ಆಗಸ್ಟ್ 10 ಭಾನುವಾರ, ಈ ಋತುವಿನ ಏಕೈಕ ಏಕದಿನ ಸರಣಿಯನ್ನು ಶ್ರೀಲಂಕಾ ವಿರುದ್ಧ ಭಾರತ ಸೋತಿದೆ. 27 ವರ್ಷಗಳ ನಂತರ ಶ್ರೀಲಂಕಾ ನೆಲದಲ್ಲಿ ಏಕದಿನ ಸರಣಿಯನ್ನು ಭಾರತ ಕಳೆದುಕೊಂಡಿತ್ತು.
ರೋಹಿತ್ ಶರ್ಮಾ ನಾಯಕತ್ವದ ಈ ಸೋಲು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಮುಖ್ಯ ಕೋಚ್ ಆದ ತಕ್ಷಣ ಟೀಮ್ ಇಂಡಿಯಾ ಮೊದಲ ಏಕದಿನ ಸರಣಿಯಲ್ಲಿ ಸೋಲು ಕಂಡಿತ್ತು. ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯನ್ನು ಪರಿಗಣಿಸಿದರೆ ಇದು ಭಾರತ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ.

2025ರ ಚಾಂಪಿಯನ್ಸ್ ಟ್ರೋಫಿಯನ್ನು ಫೆಬ್ರವರಿ-ಮಾರ್ಚ್ನಲ್ಲಿ ಪಾಕಿಸ್ತಾನ ಆಯೋಜಿಸಲಿದೆ. ಅದಕ್ಕೂ ಮುನ್ನ ಭಾರತ ಕೇವಲ 3 ಏಕದಿನ ಪಂದ್ಯಗಳನ್ನು ಆಡಲಿದೆ. ಈ ಎಲ್ಲಾ ಮೂರು ಏಕದಿನ ಪಂದ್ಯಗಳು ಫೆಬ್ರವರಿಯಲ್ಲಿ ನಡೆಯಲಿವೆ. ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾ ಹೆಚ್ಚು ಟಿ20 ಹಾಗೂ ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ಇಂತಹ ಪರಿಸ್ಥಿತಿಯಲ್ಲಿ ಹಲವು ಆಟಗಾರರ ಏಕದಿನ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ಅಂತಹ ಮೂವರು ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.
ಶಿವಂ ದುಬೆ: ಐಪಿಎಲ್ನಲ್ಲಿ ಸಿಕ್ಸರ್ಗಳನ್ನು ಹೊಡಯುವ ಮೂಲಕ ಫೇಮಸ್ ಆಗಿದ್ದ ಶಿವಂ ದುಬೆಗೆ ಬಹುದಿನಗಳ ಬಳಿಕ ಏಕದಿನ ತಂಡದಲ್ಲಿ ಅವಕಾಶ ಪಡೆಯವಲ್ಲಿ ಯಶಸ್ವಿಯಾಗದ್ದರು. ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಸ್ಥಾನದಲ್ಲಿ ಶಿವಂ ದುಬೆ ಆಡಿಸಲಾಗಿತ್ತು.
ಆದರೆ ಶ್ರೀಲಂಕಾ ಪ್ರವಾಸದಲ್ಲಿ ಶಿವಂ ದುಬೆ ಸಿಕ್ಕ ಅವಕಾಶಗಳನ್ನ ಕೈ ಚೆಲ್ಲಿದರು. ಶ್ರೀಲಂಕಾ ವಿರುದ್ದ ಏಕದಿ ಸರಣಿ ಮೂಲಕ ಟೀಮ್ ಇಂಡಿಯಾಕ್ಕೆ 5 ವರ್ಷಗಳ ಬಳಿಕ ಪುನರಾಗಮನ ಮಾಡಿದರು. ಇದಕ್ಕೂ ಮೊದಲು ಅವರು 2019 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೆನ್ನೈನಲ್ಲಿ ತಮ್ಮ ಏಕೈಕ ಏಕದಿನ ಪಂದ್ಯವನ್ನು ಆಡಿದರು. ಆಗ ದುಬೆ ಕೇವಲ 9 ರನ್ ಗಳಿಸಿ ಔಟಾದರು. ಬೌಲಿಂಗ್ನಲ್ಲಿ ಅವರು 7.5 ಓವರ್ಗಳಲ್ಲಿ 68 ರನ್ಗಳನ್ನು ನೀಡಿದರು.
ಆ ಬಳಿಕ ದುಬೆ ಅವರನ್ನು ಏಕದಿನ ತಂಡದಿಂದ ಕೈಬಿಡಲಾಗಿತ್ತು. ಇದೀಗ ಗೌತಮ್ ಗಂಭೀರ್ ಕೋಚ್ ಆದ ಬಳಿಕ ಆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಬಾರಿ ಶಿವಂ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಏಕದಿನ ಸರಣಿಯಲ್ಲಿ ಕ್ರಮವಾಗಿ 25, 0, 9 ರನ್ ಗಳಿಸಿದರೆ, ಬೌಲಿಂಗ್ನಲ್ಲಿ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದಾರೆ.
