
ದಿಗ್ಗಜ ಕ್ರಿಕೆಟಿಗ ಶೇನ್ ವಾರ್ನ್ ಅಕಾಲಿಕ ನಿಧನವಾಗಿ ಅದಾಗಲೇ ಐದು ದಿನಗಳಾಗಿದೆ. ಶೇನ್ ವಾರ್ನ್ ಬಗ್ಗೆ ಅವರ ಸ್ನೇಹಿತರು ದಿಗ್ಗಜ ಆಟಗಾರರು ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಈ ಸಂದರ್ಭದಲ್ಲಿ ಶೇನ್ ವಾರ್ನ್ ಅವರೊಂದಿಗೆ ಥಾಯ್ಲೆಂಡ್ನ ರೆಸಾರ್ಟ್ನಲ್ಲಿದ್ದ ಅವರ ಸ್ನೇಹಿತ ವಿಶೇಷ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಈಗ ಸಾಕಷ್ಟು ವೈರಲ್ ಆಗಿದೆ.
ಶೇನ್ ವಾರ್ನ್ ಅವರ ಸ್ನೇಹಿತ ಥಾಮಸ್ ಹಾಲ್ ಥಾಯ್ಲೆಂಡ್ನ ಕೋಹ್ ಸುಮುಯ್ ರೆಸಾರ್ಟ್ನಲ್ಲಿ ವಾರ್ನ್ ಜೊತೆಗಿದ್ದ ಆಪ್ತರ ಪೈಕಿ ಒಬ್ಬರು. ವಾರ್ನ್ ಹೃದಯಾಘಾತದಿಂದ ಮೃತಪಡುವ ಮುನ್ ಗೆಳೆಯರೊಂದಿಗೆ ಹರಟುತ್ತಾ ಸಂತಸದಿಂದ ಕಾಲ ಕಳೆದಿದ್ದರು. ಈ ಸಂದರ್ಭದಲ್ಲಿ ವಾರ್ನ್ ಸ್ನೇಹಿರೊಂದಿಗೆ ಫೋಟೋಗೆ ಫೋಸ್ ನೀಡಿದ್ದರು. ಈ ಫೋಟೋವನ್ನು ಥಾಮಸ್ ಹಾಲ್ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಶೇನ್ ವಾರ್ನ್ ಅತ್ಯಂತ ಸಂತಸದಲ್ಲಿದ್ದು ಎಂದಿನಂತೆ ನಗುಮೊಗದಿಂದ ಫೊಸ್ ಕೊಟ್ಟಿದ್ದಾರೆ.

ಶೇನ್ ವಾರ್ನ್ ಸ್ನೇಹಿತ ಹಂಚಿಕೊಂಡ ಫೋಟೋ
ಇನ್ನು ಸೋಮವಾರ ಶೇನ್ ವಾರ್ನ್ ಸ್ನೇಹಿತ ಥಾಮಸ್ ಹಾಲ್ ದಿಗ್ಗಜ ಕ್ರಿಕೆಟಿಗನ ಸಾವಿಗೆ ಒಂದು ಗಂಟೆ ಹಿಂದೆ ವಾರ್ನ್ ಹರಟಿದ್ದ ವಿಚಾರವನ್ನು ಹಂಚಿಕೊಂಡಿದ್ದರು. ಈ ಅಂಶ ಐಪಿಎಲ್ ಅಭಿಮಾನಿಗಳಿಗೆ ಅದರಲ್ಲೂ ರಾಜಸ್ಥಾನ್ ರಾಯಲ್ಸ್ ತಂಡದ ಅಭಿಮಾನಿಗಳನ್ನು ಮತ್ತಷ್ಟು ಭಾವನಾತ್ಮಕವನ್ನಾಗಿಸಿತ್ತು. ಯಾಕೆಂದರೆ ವಾರ್ನ್ ಸಾವಿಗೆ ಕೆಲವೇ ಗಂಟೆಗಳಿರುವಾರ ಐಪಿಎಲ್ನ ಚೊಚ್ಚಲ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನ ಬಗ್ಗೆ ಮಾತನಾಡಿದ್ದರು ಎಂದು ಥಾಮಸ್ ಹಾಲ್ ವಿವರಿಸಿದ್ದಾರೆ.
