
ಬರ್ಮಿಂಗ್ಹ್ಯಾಮ್, ಜುಲೈ 01: ಆಲ್ರೌಂಡರ್ ಶಾಕಿಬ್ ಅಲ್ ಹಸನ್ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಏಕಮಾತ್ರ ಆಟಗಾರ ಎಂದಿರುವ ಬಾಂಗ್ಲಾದೇಶ ತಂಡದ ನಾಯಕ ಮಶ್ರಫೆ ಮೊರ್ತಾಝ, ಭಾರತ ವಿರುದ್ಧದ ಪಂದ್ಯದಲ್ಲಿ ಶಾಕಿಬ್ ಅಬ್ಬರಿಸಲಿದ್ದಾರೆ ಎಂದು ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಮಿಫೈನಲ್ಸ್ ಅರ್ಹತೆ ಗಿಟ್ಟಿಸುವತ್ತ ಮುನ್ನಡೆಯುತ್ತಿದ್ದು, ಮಂಗಳವಾರ ನಡೆಯಲಿರುವ ಹೈ ವೋಲ್ಟೇಜ್ ಕದನದಲ್ಲಿ ಮುಖಾಮುಖಿಯಾಗಲಿವೆ. ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯದಂತೆ ಇಂಡೊ-ಬಾಂಗ್ಲಾ ಕದನ ಕೂಡ ಅಭಿಮಾನಿಗಳ ಕುತೂಹಲ ಹಿಡಿದಿಟ್ಟಿದೆ.
ಇನ್ನು ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಶಾಕಿಬ್ ಅಲ್ ಹಸನ್, ಅತಿ ಹೆಚ್ಚು ರನ್ ಗಳಿಸಿದವರ ಪೈಕಿ 3ನೇ ಸ್ಥಾನದಲ್ಲಿದ್ದು, 95.20ರ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಎಡಗೈ ಬ್ಯಾಟ್ಸ್ಮನ್ ಟೂರ್ನಿಯಲ್ಲಿ ಎರಡು ಶತಕಗಳನ್ನೂ ಬಾರಿಸಿ, ಮೂರು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಅಂದಹಾಗೆ ಬಾಂಗ್ಲಾ ತಂಡಕ್ಕೆ ತನ್ನ ಪಾಲಿನ ಉಳಿದೆರಡು ಲೀಗ್ ಪಂದ್ಯಗಳನ್ನು ಗೆದ್ದರೆ ಮಾತ್ರವೇ ಸೆಮಿಫೈನಲ್ಸ್ ತಲುಪುವ ಅವಕಾಶ ಹೊಂದಿದೆ.
ಬಾಂಗ್ಲಾದೇಶ ತಂಡ ಸದ್ಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದೆ. ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಕ್ರಮವಾಗಿ 4ನೇ ಮತ್ತು 5ನೇ ಸ್ಥಾನದಲ್ಲಿವೆ. ಹೀಗಾಗಿ ಭಾರತ ವಿರುದ್ಧ ಬಾಂಗ್ಲಾ ಸೋಲುಂಡರೆ ಪ್ರಶಸ್ತಿ ರೇಸ್ನಿಂದ ಹೊರಬೀಳಲಿದೆ. ಭಾರತ ವಿರುದ್ಧದ ಪಂದ್ಯದ ಬಳಿಕ ಬಾಂಗ್ಲಾ ತಂಡ ಪಾಕಿಸ್ತಾನ ತಂಡವನ್ನು ಎದುರಾಗಲಿದೆ.
"ತಂಡದ ಯಶಸ್ಸಿಗಾಗಿ ಶಾಕಿಬ್ ತಮ್ಮ ಕೈಲಾದ ಎಲ್ಲಾ ಪ್ರಯತ್ನವನ್ನು ಮಾಡುತ್ತಿದ್ದಾರೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲಿಯೂ ಗಣನೀಯ ಕೊಡುಗೆ ಸಲ್ಲಿಸುತ್ತಿದ್ದಾರೆ. ನನ್ನ ಪಾಲಿಗೆ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಶಾಕಿಬ್ ಅತ್ಯುತ್ತಮ ಆಟಗಾರ,'' ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಾಕಿಬ್ ಹೇಳಿದ್ದಾರೆ.
"ಶಾಕಿಬ್ ಅವರಲ್ಲಿ ಇನ್ನು ಸಾಕಷ್ಟು ಆ ಬಾಕಿ ಇದೆ. ಭಾರತ ವಿರುದ್ಧದ ಪಂದ್ಯದಲ್ಲೂ ಅವರು ಸ್ಥಿರತೆ ಕಾಯ್ದುಕೊಳ್ಳುತ್ತಾರೆಂದು ಆಶಿಸುತ್ತೇನೆ. ಭಾರತ ವಿರುದ್ಧ ಇಂಗ್ಲೆಂಡ್ ಆಡಿದ ಕುರಿತಾಗಿ ಆಲೋಚಿಸುವುದಿಲ್ಲ. ಏಕೆಂದರೆ ಭಾರತದ ಸ್ಪಿನ್ನರ್ಗಳ ಎದುರು ನಾವು ಯಶಸ್ಸು ಗಳಿಸಬೇಕಿದೆ. ನಮ್ಮ ಬ್ಯಾಟಿಂಗ್ ಕೂಡ ಉತ್ತಮವಾಗಿದ್ದು, ನಮ್ಮ ಯೋಜನೆಗಳಿಗೆ ಬದ್ಧವಾಗಿ ಆಡಲಿದ್ದೇವೆ,'' ಎಂದು ಮಶ್ರಫೆ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಮತ್ತೊಂದೆಡೆ ಟೀಮ್ ಇಂಡಿಯಾಗೆ ಇನ್ನೆರಡು ಲೀಗ್ ಪಂದ್ಯಗಳು ಬಾಕಿ ಇದ್ದು, ಒಂದರಲ್ಲಿ ಗೆದ್ದರೂ ಸುಲಭವಾಗಿ ಅಂತಿಮ ನಾಲ್ಕರ ಘಟ್ಟಕ್ಕೆ ಕಾಲಿಡಲಿದೆ. ಟೂರ್ನಿಯಲ್ಲಿ ಅಜೇಯವಾಗಿ ನಾಕ್ಔಟ್ ಹಂತಕ್ಕೆ ಮುನ್ನುಗ್ಗುತ್ತಿದ್ದ ಭಾರತ ತಂಡಕ್ಕೆ ಇದೇ ಭಾನುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 31 ರನ್ಗಳ ಸೋಲುಣಿಸಿತ್ತು.
2007ರ ವಿಶ್ವಕಪ್ ಟೂರ್ನಿಯಲ್ಲಿ ರಾಹುಲ್ ದ್ರಾವಿಡ್ ಸಾರಥ್ಯದ ಭಾರತ ತಂಡದ ವಿರುದ್ಧ ಬಾಂಗ್ಲಾದೇಶ ತಂಡ ಅಚ್ಚರಿಯ ಗೆಲುವು ದಾಖಲಿಸಿತ್ತು. ಈ ಸೋಲಿನಿಂದಾಗಿ ಭಾರತಕ್ಕೆ ಲೀಗ್ ಹಂತದಲ್ಲೇ ಸ್ಪರ್ಧೆಯಿಂದ ಹೊರಬೀಳುವಂತಾಗಿತ್ತು.