ಬಾಂಗ್ಲಾದೇಶ ಕ್ರಿಕೆಟ್ ತಂಡದ ಜಗಳ ಈಗ ಬೀದಿಗೆ ಬಿದ್ದಿದೆ. ತಂಡದ ಅನುಭವಿ ಆಟಗಾರ ತಮಿಮ್ ಇಕ್ಬಾಲ್ ಅವರನ್ನು ವಿಶ್ವಕಪ್ ತಂಡದಿಂದ ಹೊರಗಿಟ್ಟ ಬಳಿಕ ತಮಿಮ್ ಇಕ್ಬಾಲ್ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವಿರುದ್ಧವೇ ಹರಿಹಾಯ್ದಿದ್ದರು. ಇದೀಗ ತಂಡದ ನಾಯಕ ಶಕೀಬ್ ಅಲ್ ಹಸನ್ ಅನುಭವಿ ಆಟಗಾರನ ವಿರುದ್ಧ ವಾಕ್ಸಮರ ನಡೆಸಿದ್ದಾರೆ.
ಅನುಭವಿ ಆಟಗಾರಗಿ ತಂಡದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮನಸ್ಥಿತಿಯನ್ನು ತಮಿಮ್ ಇಕ್ಬಾಲ್ ಹೊಂದಿಲ್ಲ ಎಂದು ಶಕೀಬ್ ಕಿಡಿಕಾರಿದ್ದಾರೆ. ಆತ ತಂಡದ ಆಟಗಾರನಾಗಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಗೆ ತಮಿಮ್ ಇಕ್ಬಾಲ್ ಅವರನ್ನು ಹೊರಗಿಟ್ಟು ತಂಡವನ್ನು ಪ್ರಕಟಿಸಲಾಗಿದೆ.

ಬುಧವಾರ ತಮೀಮ್ ಇಕ್ಬಾಲ್ ತನ್ನ ಅಧಿಕೃತ ಫೇಸ್ಬುಕ್ ಪುಟದಲ್ಲಿ ವೀಡಿಯೊವೊಣದನ್ನು ಹಂಚಿಕೊಂಡಿದ್ದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವಿರುದ್ಧ ಕಿಡಿಕಾರಿದ್ದಾರೆ. ಮಂಡಳಿ ತನ್ನೊಂದಿಗೆ 'ಕೊಳಕು' ಆಟಗಳನ್ನು ಆಡಿದೆ ಎಂದು ಅವರು ಟೀಕಿಸಿದರು. ಬ್ಯಾಟಿಂಗ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಬದಲಿಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಂತೆ ತನ್ನಲ್ಲಿ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಕೇಳಿಕೊಂಡಿದ್ದರು ಎಂದು ತಮಿಮ್ ಇಕ್ಬಾಲ್ ಮಾಧ್ಯಮಗಳ ಜೊತೆಗೆ ಜೊತೆಗೆ ಹೇಳಿಕೊಂಡಿದ್ದರು.
ಈ ನಿರ್ಧಾರಕ್ಕೆ ತಮಿಮ್ ಇಕ್ಬಾಲ್ ಅತೃಪ್ತಿಗೊಂಡು ಪ್ರಸ್ತಾವನೆಯನ್ನು ನಿರಾಕರಿಸಿದ್ದಾರೆ. ಹೀಗಾಗಿ ವಿಶ್ವಕಪ್ಗೆ ಅವರ ಆಯ್ಕೆಯ ಬಗ್ಗೆ ನಿರ್ಧಾರವನ್ನು ಮಂಡಳಿಗೆ ಬಿಟ್ಟರು. ಆದರೆ ತಂಡದ ಆಟಗಾರನಿಂದ ಬಂದಿರುವ ಈ ಹೇಳಿಕೆಗಳಿಂದಾಗಿ ಶಕೀಬ್ ಅಲ್ ಹಸನ್ ಅಚ್ಚರಿಗೆ ಒಳಗಾಗಿದ್ದು ಬಹಿರಂಗವಾಗಿಯೇ ಈ ವಿಚಾರವಾಗಿ ಟೀಕಿಸಿದ್ದಾರೆ. ಈ ಸಂದರ್ಭದಲ್ಲಿ ಶಕೀಬ್ ಆಟಗರರು ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆ ಗಮನ ನೀಡುವುದನ್ನು ಬದಿಗಿಟ್ಟು ತಂಡಕ್ಕಾಗಿ ಅತ್ಯುತ್ತಮ ಕೊಡುಗೆ ನೀಡಬೇಕು ಎಂದಿದ್ದಾರೆ.