ಈ ನಿಟ್ಟಿಯಲ್ಲಿ ಶಿವಂ ದುಬೆ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ಖಂಡಿತಾ ಅವಕಾಶ ಸಿಗಲಿದೆ. ಪಾಂಡ್ಯ ಫಿಟ್ ಆಗಿದ್ದರೆ ಅವರ ಸ್ಥಾನವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಶಿವಂ ದುಬೆಗೆ ಏಕದಿನ ತಂಡದಲ್ಲಿ ಅವಕಾಶ ಸಿಗುವುದು ತುಂಬಾ ಕಷ್ಟ.
ಖಲೀಲ್ ಅಹ್ಮದ್: ಭಾರತದ ಪರ 2018ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಎಡಗೈ ಬೌಲರ್ ಖಲೀಲ್ ಅಹ್ಮದ್ ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿಲ್ಲ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಖಲೀಲ್ ಆಯ್ಕೆಯಾಗಿದ್ದರು. ಆದರೆ ಬೆಂಚ್ ಕಾಯಲಷ್ಟೇ ಸೀಮಿತವಾಗಿದ್ದರು.
2019ರ ನಂತರ ಮೊದಲ ಏಕದಿನ ಪಂದ್ಯ ಆಡುತ್ತಾರೆ ಎಂದು ಊಹಿಸಿದರೂ ಅವಕಾಶ ಸಿಗಲಿಲ್ಲ. ಅವರು ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ಅವಕಾಶ ಸಿಗದೆ ಕುಳಿತುಕೊಳ್ಳಬೇಕಾಯಿತು. ಭಾರತದ ಪರ 11 ಏಕದಿನ ಪಂದ್ಯಗಳಲ್ಲಿ ಖಲೀಲ್ 15 ವಿಕೆಟ್ ಪಡೆದಿದ್ದಾರೆ. ಅವರು 5 ವರ್ಷಗಳಿಂದ ಪ್ಲೇಯಿಂಗ್ -11 ಗೆ ಮರಳಲು ಕಾಯುತ್ತಿದ್ದಾರೆ.
ಈಗ ಭಾರತ ಮುಂದಿನ ವರ್ಷ ಫೆಬ್ರವರಿವರಗೆ ಯಾವುದೇ ಏಕದಿನ ಪಂದ್ಯವನ್ನು ಆಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಖಲೀಲ್ ಭಾರತ ಏಕದಿನ ತಂಡಕ್ಕೆ ಪುನರಾಗಮನ ಮಾಡುವುದು ಕಷ್ಟಕರ ಸಂಗತಿ ಆಗಿದೆ.
ಸಂಜು ಸ್ಯಾಮ್ಸನ್: ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ನಲ್ಲಿ ಹೆಚ್ಚು ಚರ್ಚೆಗೆ ಒಳಗಾದ ಆಟಗಾರ ಎಂದರೆ ಸಂಜು ಸ್ಯಾಮ್ಸನ್. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಸ್ಯಾಮ್ಸನ್ ಆಯ್ಕೆಯಾಗಿರಲಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆದವು.
ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಅವರ ಮರಳುವಿಕೆಯು ಸಂಜು ಅವಕಾಶಗಳನ್ನು ಕಸಿದುಕೊಂಡಿತ್ತು. ಸ್ಯಾಮ್ಸನ್ ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಡಿಸೆಂಬರ್ 2023 ರಲ್ಲಿ ಪಾರ್ಲ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 108 ರನ್ ಗಳಿಸಿ ಮಿಂಚಿದರು.
ಇದರ ಹೊರತಾಗಿಯೂ ಸಂಜು ಏಕದಿನ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಇದೀಗ ಭಾರತ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ ನಡೆಸಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಅವರನ್ನು ಭವಿಷ್ಯದಲ್ಲಿ ಮುಂದುವರಿಸುವ ಸಾಧ್ಯತೆ ಇದೆ.
ಇಬ್ಬರು ಫಿಟ್ ಆಗಿದ್ದು ಟೀಮ್ ಇಂಡಿಯಾ ಪರ ಅಬ್ಬರಿಸಲು ತಯಾರಿ ನಡೆಸಿದ್ದಾರೆ. ಹೀಗಾಗಿ ಸಂಜು ಬಹುಶಃ ಇತ್ತೀಚಿನ ದಿನಗಳಲ್ಲಿ ಭಾರತದ ದುರದೃಷ್ಟಕರ ಆಟಗಾರ ಎಂದರೆ ತಪ್ಪಾಗಲಾರದು.