ಏಷ್ಯಾಕಪ್ ಟೂರ್ನಿಯ ಆರಂಭಕ್ಕೆ ಇನ್ನು ಉಳಿದಿರುವುದು ಬೆರಳೆಣಿಕೆಯ ದಿನಗಳು ಮಾತ್ರ. ಹಾಗಾಗಿ ಟೀಮ್ ಇಂಡಿಯಾದ ಆಟಗಾರರ ಬಳಗವನ್ನು ಯಾವಾಗಲ ಘೋಷಣೆ ಮಾಡಲಾಗುತ್ತದೆ ಯಾರೆಲ್ಲಾ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಪ್ರಶ್ನೆ ಇದ್ದೇ ಇತ್ತು. ಇದೀಗ ಈ ಪ್ರಶ್ನೆಗೆ ಉತ್ತರ ದೊರೆಯುವ ಕ್ಷಣಗಳು ಹತ್ತಿರವಾಗಿದೆ. ಆಗಸ್ಟ್ 21 ಸೋಮವಾರ ಮಧ್ಯಾಹ್ನವೇ ಇದಕ್ಕೆ ಅಧಿಕೃತವಾದ ಉತ್ತರ ದೊರೆಯಲಿದೆ.
ಇಂದು ಮಧ್ಯಾಹ್ನ 12 ಗಂಟೆಯ ಸಂದರ್ಭದಲ್ಲಿ ಅಜಿತ್ ಅಗರ್ರ್ ನೇತೃತ್ವದ ಆಯ್ಕೆ ಸಮಿತಿ ಹಾಗೂ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಜೊತೆಗೆ ಸಭೆ ನಡೆಸಲಿದೆ. ಈ ಸಭೆಯ ಬಳಿಕ ಮಧ್ಯಾಹ್ನ 1:30ಕ್ಕೆ ಮಾಧ್ಯಮಗೋಷ್ಠಿ ನಡೆಸಲಿದ್ದು ಅಲ್ಲಿ 17 ಆಟಗಾರರನ್ನು ಒಳಗೊಂಡ ಟೀಮ್ ಇಂಡಿಯಾ ಬಳಗವನ್ನು ಪ್ರಕಟಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಇನ್ನು ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾದ ಆಯ್ಕೆ ವಿಚಾರವಾಗಿ ಪ್ರಮುಖವಾಗಿರುವ ಕುತೂಹಲವೆಂದರೆ ಗಾಯಗೊಂಡಿರುವ ಸ್ಟಾರ್ ಆಟಗಾರರ ಕಮ್ಬ್ಯಾಕ್. ಜಸ್ಪ್ರೀತ್ ಬೂಮ್ರಾ ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗುವ ಮೂಲಕ ತಾನು ಫಿಟ್ ಎಂದು ಸಾಬೀತುಪಡಿಸಿದ್ದರೆ ಇತ್ತ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಐಯ್ಯರ್ ವಿಚಾರವಾಗಿ ಪ್ರಶ್ನೆಗಳು ಮುಂದುವರಿದೇ ಇದೆ. ಅವರಿಬ್ಬರ ಲಭ್ಯತೆಯೇ ಈಗ ಕುತೂಹಲ ಮೂಡಿಸಿದೆ.
ಇನ್ನು ವರದಿಗಳ ಆಧಾರದಲ್ಲಿ ಏಷ್ಯಾಕಪ್ ಟೂರ್ನಿಗೆ ಕೆಎಲ್ ರಾಹುಲ್ ಲಭ್ಯವಾಗುವ ಆಶಾವಾದ ಮೂಡಿಸಿದೆ. ಆದರೆ ಶ್ರೇಯಸ್ ಐಯ್ಯರ್ ಅವರ ಚೇತರಿಕೆ ನಿರೀಕ್ಷಿತ ಮಟ್ಟದ ವೇಗದಲ್ಲಿಲ್ಲದ ಕಾರಣ ಅವರು ಟೂರ್ನಿಗೆ ಆಯ್ಕೆಯಾಗುವುದು ಬಹುತೇಕ ಅನುಮಾನ ಎನ್ನಲಾಗಿದೆ. ಗಮನಾರ್ಹ ಅಂಶವೆದರೆ ಕೆಎಲ್ ರಾಹುಲ್ ಸ್ಥಾನಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಅವಕಾಶಕ್ಕಾಗಿ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಎದುರುನೋಡುತ್ತಿದ್ದಾರೆ. ಆದರೆ ಶ್ರೇಯಸ್ ಐಯ್ಯರ್ ಅವರ ನಾಲ್ಕನೇ ಕ್ರಮಾಂಕದಲ್ಲಿ ಯಾಔ ಆಟಗಾರ ಕೂಡ ಸ್ಥಾನವನ್ನು ಭದ್ರಪಡಿಸಿಕೊಂಡಿಲ್ಲ ಎಂಬುದು ತಂಡಕ್ಕೆ ತಲೆನೋವಾಗಿರುವ ಸಂಗತಿ.
ಇನ್ನು ಮುಂದಿನ ವಿಶ್ವಕಪ್ ದೃಷ್ಟಿಯಿಂದಲೂ ಏಷ್ಯಾಕಪ್ಗೆ ಆಯ್ಕೆಯಾಗಿರುವ ಈ ತಂಡ ಬಹಳ ಮಹತ್ವವಾಗಿರಲಿದೆ. ಪ್ರತಿಷ್ಠಿತ ಟೂರ್ನಿಗೆ ಈ ತಂಡ ಪ್ರತಿಬಿಂಬದಂತಿರಲಿದ್ದು ವಿಶ್ವಕಪ್ ತಂಡದ ಬಹುತೇಕ ಚಿತ್ರಣ ಈ ಮೂಲಕ ದೊರೆಯುವ ನಿರೀಕ್ಷೆಯಿದೆ.
ಸಂಭಾವ್ಯ ತಂಡ ರೋಹಿತ್ ಶರ್ಮಾ (ಸಿ), ಶುಭಮನ್ ಗಿಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಮತ್ತು ಮೊಹಮ್ಮದ್ ಸಿರಾಜ್.