
ಬೆಂಗಳೂರು, ಮಾರ್ಚ್ 20: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಮುನ್ನಡೆಯಲ್ಲಿದ್ದ ಭಾರತ 2-3ರಿಂದ ಐದು ಪಂದ್ಯಗಳ ಸರಣಿಯನ್ನು ಸೋತಿತ್ತು. ಇದು 2019ರ ಐಸಿಸಿ ವಿಶ್ವಕಪ್ ಗೆಲುವಿನ ನೆಲೆಯಲ್ಲಿ ವಿರಾಟ್ ಕೊಹ್ಲಿ ಬಳಗಕ್ಕೆ ಎಚ್ಚರಿಕೆ ಗಂಟೆ ಎಂದು ಟೀಮ್ ಇಂಡಿಯಾ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.
ತವರಿನಲ್ಲಿ ನಡೆದಿದ್ದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಭಾರತ ಮೊದಲೆರಡು ಪಂದ್ಯ ಗೆದ್ದು ಸರಣಿ ಗೆಲುವಿನ ಮುನ್ಸೂಚನೆ ನೀಡಿತ್ತು. ಆದರೆ ಅನಂತರದ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತಾ ಸಾಗಿದ ಪ್ರವಾಸಿ ಆಸ್ಟ್ರೇಲಿಯಾ ಸರಣಿಯನ್ನು 3-2ರಿಂದ ಗೆದ್ದು ಭಾರತಕ್ಕೆ ಆಘಾತ ನೀಡಿತ್ತು.
ಭಾರತದ ಈ ಸೋಲು ಮೇ 30ರಿಂದ ಇಂಗ್ಲೆಂಡ್ನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ತಂಡಕ್ಕೆ ಎಚ್ಚರಿಕೆ ನೀಡಿದಂತಿದೆ ಎಂದು ದ್ರಾವಿಡ್ ಅಭಿಪ್ರಾಯಿಸಿದ್ದಾರೆ. 'ನಾವು ವಿಶ್ವಕಪ್ನಲ್ಲಿ ಪಾಲ್ಗೊಂಡು ಸುಲಭವಾಗಿ ಗೆದ್ದು ಬರುತ್ತೇವೆ ಎಂಬ ಕಲ್ಪನೆಯಿರುತ್ತದೆ. ಆದರೆ ಇಂಥ ಸೋಲು ನಮ್ಮನ್ನು ಎಚ್ಚರಿಸುತ್ತವೆ' ಎಂದು ರಾಹುಲ್ ತಿಳಿಸಿದರು.
'ಹಾಗೆ ನೋಡಿದರೆ ಆಸೀಸ್ ವಿರುದ್ಧದ ಸರಣಿ ಸೋಲು ಒಂದರ್ಥದಲ್ಲಿ ಒಳ್ಳೆಯದೆ ಆಯ್ತು. ಯಾಕೆಂದರೆ ಆ (ಆಸ್ಟ್ರೇಲಿಯಾ ವಿರುದ್ಧದ) ಸೋಲು ನಾವು ವಿಶ್ವಕಪ್ನಲ್ಲಿ ತುಂಬಾ ತುಂಬಾ ಚೆನ್ನಾಗಿ ಆಡಬೇಕು ಅನ್ನೋದನ್ನು ನಮಗೆ ಎಚ್ಚರಿಸುತ್ತದೆ, ನೆನಪಿಸುತ್ತದೆ' ಎಂದು ಇಎಸ್ಪಿಎನ್ ಕ್ರಿಕ್ ಇನ್ಫೋ ಜೊತೆ ಮಾತನಾಡುತ್ತ ದ್ರಾವಿಡ್ ವಿವರಿಸಿದರು.