ನವದೆಹಲಿ, ಅಕ್ಟೋಬರ್ 06: ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಅವರು ಗಾಯಗೊಂಡಿರುವುದರಿಂದ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬುಧವಾರ ಪ್ರಕಟಿಸಿದೆ.
ಗಾಯಾಳು ಭುವನೇಶ್ವರ್ ಕುಮಾರ್ ಬದಲಿಗೆ ಶಾರ್ದೂಲ್ ಠಾಕೂರ್ ಅವರು ಇಂದೋರ್ ನಲ್ಲಿ ಅಕ್ಟೋಬರ್ 8ರಂದು ಮೂರನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.

ತವರು ನೆಲದಲ್ಲಿ ತಮ್ಮ ವೃತ್ತಿ ಬದುಕಿನ ಮೊಟ್ಟಮೊದಲ 5 ವಿಕೆಟ್ ಗಳನ್ನು ಪಡೆದ ಸಾಧನೆ ಮಾಡಿದ ಭುವನೇಶ್ವರ್ ಕುಮಾರ್ ಅವರು ಅನಿವಾರ್ಯವಾಗಿ ಮೂರನೇ ಟೆಸ್ಟ್ ನಿಂದ ಹೊರಗುಳಿಯಬೇಕಾಗಿದೆ.
ಈಡನ್ ಗಾರ್ಡನ್ ಮೈದಾನದಲ್ಲಿ ಉತ್ತಮ ಬೌಲಿಂಗ್ ನಿರ್ವಹಣೆ ತೋರಿದ್ದ ಭುವನೇಶ್ವರ್ ಅವರು ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರಿಗೆ ವಿಶ್ರಾಂತಿ ಅಗತ್ಯವಿದೆ ಎಂದು ಬಿಸಿಸಿಐ ಹೇಳಿದೆ.
ಪೇಟಿಯಂ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-0 ಅಂತರದಿಂದ ನ್ಯೂಜಿಲೆಂಡ್ ವಿರುದ್ಧ ಮುನ್ನಡೆ ಸಾಧಿಸಿದೆ.(ಐಎಎನ್ಎಸ್)