ರಾಜಕೋಟ್ನಲ್ಲಿ ನಡೆಯುತ್ತಿರುವ 2025-26ನೇ ಸಾಲಿನ ಬಿ ಗುಂಪಿನ ಪಂದ್ಯದಲ್ಲಿ ಭರವಸೆಯ ಬೌಲರ್ ಶ್ರೇಯಸ್ ಗೋಪಾಲ್ ಮಾರಕ ದಾಳಿ ನಡೆಸಿದರೂ ಪ್ರವಾಸಿ ಕರ್ನಾಟಕ ತಂಡ ಇನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ವಿಫಲವಾಗಿದೆ. ಮೊದಲ ಇನಿಂಗ್ಸ್ನಲ್ಲಿ ಸೌರಾಷ್ಟ್ರ 376 ರನ್ಗೆ ಆಲೌಟ್ ಆಯಿತು. ಈ ಮೂಲಕ ಆತಿಥೇಯ ತಂಡ 4 ರನ್ ಮುನ್ನಡೆ ಸಾಧಿಸಿದೆ.
ಶುಕ್ರವಾರ ನಡೆದ ಮೂರನೇ ದಿನದಾಟದ ಪಂದ್ಯದಲ್ಲಿ ಸೌರಾಷ್ಟ್ರ ಮೊದಲ ಇನಿಂಗ್ಸ್ನಲ್ಲಿ 4 ವಿಕೆಟ್ಗೆ 200 ರನ್ಗಳಿಂದ ಆಟ ಮುಂದುವರೆಸಿತು. ಈ ವೇಳೇ ಸೌರಾಷ್ಟ್ರ ತಂಡದ ಸ್ಟಾರ್ ಆಟಗಾರ ಪ್ರೇರಕ್ ಮಂಕದ್ ಅವರನ್ನು ಶ್ರೇಯಸ್ ಗೋಪಾಲ್ 27 ರನ್ ಆಗಿದ್ದಾಗ ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಅರ್ಪಿತ್ ವಸವದ್ 123 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 58 ರನ್ ಬಾರಿಸಿ ಗೋಪಾಲ್ಗೆ ವಿಕೆಟ್ ಒಪ್ಪಿಸಿದರು.

ಬೌಲಿಂಗ್ನಲ್ಲಿ ಕಮಾಲ್ ಪ್ರದರ್ಶನ ನೀಡಿದ್ದ ಧರ್ಮೆಂದ್ರ ಸಿಂಗ್ ಜಡೇಜಾ ಅವರಿಗೆ ಲೆಗ್ ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ ಖೆಡ್ಡಾ ತೋಡಿದರು. ಮೂರನೇ ದಿನದಾಟದಲ್ಲಿ ಶ್ರೇಯಸ್ ಗೋಪಾಲ್ ಅವರ ಸ್ಪಿನ್ ಜಾದು ಅರಿಯುವಲ್ಲಿ ಸೌರಾಷ್ಟ್ರ ಬ್ಯಾಟರ್ಗಳು ವಿಫಲರಾದರು. ಮಧ್ಯಮ ಕ್ರಮಾಂಕದ ಸಮ್ಮರ್ ಗಜ್ಜರ್ 45 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಕರ್ನಾಟಕ ತಂಡದ ಸ್ಟಾರ್ ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ ಅಬ್ಬರಿಸಿದರು. ಇವರು ಸೌರಾಷ್ಟ್ರ ತಂಡದ ಬ್ಯಾಟರ್ಗಳನ್ನು ಬಹುವಾಗಿ ಕಾಡಿದರು. ಇವರ ಎಸೆತಗಳನ್ನು ಎದುರಿಸುವಲ್ಲಿ ಹಿಂದೆ ಬಿದ್ದರು. ಇನ್ನು ಶ್ರೇಯಸ್ ಗೋಪಾಲ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿದರು. ಶ್ರೇಯಸ್ ಇದಕ್ಕೂ ಮೊದಲು 5 ವಿಕೆಟ್ ಪಡೆದಿದ್ದೇ ದೊಡ್ಡ ಸಾಧನೆ ಆಗಿತ್ತು. ಆದರೆ ಇದೇ ಮೊದಲ ಬಾರಿಗೆ 8 ವಿಕೆಟ್ ಪಡೆದು ಶ್ರೇಷ್ಠ ಸಾಧನೆ ಮಾಡಿದರು.