ಸಾವಿಗೂ ಮುನ್ನ ವಾರ್ನ್ ತಲೆಯಲ್ಲಿತ್ತು ಐಪಿಎಲ್ ಗೆಲುವಿನ ಸಂಭ್ರಮ: ಶೇನ್ ವಾರ್ನ್ ಕೋಹ್ ಸಮುಯ್ ದ್ವೀಪದ ಸಮುಜಾನ್ ರೆಸಾರ್ಟ್ನಲ್ಲಿ ವಾಸವಿದ್ದ ಗೆಳೆಯರ ಗುಂಪಿನಲ್ಲಿ ಥಾಮಸ್ ಹಾಲ್ ಕೂಡ ಇದ್ದರು. 'ದಿ ಸ್ಪೋರ್ಟಿಂಗ್ ನ್ಯೂಸ್'ಗೆ ಬರೆದಿದ್ದ ಆರ್ಟಿಕಲ್ನಲ್ಲಿ ಶೇನ್ ವಾರ್ನ್ ಅವರ ಸಾವಿಗೂ ಹಿಂದಿನ ಒಂದು ಗಂಟೆಯ ಅವಧಿಯಲ್ಲಿ ಏನಾಗಿತ್ತು ಎಂಬುದನ್ನು ಹಂಚಿಕೊಂಡಿದ್ದಾರೆ. ಈ ಬರಹದಲ್ಲಿ ಹಾಲ್ ಶೇನ್ ವಾರ್ನ್ ಐಪಿಎಲ್ನಲ್ಲಿ ವಿಶೇಷವಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಸಾಧನೆಗೆ ಹೆಮ್ಮೆಯನ್ನು ಹೊಂದಿದ್ದರು ಎಂದು ತಿಳಿಸಿದ್ದರು. "ಕ್ರಿಕೆಟ್ ವಿಚಾರಗಳ ಬಗ್ಗೆ ಹರಟಿ ತಮಾಷೆ ಮಾಡಿಕೊಂಡ ನಂತರ ಶೇನ್ ವಾರ್ನ್ ಜೊತೆಗೆ ಕೆಲವರು ಫೋಟೋ ತೆಗೆಸಿಕೊಂಡರು. ಅದಾದ ಬಳಿಕ ನಾವೆಲ್ಲಾ ತಕ್ಷಣವೇ ಏನನ್ನಾದರೂ ತಿನ್ನಲು ನಿರ್ಧರಿಸದೆವು" ಎಂದು ಈ ಆರ್ಟಿಕಲ್ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಶೇನ್ ವಾರ್ನ್ ಅವರ ಅಕಾಲಿಕ ನಿಧನದ ನಂತರ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ವಾರ್ನ್ ಬಗ್ಗೆ ಭಾವನಾತ್ಮಕ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. "ಶೇನ್ ವಾರ್ನ್.. ಮಾಯಾಜಾಲಕ್ಕೆ ಅನ್ವರ್ಥ ನಾಮ. ನಮ್ಮ ಮೊದಲ ರಾಯಲ್. ಅಸಾಧ್ಯ ಎಂಬುದು ಒಂದು ಸುಳ್ಳು ಎಂಬುದನ್ನು ನಂಬುವಂತೆ ಮಾಡಿದ ವ್ಯಕ್ತಿ. ತನ್ನ ಹಾದಿಯಲ್ಲೇ ನಡೆದ, ತಾನು ನುಡಿದ ಮಾತಿನಂತೆಯೇ ಆಡಿದ, ಅಂಡರ್ಡಾಗ್ಗಳಾಗಿದ್ದವರನ್ನು ಚಾಂಪಿಯನ್ನರನ್ನಾಗಿಸಿದ ವ್ಯಕ್ತಿ. ಮುಟ್ಟಿದ್ದೆಲ್ಲವನ್ನೂ ಚಿನ್ನವಾಗಿಸುವ ಸಾಮರ್ಥ್ಯ ಹೊಂದಿದ್ದ ಮಾರ್ಗದರ್ಶಕ"
"ಈ ಕ್ಷಣದಲ್ಲಿ ನಮ್ಮ ಭಾವನೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಆದರೆ ಅವರ ಅವರ ಮುಗುಳಿನಗೆಯಿಲ್ಲದೆ, ಅವರ ಬಿದ್ದಿವಂತಿಕೆಯಿಲ್ಲದೆ, ಜೀವನವನ್ನು ಸಂಪೂರ್ಣವಾಗಿ ಆನಂದಿಸುವ ಅವರ ಲವಲವಿಕೆಯನ್ನು ಕಳೆದುಕೊಂಡು ಜಗತ್ತು ಎಷ್ಟು ಬಡವಾಗಿದೆ ಎಂಬುದು ನಮಗೆ ತಿಳಿದಿದೆ. ಜಗತ್ತಿನ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಂತೆಯೇ ನಮ್ಮ ಹೃದಯ ಕೂಡ ಸಂಪೂರ್ಣ ಛಿದ್ರವಾಗಿದೆ" ಎಂದು ರಾಜಸ್ಥಾನ್ ರಾಯಲ್ಸ್ ಭಾವನಾತ್ಮಕ ನುಡಿ ನಮನ ಸಲ್ಲಿದೆ.