ಬೆಂಗಳೂರು, ಜುಲೈ 10 : ಬಹಳಷ್ಟು ಕಾತರ, ನಿರೀಕ್ಷೆ ಹುಟ್ಟಿಸಿದ್ದ ಕ್ರಿಕೆಟ್ ಕೋಚ್ ಆಯ್ಕೆಯನ್ನು ಅಲ್ಪಕಾಲ ಮುಂದೂಡಲು ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಈ ಸಂಗತಿಯನ್ನು ಮಾಧ್ಯಮಗಳಿಗೆ ತಿಳಿಸಿದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರು, ಶ್ರೀಲಂಕಾ ಪ್ರವಾಸಕ್ಕೆ ಇನ್ನೂ ಸ್ವಲ್ಪ ಕಾಲವಿದ್ದು, ವಿರಾಟ್ ಕೊಹ್ಲಿ ಸೇರಿದಂತೆ ಇನ್ನೂ ಕೆಲವರನ್ನು ಈ ಕುರಿತು ಮಾತನಾಡಿಸಬೇಕಿದೆ. ನಂತರ ತೀರ್ಮಾನ ಪ್ರಕಟಿಸುತ್ತೇವೆ ಎಂದು ಸೋಮವಾರ ತಿಳಿಸಿದರು.

ಕ್ರಿಕೆಟ್ ತಂಡದ ಪ್ರಮುಖ ಕೋಚ್ ಹೆಸರನ್ನು ಸೋಮವಾರ ಸಂಜೆ ಪ್ರಕಟಿಸುವುದಾಗಿ ಬಿಸಿಸಿಐ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಸಲಹಾ ಸಮಿತಿಯಲ್ಲಿರುವ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಮತ್ತು ಲಂಡನ್ ನಿಂದ ಸಚಿನ್ ತೆಂಡೂಲ್ಕರ್ ಅವರು ಐವರ ಸಂದರ್ಶನ ಇಂದು ನಡೆಸಿದರು.
ರವಿ ಶಾಸ್ತ್ರಿ ಸೇರಿದಂತೆ ಮಾಜಿ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ಲಾಲ್ ಚಂದ್ ರಜಪೂತ್, ಆಸ್ಟ್ರೇಲಿಯಾದ ಟಾಮ್ ಮೂಡಿ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕೋಚ್ ಆಗಿದ್ದ ಇಂಗ್ಲೆಂಡ್ ನ ರಿಚರ್ಡ್ ಪಿಬಸ್ ಕೋಚ್ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಭಾರತದ ರವಿ ಶಾಸ್ತ್ರಿ ಪರವಾಗಿ ಮಾತುಗಳು ಕೇಳಿಬರುತ್ತಿವೆ.
ಅನಿಲ್ ಕುಂಬ್ಳೆ ಅವರಿಗೆ ಒಂದು ವರ್ಷದ ಕಾಲ ಕೋಚ್ ಹುದ್ದೆಯನ್ನು ನೀಡುವ ಮುನ್ನ ರವಿ ಶಾಸ್ತ್ರಿ ಅವರು 2014 ಮತ್ತು 2015ರಲ್ಲಿ ಇಂಗ್ಲೆಂಡ್ ಮತ್ತು ವಿಶ್ವಕಪ್ ಸಮಯದಲ್ಲಿ ಭಾರತದ ಟೀಮ್ ಡೈರೆಕ್ಟರ್ ಆಗಿದ್ದರು. ಈಗ ತಮ್ಮನ್ನು ಕಡೆಗಣಿಸಿದ್ದರಿಂದ ಕುಂಬ್ಳೆ ಅವರು ರಾಜೀನಾಮೆ ನೀಡಿದ್ದರು.