
ಲಂಡನ್, ಜುಲೈ 16: "ಟ್ರೋಫಿ ಹಂಚಿಕೆಯನ್ನು ಐಸಿಸಿ ಪರಿಗಣಿಸಬೇಕು" ಎಂದು ನ್ಯೂಜಿಲೆಂಡ್ ತಂಡದ ಕೋಚ್ ಗ್ಯಾರಿ ಸ್ಟೆಡ್ ಕೊನೆಗೂ ತಮ್ಮೊಳಗಿನ ಹತಾಶೆ ಹೊರಹಾಕಿದ್ದಾರೆ.
ಇದೇ ಭಾನುವಾರ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸಮಬಲ ಸಾಧಿಸಿದರೂ ಬೌಂಡರಿ ಗಳಿಕೆಯ ಆಧಾರದ ಮೇರೆಗೆ ಇಂಗ್ಲೆಂಡ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಕಿವೀಸ್ 241/8 ರನ್ಗಳನ್ನು ಗಳಿಸಿದರೆ, ಇಂಗ್ಲೆಂಡ್ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 241 ರನ್ಗಳನ್ನು ದಾಖಲಿಸುವ ಮೂಲಕ ಸಮಬಲ ಸಾಧಿಸಿದ್ದವು.
ಬಳಿಕ ವಿಶ್ವಕಪ್ ಇತಿಹಾಸದಲ್ಲಿ ನಡೆದ ಚೊಚ್ಚಲ ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 15 ರನ್ ದಾಖಲಿಸಿದರೆ, ನ್ಯೂಜಿಲೆಂಡ್ ಕೂಡ 1 ವಿಕೆಟ್ ನಷ್ಟದಲ್ಲಿ ಅಷ್ಟೇ ರನ್ಗಳಿಸಿತ್ತು. ಬಳಿಕ ಸೂಪರ್ ಓವರ್ನ ಟೈ ಬ್ರೇಕರ್ ನಿಯಮ ಬಳಕೆಗೆ ತಂದು ಬೌಂಡರಿ ಗಳಿಕೆಯಲ್ಲಿ 26-17ರಲ್ಲಿ ಮುಂದಿದ್ದ ಇಂಗ್ಲೆಂಡ್ ತಂಡಕ್ಕೆ ಚಾಂಪಿಯನ್ ಪಟ್ಟ ನೀಡಲಾಯಿತು.
"ಏಳು ವಾರಗಳ ಕಾಲ ಪೈಪೋಟಿ ನಡೆಸಿ, ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ ಸಂದರ್ಭದಲ್ಲಿ ಟ್ರೋಫಿ ಹಂಚಿಕೆಯನ್ನು ಪರಿಗಣಿಸಬೇಕು. ಅಂದಹಾಗೆ ಇಂಥದ್ದೊಂದು ಬದಲಾವಣೆ ತರಲು ಹಲವು ಸಂಗತಿಗಳನ್ನು ಪರಿಗಣಿಸಬೇಕಾಗುತ್ತದೆ. ಹೀಗಾಗಿ ಇಂಥದ್ದೊಂದು ಬದಲಾವಣೆ ತರಲು ಇದು ಸೂಕ್ತವಾಗಿದೆ. ಆದರೂ ವಾತಾವರಣ ತಿಳಿಯಾಗುವ ವರೆಗೆ ಕಾಯುವುದು ಸೂಕ್ತ," ಎಂದು ನ್ಯೂಜಿಲೆಂಡ್ ತಂಡದ ಕೋಚ್ ಗ್ಯಾರಿ ಸ್ಟೆಡ್ ವೆಬ್ಸೈಟ್ ಒಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಇನ್ನು ಕಿವೀಸ್ ತಂಡದ ಬ್ಯಾಟಿಂಗ್ ಕೋಚ್ ಕ್ರೇಗ್ ಮೆಕ್ಮಿಲನ್ ಕೂಡ ಟ್ರೋಫಿ ಹಂಚಿಕೆಯ ಪರವಾಗಿ ಬ್ಯಾಟ್ ಬೀಸಿದ್ದು, ಟ್ರೋಫಿ ಹಂಚಿಕೆ "ಸೂಕ್ತ ಸಂಗತಿ" ಎಂದಿದ್ದಾರೆ.
"ಇದರಿಂದ ಭಾನುವಾರದ ಫಲಿತಾಂಶವೇನು ಬದಲಾಗುವುದಿಲ್ಲ. ಆದರೆ, 7 ವಾರದ ಸುದೀರ್ಘಾವಧಿಯ ಟೂರ್ನಿಯಲ್ಲಿ ಪೈಪೋಟಿ ನಡೆಸಿ ಫೈನಲ್ ತಲುಪಿದ್ದ ಎರಡು ತಂಡಗಳಲ್ಲಿ 50 ಓವರ್ಗಳಲ್ಲಿ ನಂತರ ಸೂಪರ್ ಓವರ್ನಲ್ಲೂ ರನ್ಗಳ ಅಂತರದಲ್ಲಿ ವಿಜೇತರು ಯಾರೆಂಬುದು ಹೊರಬರದೇ ಇದ್ದಾಗ ಜಂಟಿ ಚಾಂಪಿಯನ್ಸ್ ಆಯ್ಕೆ ಸೂಕ್ತ ನಿರ್ಧಾರ. ಆದರೆ ಈಗ ಚರ್ಚೆ ಮಾಡಿದ ಫಲಿತಾಂಶ ಬದಲಾಗುವುದಿಲ್ಲ," ಎಂದು ಕ್ರೇಗ್ ಮೆಕ್ಮಿಲನ್ ಹೇಳಿದ್ದಾರೆ.
ಇದಕ್ಕೂ ಮುನ್ನ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್, ಯುವರಾಜ್ ಸಿಂಗ್, ಬ್ರೆಟ್ ಲೀ ಹಾಗೂ ಮೊದಲಾದವರು ಕೂಡ ಐಸಿಸಿ ಬಳಕೆಗೆ ತಂದ ಈ ಬೌಡರಿ ನಿಯಮದ ಕುರಿತಾಗಿ ಅಸಮಾಧಾನ ವ್ಯಕ್ತ ಪಡಿಸಿದ್ದರು.