ಭರವಸೆಯ ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ ಅವರ ಮೊನಚಾದ ದಾಳಿಯ ನೆರವಿನಿಂದ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ 8 ವಿಕೆಟ್ಗಳಿಂದ ಸಿಕ್ಕಿಂ ತಂಡವನ್ನು ಮಣಿಸಿತು. ಈ ಮೂಲಕ ಮಯಾಂಕ್ ಪಡೆ ಆಡಿದ 4 ಪಂದ್ಯಗಳಲ್ಲಿ 2 ಜಯ, 2 ಡ್ರಾ ಸಾಧಿಸಿದ್ದು, 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ತಮಿಳುನಾಡು ವಿರುದ್ಧ ಡಿಸೆಂಬರ್ 1 ರಂದು ಮಹತ್ವದ ಪಂದ್ಯವನ್ನು ಆಡಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸಿಕ್ಕಿಂ 18.2 ಓವರ್ಗಳಲ್ಲಿ 82 ರನ್ಗಳಿಗೆ ಆಲೌಟ್ ಆಯಿತು. ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ಕೇವಲ 5.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 86 ರನ್ ಸೇರಿಸಿ ಜಯ ಸಾಧಿಸಿತು.

ಕರ್ನಾಟಕದ ಬೌಲರ್ಗಳ ಬಿಗುವಿನ ದಾಳಿಗೆ ಸಿಕ್ಕಿಂ ಕಕ್ಕಾಬಿಕ್ಕಿಯಾಯಿತು. ಈ ಪಂದ್ಯದಲ್ಲಿ ಸಿಕ್ಕಿಂ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಟಾಪ್ ಆರ್ಡರ್ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಮಧ್ಯಮ ಕ್ರಮಾಂಕದಲ್ಲಿ ಆಶಿಶ್ ಥಾಪಾ (18), ಪ್ರಾಣೇಶ್ ಚೆಟ್ರಿ (17), ಪಾಲ್ಜೋರ್ ತಮಾಂಗ್ (10), ರೋಶನ್ ಕುಮಾರ್ (13), ರೋನಿತ್ ಮೋರೆ (13), ಮಾತ್ರ ಡಬಲ್ ಡಿಜಿಟ್ ಮುಟ್ಟಿದರು. ಉಳಿದಂತೆ ಸಿಕ್ಕಿಂ ಬ್ಯಾಟರ್ಗಳು ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.
ಕರ್ನಾಟಕದ ಪರ ಲೆಗ್ ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ ಮೊನಚಾದ ದಾಳಿ ಸಂಘಟಿಸಿದರು. ಶ್ರೇಯಸ್ ಗೋಪಾಲ್ 4 ಓವರ್ ಬೌಲಿಂಗ್ ಮಾಡಿ 3.25ರ ಸರಾಸರಿಯಲ್ಲಿ 13 ರನ್ ನೀಡಿ 5 ವಿಕೆಟ್ ಪಡೆದರು. ಇನ್ನು ವೇಗಿ ವಿದ್ಯಾಧರ್ ಪಾಟೀಲ್ 10 ರನ್ ನೀಡಿ 3 ವಿಕೆಟ್ ಕಬಳಿಸಿದರು. ವಿಜಯ್ ಕುಮಾರ್ ವೈಶಾಖ್ 14 ರನ್ ನೀಡಿ 2 ವಿಕೆಟ್ ಉರುಳಿಸಿದರು.
ಕರ್ನಾಟಕದ ನಾಯಕ ಮಯಾಂಕ್ ಅಗರ್ವಾಲ್ ಸೊನ್ನೆ ಸುತ್ತಿದರು. ಎರಡನೇ ವಿಕೆಟ್ಗೆ ಮನೀಷ್ ಪಾಂಡೆ, ಕೃಷ್ಣಾ ಶ್ರೀಜೇತ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 63 ರನ್ ಸೇರಿಸಿ ತಂಡಕ್ಕೆ ನೆರವಾಯಿತು. ಶ್ರೀಜೇತ್ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 37 ರನ್ ಸಿಡಿಸಿ ಔಟ್ ಆದರು. ಮನೀಷ್ ಪಾಂಡೆ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 30 ರನ್ ಬಾರಿಸಿದರು.
ಇ ಗುಂಪಿನ ಪಂದ್ಯದಲ್ಲಿ ಕೇರಾಳ 43 ರನ್ ಗಳಿಂದ ಮುಂಬೈ ತಂಡವನ್ನು ಮಣಿಸಿತು. ಸಲ್ಮಾನ್ ನಿಜಾರ್ ಹಾಗೂ ರೋಹನ್ ಕುನ್ನುಮ್ಮಲ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಕೇರಳ 20 ಓವರ್ಗಳಲ್ಲಿ 5 ವಿಕೆಟ್ಗೆ 234 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ನಿಗದಿತ ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 191 ರನ್ ಸೇರಿಸಿ ಸೋಲು ಕಂಡಿತು.