ಮುಂಬೈ, ಅ.04: ನಾಗಪುರ ಮೂಲದ ವಕೀಲ ಶಶಾಂಕ್ ಮನೋಹರ್ ಅವರು ಎರಡನೇ ಬಾರಿಗೆ ಭಾರತೀಯ ಕ್ರಿಕೆಟ್ ಚುಕ್ಕಾಣಿ ಹಿಡಿದಿದ್ದಾರೆ. ಭಾನುವಾರ ನಡೆದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವಿಶೇಷ ಮಹಾಸಭೆಯಲ್ಲಿ ಶಶಾಂಕ್ ಮನೋಹರ್ ಅವರನ್ನು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಬಿಸಿಸಿಐ ಅಧ್ಯಕ್ಷರಾಗಿದ್ದ ಜಗಮೋಹನ್ ದಾಲ್ಮಿಯಾ ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನವನ್ನು 58 ವರ್ಷದ ಶಶಾಂಕ್ ಮನೋಹರ್ ಅವರು ತುಂಬುತ್ತಿದ್ದಾರೆ. ತಮ್ಮ ಚೊಚ್ಚಲ ಭಾಷಣದಲ್ಲಿ ಆಡಳಿತದಲ್ಲಿ ಪಾರದರ್ಶಕತೆ, ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ, ಭಾರತ ಹಾಗೂ ಪಾಕಿಸ್ತಾನ ಸರಣಿ ಬಗ್ಗೆ ಮಾತನಾಡಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ಸರಣಿ ಬಗ್ಗೆ ಬಿಸಿಸಿಐಯಾಗಲಿ, ಪಿಸಿಬಿಯಾಗಲಿ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ. ಎರಡು ದೇಶಗಳ ಸರ್ಕಾರದ ನಿರ್ಧಾರದ ಮೇಲೆ ಸರಣಿ ನಡೆಸುವುದೋ ಬೇಡವೋ ಎಂಬುದು ನಿರ್ಧಾರವಾಗಲಿದೆ ಎಂದಿದ್ದಾರೆ.

ನಾಮಪತ್ರ ಸಲ್ಲಿಸಲು ಶನಿವಾರ ಕೊನೇ ದಿನವಾಗಿತ್ತು ಮತ್ತು ಮನೋಹರ್ ಅಧ್ಯಕ್ಷ ಹುದ್ದೆಗೆ ಏಕೈಕ ಅಭ್ಯರ್ಥಿಯಾಗಿದ್ದರು. ಹೀಗಾಗಿ ಅವಿರೋಧ ಆಯ್ಕೆ ಖಚಿತ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದರು.