
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 13ನೇ ಆವೃತ್ತಿಯಲ್ಲಿ ಪ್ಲೇ ಆಫ್ ತಲುಪಲು ಕಷ್ಟಪಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳಿಗೆ ಕಹಿ ಸುದ್ದಿ ಇಲ್ಲಿದೆ. ನಾಲ್ಕು ಬಾರಿ ಚಾಂಪಿಯನ್ ತಂಡ ಚೆನ್ನೈಸೂಪರ್ ಕಿಂಗ್ಸ್ ಆಘಾತದ ಮೇಲೆ ಆಘಾತ ಅನುಭವಿಸುತ್ತಿದ್ದು, ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವಾಯ್ನೆ ಬ್ರಾವೋ ಅವರು ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದು, ಗಾಯದ ಸಮಸ್ಯೆಯಿಂದ ಟೂರ್ನಮೆಂಟ್ ಮುಗಿಯುವ ಮುನ್ನವೇ ತಮ್ಮ ದೇಶಕ್ಕೆ ಹಾರಲಿದ್ದಾರೆ ಎಂದು ಚೆನ್ನೈ ತಂಡದ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಇನ್ನೇನು ಪಂದ್ಯ ಗೆಲ್ಲುವ ಉತ್ಸಾಹದಲ್ಲಿದ್ದ ಧೋನಿ ಬಳಗ ಕೊನೆ ಓವರ್ ನಲ್ಲಿ ಸೋಲು ಕಂಡಿತ್ತು. ಈ ಪಂದ್ಯದಲ್ಲಿ ಅನುಭವಿ ಆಲ್ ರೌಂಡರ್ ಡಿಜೆ ಬ್ರಾವೋ ಕೊನೆ ಓವರ್ ಏಕೆ ಬೌಲ್ ಮಾಡಲಿಲ್ಲ ಎಂಬುದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಿದ್ದರು. ಇದಕ್ಕೆ ಗಾಯದ ಸಮಸ್ಯೆ ಎಂದು ಉತ್ತರ ಸಿಕ್ಕಿತ್ತು.
ಇತ್ತೀಚೆಗೆ ಕೆರಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ನಾಯು ಸೆಳೆತಕ್ಕೀಡಾಗಿ ನೋವು ಅನುಭವಿಸುತ್ತಿರುವ ಬ್ರಾವೋ ಇನ್ನೂ ಗುಣಮುಖರಾಗಿಲ್ಲ. ಸಿಪಿಎಲ್ ಫೈನಲ್ ನಲ್ಲಿ ಬೌಲಿಂಗ್ ಕೂಡಾ ಮಾಡಲು ಆಗಿರಲಿಲ್ಲ. ಗಾಯದ ನಡುವೆಯೇ ಐಪಿಎಲ್ ಆಡಲು ಬಂದ ಬ್ರಾವೋ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ.
''ಬ್ರಾವೋ ಅವರ ಬಲ ತೊಡೆ ಸ್ನಾಯುಗಳ ಸೆಳೆತದಿಂದ ಬಳಲುತ್ತಿದ್ದಾರೆ. ಕೊನೆ ಓವರ್ ಬೌಲ್ ಮಾಡಲಾಗಲಿಲ್ಲ ಎಂಬ ಬೇಸರ ಅವರಲ್ಲೂ ಇದೆ. ಕೊನೆ ಓವರ್ ಸ್ಪೆಷಲಿಸ್ಟ್ ಆಗಿ ತಂಡದಲ್ಲಿ ಅವರನ್ನು ಬಳಸಲಾಗುತ್ತಿದೆ. ಆದರೆ ಈಗ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯಲು ಫಿಟ್ನೆಸ್ ಉಳಿಸಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಅವರ ಮುಂದಿದೆ. ಅವರ ಗಾಯದ ಬಗ್ಗೆ ವೈದ್ಯರು ನೀಡುವ ವರದಿ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ.ಅವರಿಗೆ ಕೆಲ ದಿನಗಳು ಅಥವಾ ವಾರದ ಮಟ್ಟಿಗೆ ವಿಶ್ರಾಂತಿ ಪಡೆಯಲು ಸೂಚಿಸುವ ಸಾಧ್ಯತೆಯಿದೆ'' ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಈಗ ಬ್ರಾವೋ ಅಲಭ್ಯರಾಗಿರುವುದನ್ನು ಚೆನ್ನೈ ತಂಡದ ಸಿಇಒ ಕಾಶಿ ವಿಶ್ವನಾಥನ್ ಖಚಿತಪಡಿಸಿದ್ದು, ಬ್ರಾವೋ ಆದಷ್ಟು ಬೇಗ ಚಿಕಿತ್ಸೆ ಪಡೆಯಲು ತಮ್ಮ ದೇಶಕ್ಕೆ ತೆರಳಲಿದ್ದಾರೆ ಎಂದಿದ್ದಾರೆ. 6 ಪಂದ್ಯಗಳಲ್ಲಿ 7 ರನ್, 6 ವಿಕೆಟ್ ಗಳಿಸಿದ ಬ್ರಾವೋಗೆ 2020ರ ಐಪಿಎಲ್ ಅತ್ಯಂತ ಕಳಪೆಯದ್ದಾಗಿತ್ತು.