ಭಾರತ ಕ್ರಿಕೆಟ್ ಮಂಡಳಿಯ ಮಾಜಿ ಕಾರ್ಯದರ್ಶಿ ಜಯ್ ಶಾ ಈಗ ಐಸಿಸಿ ಉನ್ನತ ಹುದ್ದೆಯಾಗಿರುವ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಇವರು ಈ ಸ್ಥಾನವನ್ನು ಅಲಂಕರಿಸುತ್ತಿದ್ದಂತೆ ಹಲವು ಸವಾಲು ಇವರ ಮುಂದೆ ಬಂದು ನಿಲ್ಲುತ್ತವೆ. ಪ್ರಮುಖವಾಗಿ ಇವರು ಈಗಿರುವ ಕ್ರಿಕೆಟ್ ಸಂಬಂಧಿತ ಹುದ್ದೆಗಳಿಂದ ಕೆಳಗಿಳಯಬೇಕಾಗುತ್ತದೆ. ಜಯ್ ಶಾ ತಮ್ಮ ಅಧಿಕಾರ ಅವಧಿಯಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಈಗ ಅತ್ಯುನ್ನತ ಹುದ್ದೆ ಏರಿ ಕುಳಿತಿದ್ದಾರೆ.
ಜಯ್ ಶಾ ಬಿಸಿಸಿಐ ಕಾರ್ಯದರ್ಶಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷರಾಗಿದ್ದರು. ಜಯ್ ಶಾ ಐಸಿಸಿಯ ಮುಖ್ಯಸ್ಥರ ಹುದ್ದೆಯನ್ನು ಅಲಂಕರಿಸುತ್ತಿದ್ದಂತೆ, ಈ ಎರಡು ಸ್ಥಾನಗಳನ್ನು ತೊರೆಯಬೇಕಾಗಿದೆ. ಜಯ್ ಶಾ ಐಸಿಸಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸುತ್ತಿದ್ದಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್, ತನ್ನ ನೂತನ ಅಧ್ಯಕ್ಷರ ಹೆಸರನ್ನು ಘೋಷಿಸಿದೆ. ಈ ಬಾರಿ ಎಸಿಸಿಯ ಅಧ್ಯಕ್ಷರಾಗಿ ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ ನೇಮಕ ಗೊಂಡಿದ್ದಾರೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದೆ.

ಶಮ್ಮಿ ಸಿಲ್ವಾ ಶ್ರೀಲಂಕಾ ಕ್ರಿಕೆಟ್ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಈಗಾಗಲೇ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹೊಸ ಎಸಿಸಿ ಅಧ್ಯಕ್ಷ ಶಮ್ಮಿ ಸಿಲ್ವಾ ಅವರು ಹಲವು ದೊಡ್ಡ ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಶಮ್ಮಿ ಹಲವು ವರ್ಷಗಳಿಂದ ಎಸಿಸಿಯಲ್ಲಿ ಕೆಲಸ ಮಾಡಿದ್ದಾರೆ. ಶಮ್ಮಿ ಎಸಿಸಿ ಹಣಕಾಸು ಮತ್ತು ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ದೊಡ್ಡ ಹುದ್ದೆಯನ್ನು ಅಲಂಕರಿಸಿದ ಬಳಿಕ ಮಾತನಾಡಿರುವ ಶಮ್ಮಿ ಸಿಲ್ವಾ, ಈ ದೊಡ್ಡ ಹುದ್ದೆಯನ್ನು ಅಲಂಕರಿಸಿರುವುದು ನನಗೆ ಅತೀವ ಸಂತಸ ತಂದಿದೆ ಎಂದು ತಿಳಿಸಿದ್ದಾರೆ. ಕ್ರಿಕೆಟ್ ಏಷ್ಯಾದ ಹೃದಯ ಬಡಿತ. ಕ್ರೀಡೆಯನ್ನು ಬೆಳೆಸಲು, ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ಒದಗಿಸಲು ಶ್ರಮಿಸುವುದಾಗಿ ತಿಳಿಸಿದ್ದಾರೆ.

ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆ, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ವೇಳೆ ಎಲ್ಲರ ಮನಸ್ಸಿನಲ್ಲಿರುವ ಇರುವ ಪ್ರಶ್ನೆ ಒಂದೇ. ಎಸಿಸಿ ಅಧ್ಯಕ್ಷರಾಗಿ ಶಮ್ಮಿ ಸಿಲ್ವಾ ಆಯ್ಕೆ ಆಗಿ ಆಗಿದೆ. ಇನ್ನು ಬಿಸಿಸಿಐ ಕಾರ್ಯದರ್ಶಿ ಸ್ಥಾನವನ್ನು ಯಾರು ತುಂಬಲಿದ್ದಾರೆ? ಈ ಪ್ರಶ್ನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಸಿಗುವ ಸಾಧ್ಯತೆ ಇದೆ.
ಪಾಕಿಸ್ತಾನ ಆಯೋಜಿಸಲಿರುವ ಚಾಂಪಿಯನ್ಸ್ ಟ್ರೋಫಿಯ ಬಗ್ಗೆ ಮಹತ್ವದ ಸಭೆಯನ್ನು ಶನಿವಾರ ಕರೆಯಲಾಗಿದೆ. ಗುರುವಾರ ಐಸಿಸಿ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷರು ಚಾಂಪಿಯನ್ಸ್ ಟ್ರೋಫಿ ನಡೆಸುವ ಬಗ್ಗೆ ಚರ್ಚೆ ನಡೆಸಿದರು. ಈ ಬಗ್ಗೆ ಅಂತಿಮ ತೀರ್ಮಾನ ಡಿಸೆಂಬರ್ 7 ರಂದು ಹೊರ ಬೀಳುವ ಸಾಧ್ಯತೆ ಇದೆ. ಬಿಸಿಸಿಐ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕ್ಗೆ ಪ್ರವಾಸ ಬೆಳೆಸುವುದಿಲ್ಲ ಎಂದು ತಿಳಿಸಿದ್ದು, ಈ ಐಸಿಸಿ ಮೇಗಾ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ. ಈ ಬಗ್ಗೆ ಶನಿವಾರ ತೀರ್ಮಾನ ಹೋರ ಬೀಳಬಹುದು.