂಲದ ಬ್ಯಾಟರ್ ಶ್ರೇಯಸ್ ಅಯ್ಯರ್ ಮೊದಲ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್ಗಳಲ್ಲಿ 104 ರನ್ ಗಳಿಸಿದರು. ಹೀಗಾಗಿ ಅವರ ಕಳಪೆ ಫಾರ್ಮ್ನಿಂದ ಮುಂದಿನ ಮೂರು ಪಂದ್ಯಗಳಿಗೆ ಕೈಬಿಡಲಾಯಿತು.