
ನವದೆಹಲಿ, ನವೆಂಬರ್ 17: ಮಂಗಳವಾರದಿಂದ ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ರಣಜಿ ಟ್ರೋಫಿ ಎಲೈಟ್ ಗ್ರೂಪಿ 'ಬಿ'ಯ ಬೆಂಗಾಲ್ ಮತ್ತು ಕೇರಳ ನಡುವಿನ ಪಂದ್ಯದಲ್ಲಿ ಮೊಹಮ್ಮದ್ ಶಮಿ ಬೆಂಗಾಲ್ ತಂಡವನ್ನು ಪ್ರತಿನಿಧಿಸಲು ಬಿಸಿಸಿಐ ಅವಕಾಶ ನೀಡಿದೆ. ಆದರೆ ನಿರ್ಬಂಧ ವಿಧಿಸಿಯೇ ಶಮಿಗೆ ಆಡಲು ಬಿಸಿಸಿಐ ಅವಕಾಶ ಒದಗಿಸಿದೆ.
ಮುಂಬರಲಿರುವ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಮೊಹಮ್ಮದ್ ಶಮಿಯೂ ಇರುವುದರಿಂದ ಶಮಿ ಒಂದು ಇನ್ನಿಂಗ್ಸ್ ನಲ್ಲಿ ಕೇವಲ 15 ಓವರ್ ಗಳನ್ನಷ್ಟೇ ಎಸೆಯಲು ಬಿಸಿಸಿಐ ಅನುವು ಮಾಡಿದೆ.
ಹಾಗೊಂದುವೇಳೆ ಶಮಿ ಹೆಚ್ಚಿನ ಓವರ್ ಬೌಲಿಂಗ್ ಮಾಡಲೇಬೇಕಾಗಿ ಬಂದರೂ ಕೇವಲ ಎರಡು ಮೂರು ಓವರ್ ಮಾತ್ರ ಹೆಚ್ಚಿಗೆ ಬೌಲಿಂಗ್ ಮಾಡಬಹುದು. ಅದಕ್ಕಿಂತ ಹೆಚ್ಚಿಗೆ ಯಾವ ಕಾರಣಕ್ಕೂ ಬೌಲಿಂಗ್ ಮಾಡುವಂತಿಲ್ಲ. ಜೊತೆಗೆ ಶಮಿಯ ಫಿಟ್ನೆಸ್ ಮತ್ತು ಕೆಲಸದ ಹೊರೆಯ ಕುರಿತ ವರದಿಯನ್ನು ಬಿಸಿಸಿಐ 'ಬೋರ್ಡ್ ಫಿಸಿಯೋ'ಗೆ ತಲುಪಿಸುವಂತೆ ಬೆಂಗಾಲ್ ತಂಡ ನಿರ್ವಹಣಾ ಸಮಿತಿಗೆ ಬಿಸಿಸಿಐ ನಿರ್ದೇಶಿಸಿದೆ.
ಬಿಸಿಸಿಐ ವಿಧಿಸಿರುವ ಈ ನಿರ್ಬಂಧಕ್ಕೆ ಬೆಂಗಾಲ್ ತಂಡ ನಿರ್ವಹಣಾ ಸಮಿತಿ ಒಪ್ಪಿಕೊಂಡಿದೆ. ಶುಕ್ರವಾರ (ನವೆಂಬರ್ 16) ತಂಡವನ್ನು ಪ್ರಕಟಿಸಿರುವ ಬೆಂಗಾಲ್, 16 ಜನರಿರುವ ತಂಡದಲ್ಲಿ ಶಮಿಯನ್ನೂ ಸೇರಿಸಿದೆ. ಹೀಗಾಗಿ ಸೋಮವಾರ ಮಹಾರಾಷ್ಟ್ರ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಬೆಂಗಾಲ್ ಪ್ರತಿನಿಧಿಸಲು ಶಮಿ ಉತ್ಸುಕರಾಗಿದ್ದಾರೆ.