ನವದೆಹಲಿ, ಮೇ 20 : ಜೂನ್ ನಲ್ಲಿ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಆಡುವುದು ಬಿಡುವುದು ಮಹೇಂದ್ರಸಿಂಗ್ ಧೋನಿ ಅವರಿಗೆ ಬಿಟ್ಟ ವಿಚಾರ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ತಿಳಿಸಿದೆ. ದುರ್ಬಲ ಜಿಂಬಾಬ್ಬೆ ಪ್ರವಾಸಕ್ಕೆ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತಿದೆ.
ಧೋನಿ ಅವರನ್ನು ಆಯ್ಕೆ ಮಾಡಬೇಕೋ ಬೇಡವೋ ಎಂಬುವುದು ಇನ್ನು ಖಚಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಧೋನಿ ಆಡುವುದು ಬಿಡುವುದನ್ನು ಅವರ ವಿವೇಚನೆ ಬಿಟ್ಟಿರುವುದಾಗಿ ಸಂದೀಪ್ ಪಟೇಲ್ ನೇತೃತ್ವದ ಆಯ್ಕೆ ಸಮಿತಿ ಹೇಳಿದೆ. ಅವರು ಆಡಲು ಬಯಸಿದರೆ ಆಯ್ಕೆ ಮಾಡಲಾಗುವುದು ವಿಶ್ರಾಂತಿ ಬಯಸಿದರೆ ಅವರ ಬದಲಿಗೆ ಬೇರೆ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ.

ಈಗಾಗಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಶಿಖರ್ ಧವನ್ ಸೇರಿದಂತೆ ಇನ್ನು ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವುದು ಖಚಿತವಾಗಿದೆ. ಆದರೆ ಧೋನಿ ಅವರ ತೀರ್ಮಾನ ಇನ್ನು ಸ್ಪಷ್ಟವಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಒಂದು ವೇಳೆ ಧೋನಿ ಅವರು ಜಿಂಬಾಬ್ವೆ ಪ್ರವಾಸವನ್ನು ತಿರಸ್ಕರಿಸಿದರೆ, ಯುವ ಆಟಗಾರ ಅಜಿಂಕ್ಯ ರಹಾನೆ ಅವರು ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.
ಜಿಂಬಾಬ್ವೆ ಟೂರ್ನಿಗೆ ಹಿರಿಯ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶ ನೀಡಲಾಗುತ್ತಿದೆ. ಮುರುಳಿ ವಿಜಯ್ ಅವರು ಕಳೆದ ವರ್ಷ ಅಜಿಂಕ್ಯ ರಹಾನೆ ಅವರ ನೇತೃತ್ವದಲ್ಲಿ ಜಿಂಬಾಬ್ವೆ ವಿರುದ್ಧ ಕೊನೆ ಪಂದ್ಯವನ್ನು ಆಡಿದ್ದರು. ಈಗ ಮತ್ತೆ ಈ ಟೂರ್ನಿಗೆ ವಿಜಯ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಇನ್ನು ಬೌಲಿಂಗ್ ವಿಭಾಗಕ್ಕೆ ಅನುಭವಿ ವೇಗಿ ಆಶೀಶ್ ನೆಹ್ರಾ ಅವರು ಸ್ನಾಯುಸೆಳೆತಕ್ಕೆ ಒಳಗಾಗಿದ್ದು ಅವರಿಗೆ 4 ರಿಂದ 5 ವಾರಗಳು ವಿಶ್ರಾಂತಿ ಅಗತ್ಯವಿರುವುದರಿಂದ ಅವರನ್ನು ಕೈಬಿಡಬಹುದು. ಮತ್ತೊಬ್ಬ ವೇಗಿ ಜಸ್ಪ್ರಿತ್ ಬೂಮ್ರಾ ಅವರನ್ನು ಟಿ20 ಸರಣಿಗೆ ಆಯ್ಕೆ ಮಾಡುವ ಸಂಭವವಿದೆ.
ಇದರಿಂದ ಮಹಮ್ಮದ್ ಶಮಿ, ಸಂದೀಪ್, ಶರ್ಮ, ಮೋಹಿತ್ ಶರ್ಮಾ ಅವರನ್ನು ಬೌಲಿಂಗ್ ವಿಭಾಗಕ್ಕೆ ಆಯ್ಕೆಯಾಗುವ ಸಾಧ್ಯತೆಗಳು ಇವೆ. ಸ್ಪಿನ್ ವಿಭಾಗಕ್ಕೆ ಐಪಿಎಲ್ 2016 ನಲ್ಲಿ ಮ್ಯಾಜಿಕ್ ಮಾಡುತ್ತಿರುವ ಮುರುಘನ್ ಅಶ್ವಿನ್, ಕೃನಾಲ್ ಪಾಂಡ್ಯಾ, ಅಮಿತ್ ಮಿಶ್ರಾ, ಪಿಯುಷ್ ಚಾವ್ಲಾ ಅವರ ನಡುವೆ ಪೈಪೋಟಿ ನಡೆದಿದೆ. ವಿಕೆಟ್ ಕೀಪಿಂಗ್ ವಿಭಾಗದಲ್ಲಿ ಕೆಎಲ್ ರಾಹುಲ್ ಹಾಗೂ ದಿನೇಶ್ ಕಾರ್ತಿಕ್ ಹೆಸರು ಕೇಳಿ ಬಂದಿದೆ.
ಹರಾರೆ ಸ್ಪೋರ್ಟ್ಸ್ ಮೈದಾನದಲ್ಲಿ ಜೂನ್ 11 ರಿಂದ ಜೂನ್ 20 ರವರೆಗೆ 3 ಏಕದಿನ ಹಾಗೂ 3 ಟ್ವೆಂಟಿ20 ಪಂದ್ಯಗಳು ನಡೆಯಲಿವೆ.