"ಖಂಡಿತವಾಗಿಯೂ ಈ ಮಾತುಗಳನ್ನು ತಮಿಮ್ಗೆ ಅರ್ಹವಾದ ವ್ಯಕ್ತಿಯೇ ಹೇಳಿರುತ್ತಾರೆ ಎಂದು ನಾನು ನಂಬುತ್ತೇನೆ. ಅದನ್ನು ಯಾರೇ ಹೇಳಿದ್ದರೂ ಅದು ತಂಡದ ಧ್ವನಿಯಾಗಿದೆ. ಒಂದು ಪಂದ್ಯಕ್ಕಾಗಿ ತಂಡದ ಸಂಯೋಜನೆಗಳನ್ನು ಮಾಡುವಾಗ ಸಾಕಷ್ಟು ವಿಚಾರಗಳು ಬರುತ್ತವೆ. ಅದನ್ನು ಯಾರಾದರೂ ಅವರಿಗೆ ಹೇಳಿದ್ದರೆ ಅದರಲ್ಲಿ ತಪ್ಪೇನಿದೆ? ಅಂಥಾ ನಿಲುವನ್ನು ನಾವು ತೆಗೆದುಕೊಳ್ಳಬಾರದಾ? ನೀವು ಏನು ಬೇಕೋ ಅದನ್ನು ಮಾಡು ಎಂದು ಹೇಳಲು ಮಾತ್ರ ನಾನಿರುತ್ತೇನಾ? ಇಲ್ಲಿ ತಂಡ ಮೊದಲಾ ಅಥವಾ ವ್ಯಕ್ತಿಯಾ? ಎಂದು ಶಕೀಬ್ ಅಲ್ ಹಸನ್ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಶಕೀಬ್ ಅಲ್ ಹಸನ್ ಟೀಮ್ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಅವರನ್ನು ಉಲ್ಲೇಖಿಸಿ ಉದಾಹರಣೆ ನೀಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ವೃತ್ತಿ ಜೀವನ ಆರಂಭಿಸಿದ ರೋಹಿತ್ ಶರ್ಮಾ 2013ರ ಬಳಿಕ ಆರಂಭಿಕನಾಗಿ ಕಣಕ್ಕಿಳಿದ ಅದ್ಭುತ ಯಶಸ್ಸು ಸಾಧಿಸಿದ್ದಾರೆ. 5ನೇ ಬಾರಿಗೆ ಏಕದಿನ ವಿಶ್ವಕಪ್ ಆಡಲು ಸಿದ್ದವಾಗಿರುವ ಶಕೀಬ್ ಅಲ್ ಹಸನ್ ಅನುಭವಿ ಆಟಗಾರ ಮಿಮ್ ಅವರ ವರ್ತನೆಯನ್ನು ಬಾಲಿಶ ಎಂದು ಟೀಕಿಸಿದ್ದಾರೆ.
"ರೋಹಿತ್ ಶರ್ಮಾ ಅವರಂತಾ ಆಟಗಾರ ತಮ್ಮ ವೃತ್ತಿ ಜೀವನವನ್ನು 7ನೇ ಕ್ರಮಾಂಕದಿಂದ ಆರಂಭಿಸಿ ಆರಂಭಿಕನ ಹಂತದವರೆಗೆ ಬೆಳೆಸಿದ್ದು 10,000ಕ್ಕೂ ಅಧಿಕ ರನ್ಗಳನ್ನು ಗಳಿಸಿದ್ದಾರೆ. ಆತ ಕೆಲ ಸಂದರ್ಭಗಳಲ್ಲಿ 3 ಅಥವಾ 4ನೇ ಕ್ರಮಾಂಕದಲ್ಲಿಯೂ ಕಣಕ್ಕಿಳಯುತ್ತಾರೆ. ಅದು ಆತನಿಗೆ ಸಮಸ್ಯೆಯಾಗುತ್ತದೆಯಾ? ಅದು ನನ್ನ ಬ್ಯಾಟ್ ಬೇರೆ ಯಾರು ಕೂಡ ಅಲ್ಲಿ ಆಡಬಾರದು ಎನ್ನುವುದು ಬಾಲಿಶವಾದ ವರ್ತನೆ. ನನ್ನ ತಂಡದಲ್ಲಿ ಆಟಗಾರರು ಯಾವ ಕ್ರಮಾಂಕದಲ್ಲಿಯಾದರೂ ಆಡಬೇಕು. ತಂಡವೇ ಮೊದಲು. ತಂಡ ಸೋತು ನೀವು 100 ಅಥವಾ 200 ರನ್ಗಳನ್ನು ಗಳಿಸಿದರೆ ಅದಕ್ಕೆ ಅರ್ಥವಿಲ್ಲ. ವೈಯಕ್ತಿಕ ದಾಖಲೆಗಳಿಂದ ನೀವೇನು ಮಾಡುತ್ತೀರಿ?" ಎಂದು ಶಕೀಬ್ ಅಲ್ ಹಸನ್ ಟೀಕಿಸಿದ್ದಾರೆ.