ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಸರಣಿ ಮುಗಿದಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾನ ಹೀನಾಯ ಪ್ರದರ್ಶನವನ್ನು ನೀಡಿದೆ. ಭಾರತದ ಸ್ಟಾರ್ ಆಟಗಾರರು ಈ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ಟೀಕೆಗೆ ಗುರಿಯಾಗಿದ್ದಾರೆ. ಈಗ ಭಾರತ ತಂಡ ಮುಂದಿನ ಸರಣಿಯತ್ತ ಚಿತ್ತ ನೆಟ್ಟಿದೆ. ಟೀಮ್ ಇಂಡಿಯಾ ಇದೇ ತಿಂಗಳ ಕೊನೆಯಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಹಾಗೂ ಮೂರು ಏಕದಿನ ಸರಣಿ ಆಡಲಿದೆ.
ಇಂಗ್ಲೆಂಡ್ ವಿರುದ್ದ ಸರಣಿ ಚಾಂಪಿಯನ್ಸ್ ಟ್ರೋಫಿಗೆ ತಯಾರಿ ನಿಟ್ಟಿನಲ್ಲಿ ನೋಡಲಾಗುತ್ತಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸುತ್ತಿದ್ದು, ಭಾರತದ ಪಂದ್ಯಗಳಿಗೆ ದುಬೈ ಆತಿಥ್ಯ ವಹಿಸಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ವೇಳೆ ಟೀಮ್ ಇಂಡಿಯಾ ಬಲಿಷ್ಠ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಚಾಂಪಿಯನ್ಸ್ ಟ್ರೋಫಿಗೆ ಭಾರತ ಕಣಕ್ಕೆ ಇಳಿಯುವ ಮುನ್ನವೇ ಡಬಲ್ ಟೆನ್ಷನ್ ಆರಂಭವಾಗಿದೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

ಮೊಹಮ್ಮದ್ ಶಮಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಮ್ ಇಂಡಿಯಾ ಸೇರಿಕೊಳ್ಳುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಇವರು ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಇವರಿಗೆ ಬಿಸಿಸಿಐ ತೂಕ ಇಳಿಸಿಕೊಳ್ಳುವಂತೆ ಸಲಹೆ ನೀಡಿದೆ. ಈ ನಿಟ್ಟಿನಲ್ಲಿ ಅವರು ಸಹ ಮೈದಾನದಲ್ಲಿ ಶ್ರಮಿಸುತ್ತಿದ್ದಾರೆ. ಇವರು ಸಂಪೂರ್ಣ ಫಿಟ್ ಆಗದೇ ಇದ್ದಲ್ಲಿ ತಂಡಕ್ಕೆ ಸೇರಿಸಿಕೊಳ್ಳುವ ಯಾವುದೇ ಪ್ಲ್ಯಾನ್ ಬಿಸಿಸಿಐ ಮುಂದೆ ಇಲ್ಲ. ಹೀಗಾಗಿ ಇವರು ಚಾಂಪಿಯನ್ಸ್ ಟ್ರೋಫಿ ಭಾಗವಾಗುತ್ತಾರೋ ಇಲ್ಲವೋ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ಮೊಹಮ್ಮದ್ ಶಮಿ ಕೊನೆಯ ಬಾರಿಗೆ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡಿದ್ದರು. ಆ ಬಳಿಕ ಅವರು ಮೈದಾನಕ್ಕೆ ಇಳಿದಿಲ್ಲ. ಪಾದದ ಗಾಯದಿಂದ ಅವರು ಬಳಲಿದ್ದು ಶಸ್ತ್ರ ಚಿಕಿತ್ಸೆಗೆ ಒಳಾಗಿದ್ದರು. ಬಳಿಕ ಚೇತರಿಸಿಕೊಂಡು ದೇಶೀಯ ಟೂರ್ನಿಯಲ್ಲಿ ಆಡುತ್ತಿದ್ದಾರೆ.

ಮೊಹಮ್ಮದ್ ಶಮಿ ಬಳಿಕ ಟೀಮ್ ಇಂಡಿಯಾದ ಟೆನ್ಷನ್ ಹೆಚ್ಚಾಗಿರುವ ಇನ್ನೊಂದು ಅಂಶ ಎಂದರೆ, ಜಸ್ಪ್ರಿತ್ ಬುಮ್ರಾ. ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಜಸ್ಪ್ರಿತ್ ಬುಮ್ರಾ ಟೆಸ್ಟ್ ಪಂದ್ಯದ ಮಧ್ಯೆದಲ್ಲೇ ಮೈದಾನದಿಂದ ದೂರ ಸರಿದಿದ್ದರು. ಅಲ್ಲದೆ ಸ್ಕ್ಯಾನಿಂಗ್ಗೆ ಒಳ ಪಟ್ಟಿದ್ದರು. ಪರಿಣಾಮ ಇವರು ಎರಡನೇ ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡಲಿಲ್ಲ. ಇವರ ಫಿಟ್ನೆಸ್ ಹಾಗೂ ಇವರ ಲಭ್ಯತೆ ಬಗ್ಗೆ ಇನ್ನು ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಹೀಗಾಗಿ ಟೀಮ್ ಇಂಡಿಯಾಕ್ಕೆ ಟೆನ್ಷನ್ ಶುರುವಾಗಿದೆ. ಇವರು ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಅತಿ ಹೆಚ್ಚಿ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.