
ಕ್ರಿಕೆಟ್ ಕಂಡ ಶ್ರೇಷ್ಠ ಸ್ಪಿನ್ನರ್ ಆಸ್ಟ್ರೇಲಿಯಾದ ಕ್ರಿಕೆಟಿಗ ಶೇನ್ ವಾರ್ನ್ ಶುಕ್ರವಾರ ಹೃದಯಾಘಾತದಿಂದ ನಿಧನವಾಗಿದ್ದಾರೆ. ಇಡೀ ಕ್ರಿಕೆಟ್ ಲೋಕ ದಿಗ್ಗಜ ಆಟಗಾರನ ಅಗಲಿಕೆಗೆ ಕಂಬಬಿ ಮಿಡಿದಿದೆ. ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಮೊದಲ ಆವೃತ್ತಿಯಲ್ಲಿಯೇ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿದ್ದ ಶೇನ್ ವಾರ್ನ್ ಚೊಚ್ಚಲ ಆವೃತ್ತಿಯಲ್ಲಿ ಆರ್ಆರ್ ತಂಡ ಟ್ರೋಫಿ ಗೆಲ್ಲುವಂತೆ ಮಾಡಿದ್ದರು. ಇದೀಗ ರಾಜಸ್ಥಾನ್ ರಾಯಲ್ಸ್ ತಂಡ ಕೂಡ ತನ್ನ ಪ್ರಪ್ರಥಮ ನಾಯಕನನ್ನು ಕಳೆದುಕೊಂಡ ನೋವಿನಲ್ಲಿದೆ. ಈ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಶೇನ್ ವಾರ್ನ್ ಅಗಲಿಕೆಗೆ ಭಾವನಾತ್ಮಕವಾಗಿ ಸಂತಾಪ ಸೂಚಿಸಿದೆ.
2008ರಲ್ಲಿ ಐಪಿಎಲ್ ಟೂರ್ನಿ ಆರಂಭವಾದಾಗ ಶೇನ್ ವಾರ್ನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಖ್ಯಾತನಾಮ ಆಟಗಾರರನ್ನು ಹೊಂದಿಲ್ಲದ ಸಾಮಾನ್ಯ ತಂಡದಂತೆ ಭಾಸವಾಗಿತ್ತು. ಯುವ ಹಾಗೂ ಅನುಭವಿ ಆಟಗಾರರನ್ನು ಅದ್ಭುತವಾದ ಸಂಘಟಿಸಿದ ಶೇನ್ ವಾರ್ನ್ ಯಾರೂ ಊಹಿಸದಂತೆ ಟೂರ್ನಿಯನ್ನು ಗೆಲ್ಲುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಚೊಚ್ಚಲ ಐಪಿಎಲ್ ಆವೃತ್ತಿಯ ಚಾಂಪಿಯನ್ ತಂಡವಾಗಿ ಆರ್ಆರ್ ಹೊರಹೊಮ್ಮಿತ್ತು. ಶೇನ್ ವಾರ್ನ್ ಅಗಲಿಕೆಯ ಈ ಸಂದರ್ಭದಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಶೇನ್ ವಾರ್ನ್ ಅವರು ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸುವ ಸಾಮರ್ರ್ಥಯ ಹೊಂದಿದ್ದ ನಾಯಕ ಎಂದು ಬಣ್ಣಿಸಿದೆ.
ಆಸ್ಟ್ರೇಲಿಯಾದ ದಿಗ್ಗಜ ಸ್ಪಿನ್ನರ್ ಶೇನ್ ವಾರ್ನ್ ಶುಕ್ರವಾರ ನಿಧನವಾಗಿದ್ದು ವಾರ್ನ್ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗುತ್ತಿದೆ. 1992ರಲ್ಲಿ ಭಾರತದ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಶೇನ್ ವಾರ್ನ್ ತಮ್ಮ 15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 708 ವಿಕೆಟ್ ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷನೆ ಮಾಡಿದ ನಂತರವೂ ವಾರ್ನ್ ಟಿ20 ಕ್ರಿಕೆಟ್ನಲ್ಲಿ ಮತ್ತಷ್ಟು ವರ್ಷಗಳ ಕಾಲ ಸಕ್ರಿಯವಾಗಿದ್ದರು. 2008ರಲ್ಲಿ ನಡೆದ ಚೊಚ್ಚಲ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕನಾಗಿ ಫೈನಲ್ಗೇರಿಸಿದ್ದ ವಾರ್ನ್ ಚೊಚ್ಚಲ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 3 ವಿಕೆಟ್ಗಳಿಂದ ಗೆಲುವು ಸಾಧಿಸಿದ್ದರು. ಈ ಟೂರ್ನಿಯಲ್ಲಿ ಭಾರತದ ಯುವ ಪ್ರತಿಭೆಗಳಾಗಿದ್ದ ಯೂಸುಫ್ ಪಠಾಣ್, ರವೀಂದ್ರ ಜಡೇಜಾ ಅವರಂತಾ ಆಟಗಾರರನ್ನು ವಾರ್ನ್ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದರು.
"ಶೇನ್ ವಾರ್ನ್.. ಮಾಯಾಜಾಲಕ್ಕೆ ಅನ್ವರ್ಥ ನಾಮ. ನಮ್ಮ ಮೊದಲ ರಾಯಲ್. ಅಸಾಧ್ಯ ಎಂಬುದು ಒಂದು ಸುಳ್ಳು ಎಂಬುದನ್ನು ನಂಬುವಂತೆ ಮಾಡಿದ ವ್ಯಕ್ತಿ. ತನ್ನ ಹಾದಿಯಲ್ಲೇ ನಡೆದ, ತಾನು ನುಡಿದ ಮಾತಿನಂತೆಯೇ ಆಡಿದ, ಅಂಡರ್ಡಾಗ್ಗಳಾಗಿದ್ದವರನ್ನು ಚಾಂಪಿಯನ್ನರನ್ನಾಗಿಸಿದ ವ್ಯಕ್ತಿ. ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸುವ ಸಾಮರ್ಥ್ಯ ಹೊಂದಿದ್ದ ಮಾರ್ಗದರ್ಶಕ" ಎಂದು ರಾಜಸ್ಥಾನ್ ರಾಯಲ್ಸ್ ತನ್ನ ಪತ್ರವನ್ನು ಭಾವನಾತ್ಮಕವಾಗಿ ಆರಂಭಿಸಿದೆ.
"ಈ ಕ್ಷಣದಲ್ಲಿ ನಮ್ಮ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆದರೆ ಅವರ ಅವರ ಮುಗುಳಿನಗೆಯಿಲ್ಲದೆ, ಅವರ ಬಿದ್ದಿವಂತಿಕೆಯಿಲ್ಲದೆ, ಜೀವನವನ್ನು ಸಂಪೂರ್ಣವಾಗಿ ಆನಂದಿಸುವ ಅವರ ಲವಲವಿಕೆಯನ್ನು ಕಳೆದುಕೊಂಡು ಜಗತ್ತು ಎಷ್ಟು ಬಡವಾಗಿದೆ ಎಂಬುದು ನಮಗೆ ತಿಳಿದಿದೆ. ಜಗತ್ತಿನ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಂತೆಯೇ ನಮ್ಮ ಹೃದಯ ಕೂಡ ಸಂಪೂರ್ಣ ಛಿದ್ರವಾಗಿದೆ" ಎಂದು ರಾಜಸ್ಥಾನ್ ರಾಯಲ್ಸ್ ಭಾವನಾತ್ಮಕ ನುಡಿ ನಮನ ಸಲ್ಲಿದೆ.