
ಬೆಂಗಳೂರು, ಸೆಪ್ಟೆಂಬರ್ 10 : ಕೇರಳದ ಯವ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕಿಕೆಟಿಗನ ಮಾನವೀಯತೆಗೆ ಸಂಸದ ಶಶಿ ತರೂರ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧದ ಕೊನೆಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 48 ಎಸೆತದಲ್ಲಿ 91 ರನ್ ಬಾರಿಸಿದ್ದರು. ಏಕದಿನ ಸರಣಿಯಲ್ಲಿ ಆಡುವುದಕ್ಕೆ ಪಡೆದ ಸಂಭಾವನೆಯನ್ನು ಮೈದಾನದ ಸಿಬ್ಬಂದಿಗಳಿಗೆ ದಾನ ಮಾಡಿದ್ದರು.
ಹಿರಿಯ ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್ ಸಂಜು ಸ್ಯಾಮ್ಸನ್ ಕಾರ್ಯವನ್ನು ಮೆಚ್ಚಿದ್ದಾರೆ. ಈ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ಮೈದಾನದ ಸಿಬ್ಬಂದಿಯ ಶ್ರಮದಿಂದಾಗಿ ಆಟ ನಡೆಯುವಂತೆ ಆಯಿತು. ಇಂತಹ ಕಾರ್ಯಕಾಗಿ ಸಂಜ ಇತರರಿಗಿಂತ ಭಿನ್ನ ಎಂದು ಶಶಿ ತರೂರ್ ಹೊಗಳಿದ್ದಾರೆ.
ಐದು ಪಂದ್ಯಗಳ ಸರಣಿಯಲ್ಲಿ ಬಹುತೇಕ ಪಂದ್ಯಗಳಿಗೆ ಮಳೆ ಅಡ್ಡಿ ಮಾಡಿತ್ತು. ಈ ನಡುವೆಯೂ ಮೈದಾನದಿಂದ ನೀರನ್ನು ತೆಗೆದು, ತೇವಮುಕ್ತಗೊಳಿಸಿ ಆಟ ನಡೆಯಲು ಮೈದಾನದ ಸಿಬ್ಬಂದಿ ಶ್ರಮವಹಿಸಿ ಕೆಲಸ ಮಾಡಿದ್ದರು.
ಆಟವಾಡಲು ಅನುಕೂಲ ಮಾಡಿಕೊಟ್ಟ ಮೈದಾನದ ಸಿಬ್ಬಂದಿಯ ಶ್ರಮದ ಬಗ್ಗೆ ತಿಳಿದಿದ್ದ ಸಂಜು ಸ್ಯಾಮ್ಸನ್ ಸಂಭಾವನೆಯನ್ನು ಸಿಬ್ಬಂದಿಗಳಿಗೆ ದಾನ ಮಾಡಿದ್ದರು. ಸಂಜು ಅವರ ಕಾರ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಶ್ಲಾಘಿಸಿದ್ದಾರೆ.
ಕೊನೆಯ ಏಕದಿನ ಪಂದ್ಯದಲ್ಲಿ 48 ಎಸೆತದಲ್ಲಿ 91 ರನ್ ಸಿಡಿಸಿದ್ದ ಸಂಜು ಸ್ಯಾಮ್ಸನ್ ಆಟವನ್ನು ಹರ್ಭಜನ್ ಸಿಂಗ್ ಮೆಚ್ಚಿ ಟ್ವೀಟ್ ಮಾಡಿದ್ದರು. ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ 4ನೇ ಕ್ರಮಾಂಕದಲ್ಲಿ ಏಕೆ ಆಡಬಾರದು? ಎಂದು ಅವರು ಪ್ರಶ್ನಿಸಿದ್ದರು.