ಭಾರತ ಮತ್ತು ಬಾಂಗ್ಲಾದೇಶ ನಡುವೆ ಎರಡು ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು 280 ರನ್ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಇದೀಗ ಈ ಸರಣಿಯ ಎರಡನೇ ಟೆಸ್ಟ್ ಪಂದ್ಯ ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗಲಿದ್ದು, ಅಕ್ಟೋಬರ್ 1 ರವರೆಗೆ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳಿಗೆ ಅಘಾತಕಾರಿ ಸುದ್ದಿವೊಂದು ಬಂದಿದೆ.

ಕಾನ್ಪುರ ಟೆಸ್ಟ್ಗೆ ಮುನ್ನ ಬಾಂಗ್ಲಾದೇಶದ ಆಲ್ರೌಂಡರ್ ಹೊರಗುಳಿಯುವ ಸಾಧ್ಯತೆಯಿದೆ. ಗಾಯದ ಸಮಸ್ಯೆಯಿಂದಾಗಿ ಶಕೀಬ್ ಅಲ್ ಹಸನ್ ಕಾನ್ಪುರ ಟೆಸ್ಟ್ನಿಂದ ಹೊರಗುಳಿಯಬಹುದು. ಈ ಬಗ್ಗೆ ಇನ್ನೂ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.
ಆದರೆ ಬಾಂಗ್ಲಾದೇಶದ ವೈದ್ಯಕೀಯ ತಂಡವು ಪರೀಕ್ಷಿಸಿದ ನಂತರ ಶಕೀಬ್ ಕಾನ್ಪುರ ಟೆಸ್ಟ್ನಲ್ಲಿ ಆಡಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲಿದೆ. ಈ ಅಪಾಯಕಾರಿ ಆಲ್ರೌಂಡರ್ ಕಾನ್ಪುರ ಟೆಸ್ಟ್ನಿಂದ ಹೊರಗುಳಿದರೆ ಭಾರತಕ್ಕೆ ಲಾಭವಾಗಲಿದೆ.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಭಾರತ-ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದಲ್ಲಿ ಶಕೀಬ್ ಅಲ್ ಹಸನ್ ಗಾಯಗೊಂಡಿದ್ದಾರೆ. ಭಾರತ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಬೌಲಿಂಗ್ನಲ್ಲಿ ಶಕೀಬ್ ಅವರ ಬೆರಳಿಗೆ ಚೆಂಡು ಬಡಿದಿದೆ. ವೇಗದ ಚೆಂಡಿನ ಹೊಡೆತಕ್ಕೆ ಶಕೀಬ್ ಗಾಯಗೊಂಡಿದ್ದು, ಮೈದಾನದಲ್ಲಿ ಚಿಕಿತ್ಸೆ ಪಡೆದು ಮತ್ತೆ ಆಟವಾಡಲು ಆರಂಭಿಸಿದರು.
ಆದರೆ ಇದೀಗ ಬಾಂಗ್ಲಾದೇಶದ ವೈದ್ಯಕೀಯ ತಂಡವು ಶಕೀಬ್ ಅಲ್ ಹಸನ್ ಅವರ ಗಾಯವನ್ನು ಪರೀಕ್ಷಿಸುತ್ತಿದೆ. ಎಕ್ಸ್-ರೇ ವರದಿಯ ನಂತರ ಅವರು ಕಾನ್ಪುರ ಟೆಸ್ಟ್ನಲ್ಲಿ ಆಡಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು 2-0 ಅಂತರದಿಂದ ಸೋಲಿಸಲು ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ತನ್ನ ಅಗ್ರ ಸ್ಥಾನವನ್ನು ಉಳಿಸಿಕೊಳ್ಳಲು ರಣತಂತ್ರ ರೂಪಿಸಿದೆ. ಕಾನ್ಪುರ ಟೆಸ್ಟ್ನಲ್ಲಿ ಕುಲ್ದೀಪ್ ಯಾದವ್ ಅವರನ್ನು ಆಡಿಸುವ ಬಗ್ಗೆ ಚರ್ಚೆ ನಡೆದಿದೆ. ಏಕೆಂದರೆ ಕುಲ್ದೀಪ್ ಯಾದವ್ ಮೂಲತಃ ಕಾನ್ಪುರದವರು.
ಮತ್ತೊಂದೆಡೆ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟಿಂಗ್ ವೈಫಲ್ಯದ ನಂತರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕಾನ್ಪುರದಲ್ಲಿ ಅದ್ಭುತ ಪ್ರದರ್ಶನ ನೀಡುವ ನಿರೀಕ್ಷೆಯಿದೆ.