ಮುಂಬೈ, ಡಿಸೆಂಬರ್ 17: ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಅಧ್ಯಕ್ಷ ಸ್ಥಾನದಿಂದ ಶುಕ್ರವಾರ ಕೆಳಗಿಳಿದಿದ್ದಾರೆ.
ಎರಡು ವರ್ಷಕ್ಕೊಮ್ಮೆ ನಡೆಯುವ ಎಂಸಿಎ ಅಧ್ಯಕ್ಷೀಯ ಚುನಾವಣೆಯಲ್ಲಿ ಕಳೆದ ವರ್ಷ 6 ಸ್ಥಾನಗಳ ಪೈಕಿ 5 ಸ್ಥಾನಗಳು ಶರದ್ ಬಣಕ್ಕೆ ಒಲಿದಿತ್ತು. ನ್ಯಾ. ಲೋಧಾ ಸಮಿತಿ ನೀತಿ, ನಿಯಮಗಳಿಗೆ ಹೆದರಿ ಶರದ್ ಪವಾರ್ ಅವರು ಸ್ಥಾನ ತೊರೆಯುತ್ತಿದ್ದಾರೆ ಎಂಬ ಸುದ್ದಿಯಿದೆ.
ನ್ಯಾ. ಲೋಧಾ ವರದಿ ಭೀತಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಏನಾದರೂ ನ್ಯಾ. ಲೋಧಾ ಸಮಿತಿ ಶಿಫಾರಸ್ಸುಗಳನ್ನು ಅಳವಡಿಸಿದರೆ, ನಿಯಮಾನುಸಾರವಾಗಿ ಶರದ್ ಪವಾರ್ ಅವರು ಅರ್ಹತೆ ಕಳೆದುಕೊಳ್ಳುತ್ತಿದ್ದರು. ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿರುವ ಈ ಪ್ರಕರಣ ಜನವರಿ 3 ಅಥವಾ 4 ರಂದು ಅಂತಿಮ ತೀರ್ಪು ನೀಡುವ ಸಾಧ್ಯತೆಯಿದೆ.

ಲೋಧಾ ಸಮಿತಿ ಶಿಫಾರಸ್ಸಿನ ಬಗ್ಗೆ ಕಿಡಿಕಾರಿರುವ 76 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ ಶರದ್ ಪವಾರ್ ಅವರು ನ್ಯಾಯಾಂಗ ವ್ಯವಸ್ಥೆಯಿಂದ ಕ್ರಿಕೆಟ್ ಸಂಸ್ಥೆ ಆಡಳಿತ ನಡೆಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ಪವಾರ್ ಅವರು ಈ ಹಿಂದೆ 2005 ರಿಂದ 2008ರ ತನಕ ಬಿಸಿಸಿಐ ಅಧ್ಯಕ್ಷರಾಗಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ ಅಧ್ಯಕ್ಷರಾಗಿ 2010 ರಿಂದ 2012ರ ತನಕ ಕಾರ್ಯನಿರ್ವಹಿಸಿದ್ದರು. 2015ರ ಜೂನ್ ನಲ್ಲಿ ಎಂಸಿಎ ಅಧ್ಯಕ್ಷರಾಗಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದರು.
ಟೀಂ ಇಂಡಿಯಾದ ಮಾಜಿ ನಾಯಕ ದಿಲೀಪ್ ವೆಂಗ್ ಸರ್ಕಾರ್ ಅವರು ಆಶೀಶ್ ಶೆಲಾರ್ ಜೊತೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಶರದ್ ಪವಾರ್ ಅವರು 2001-2010 ಹಾಗೂ 2012ರಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಲಲಿತ್ ಮೋದಿ ಅವರು ಐಪಿಎಲ್ ಟೂರ್ನಿ ಆಯೋಜನೆ ಮಾಡಲು ಕೂಡಾ ಶರದ್ ಪವಾರ್ ಕಾರಣರಾಗಿದ್ದರು.
ಒಂದರ್ಥದಲ್ಲಿ ಲಲಿತ್ ಗೆ ಶರದ್ ಪವಾರ್ ಅವರು ಗುರುವಾಗಬೇಕು. ಪವಾರ್ ಅವರ ಅಧಿಕಾರ ಅವಧಿಯಲ್ಲಿ ಸುಮಾರು 60ಕ್ಕೂ ಅಧಿಕ ಟೆಸ್ಟ್ ಕ್ರಿಕೆಟರ್ಸ್ ಗಳು ಭಾರತ ತಂಡಕ್ಕೆ ಸಿಕ್ಕಿದ್ದರು. (ಒನ್ ಇಂಡಿಯಾ ಸುದ್ದಿ)