
ಪುಣೆ, ಮಾರ್ಚ್ 28: ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗೆ ಸಂಬಂಧಿಸಿ ಸುಳ್ಳು ಸುದ್ದಿ ಹರಿದಾಡುತ್ತಿರುವುದಕ್ಕಾಗಿ ಧೋನಿ ಪತ್ನಿ ಸಾಕ್ಷಿ ಧೋನಿ ಕಿಡಿಯಾಗಿದ್ದಾರೆ. ಸಾಕ್ಷಿ ಯಾವ ವಿಚಾರದ ಬಗ್ಗೆ ಬೇಸರಗೊಂಡಿದ್ದಾರೆ ಎನ್ನೋದನ್ನು ಸ್ಪಷ್ಟಪಡಿಸಿಲ್ಲ. ಆದರೆ ಟ್ವಿಟರ್ ಮೂಲಕ ಸಾಕ್ಷಿ ಅಸಮಾಧಾನ ಹೊರ ಹಾಕಿರುವುದಂತೂ ನಿಜ.
ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಭಾರತದ ಹಲವಾರು ಕ್ರೀಡಾಪಟುಗಳು ಆರ್ಥಿಕ, ಆಹಾರ, ಔಷಧ ಸಹಾಯ ನೀಡಿದ್ದರು. ಆದರೆ ದೊಡ್ಡ ಮಟ್ಟದಲ್ಲಿ ಆದಾಯ ಹೊಂದಿರುವ ಎಂಎಸ್ ಧೋನಿ ಕೇವಲ 1 ಲಕ್ಷ ರೂ. ಅಷ್ಟೇ ನೆರವು ನೀಡಿದ್ದರು. ಧೋನಿಯ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಯೂ ವ್ಯಕ್ತವಾಗಿತ್ತು.
ಬಹುಶಃ ಧೋನಿಗೆ ಬರುತ್ತಿರುವ ಟೀಕೆಗೆ ಸಾಕ್ಷಿ ಬೇಸರಗೊಂಡಿದ್ದಾರೆ ಅನ್ನಿಸುತ್ತೆ. ಮಾರ್ಚ್ 27ರಂದು ಟ್ವೀಟ್ ಮಾಡಿರುವ ಸಾಕ್ಷಿ, 'ಇಂಥ ಸೂಕ್ಷ್ಮ ಸಂದರ್ಭದಲ್ಲಿ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸೋದನ್ನು ನಿಲ್ಲಿಸಬೇಕು. ನಿಮಗೆ ನಾಚಿಕೆಯಾಗಬೇಕು. ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ ಎಲ್ಲಿ ಹೋಗಿದೆ ಎಂದು ನನಗೆ ಅಚ್ಚರಿಯಾಗುತ್ತಿದೆ,' ಎಂದು ಬರೆದುಕೊಂಡಿದ್ದಾರೆ.
ಕೊರೊನಾ ವಿರುದ್ಧದ ಹೋರಾಟಕ್ಕೆ ನೆರವಾಗಲೆಂದು ಪುಣೆ ಮೂಲದ ಚಾರಿಟಿ ಸಂಸ್ಥೆ 'ಕೆಟ್ಟೋ'ಗೆ ಧೋನಿ 1 ಲಕ್ಷ ರೂ.ಗಳ ಕೊಡುಗೆ ನೀಡಿದ್ದರು ಎಂದು ಇದಕ್ಕೂ ಮುನ್ನ ಎಲ್ಲಾ ಮಾಧ್ಯಮಗಳು ಸುದ್ದಿ ಪ್ರಕಟಿಸಿದ್ದವು. ಅದಾಗಿ ಸಾಮಾಜಿಕ ಜಾಲತಾಣದಲ್ಲಿ ಧೋನಿಗೆ ಟೀಕೆಗಳ ಸುರಿಮಳೆ ಬಂದಿತ್ತು.