
ದೆಹಲಿ ಜಿಲ್ಲಾ ಕ್ರಿಕೆಟ್ ಅಸಿಸಿಯೇಶನ್(ಡಿಡಿಸಿಎ) ಅಧ್ಯಕ್ಷ ರೋಹನ್ ಜೇಟ್ಲಿ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಮಾಜಿ ಕೇಂದ್ರ ಸಚಿವ ದಿ. ಅರುಣ್ ಜೇಟ್ಲಿ ಪುತ್ರನಾಗಿರುವ ರೋಹನ್ ಜೇಟ್ಲಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಲಾಗಿದ್ದು ಬಿಸಿಸಿಐಗೆ ದೂರು ದಾಖಲಾಗಿದೆ. ಜ್ಯೋತ್ಸ್ನಾ ಸಹನಿ ಎಂಬ ಮಹಿಳೆ ರೋಹನ್ ಜೇಟ್ಲಿ ವಿರುದ್ಧ ಈ ಆರೋಪವನ್ನು ಮಾಡಿದ್ದು ಬಿಸಿಸಿಐಗೆ ದೂರು ನೀಡಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಡಿಡಿಸಿಎ ನಿಧಿ ದುರ್ಬಳಕೆಯ ಆರೋಪಗಳು ಕೂಡ ಕೇಳಿ ಬಂದಿದೆ.
ಈ ಪ್ರಕರಣದ ಸಂತ್ರಸ್ತೆಗಾಗಿ ಕಾಯ್ದಿರಿಸಿದ ಕೊಠಡಿಗಳಿಗೆ ಡಿಡಿಸಿಎ ನಿಧಿಯಿಂದ ಹಣ ಪಾವತಿಸಲಾಗಿದೆ ಎಂದು ಕೂಡ ಆರೋಪಿಸಲಾಗಿದೆ. ಸಂಸ್ತ್ರಸ್ತ ಮಹಿಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ಗೆ ಈ ಮೇಲ್ ಮೂಲಕ ಈ ಬಗ್ಗೆ ವಿವರಣೆ ನೀಡಿದ್ದಾರೆ. ಈ ಬಗ್ಗೆ ಇನ್ನು ಕೂಡ ಪೊಲೀಸ್ ಪ್ರಕರಣ ದಾಖಲಾಗಿಲ್ಲ. ಮದುವೆಯ ನೆಪದಲ್ಲಿ ರೊಹನ್ ಜೇಟ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮೂರು ಪುಟಗಳ ಈಮೇಲ್ನಲ್ಲಿ ತನಗೆ ಜೀವ ಬೆದರಿಕೆಯನ್ನು ಕೂಡ ಒಡ್ಡಲಾಗಿದೆ ಎಂದಿರುವ ಜ್ಯೋತ್ಸ್ನಾ ಇಬ್ಬರು ಅಪರಿಚಿತ ವ್ಯಕ್ತಿಗಳು ಜೀವಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು ಅವರು ಈ ಸಂಬಂಧದ ಬಗ್ಗೆ ಯಾರಿಗೂ ತಿಳಿಸದಂತೆ ಹೇಳಿದ್ದರು ಎಂದು ಉಲ್ಲೇಖಿಸಿದ್ದಾರೆ.
ಇನ್ನು ಈ ಪ್ರಕರಣದ ವಿಚಾರವಾಗಿ ಬಿಜೆಪಿ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ರೋಹನ್ ಜೇಟ್ಲಿ ದೆಹಲಿ ಜಿಲ್ಲಾ ಕ್ರಿಕೆಟ್ ಅಸೊಸಿಯೇಶನ್ ಅಧ್ಯಕ್ಷ ಸ್ಥಾನದಿಂದ ತಕ್ಷಣವೇ ಬಿಸಿಸಿಐ ವಜಾಗೊಳಿಸಬೇಕು ಎಂದು ಒತ್ತಾಯಿಸಿರುವ ಸುಬ್ರಮಣಿಯನ್ ಸ್ವಾಮಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣದ ವಿಚಾರಣೆಗೂ ಆಗ್ರಹಿಸಿದ್ದಾರೆ.