ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು 2023-24ರ ಋತುವಿನ (ಅಕ್ಟೋಬರ್ 1, 2023ರಿಂದ ಸೆಪ್ಟೆಂಬರ್ 30, 2024 ರವರೆಗೆ) ಭಾರತ ಹಿರಿಯ ಪುರುಷರ ತಂಡದ ವಾರ್ಷಿಕ ಆಟಗಾರರ ಒಪ್ಪಂದಗಳನ್ನು ಬುಧವಾರ ಪ್ರಕಟಿಸಿದೆ.
ಇದೇ ವೇಳೆ ಭಾರತ ಕ್ರಿಕೆಟ್ ತಂಡದ ಸ್ಟಾರ್ ಜೋಡಿಗಳಾದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ಪಟ್ಟಿಯಲ್ಲಿ ಪ್ರಮುಖವಾಗಿ ಕೈಬಿಡಲಾಗಿದೆ. ಗಮನಾರ್ಹವಾಗಿ, ಈ ಇಬ್ಬರು ಆಟಗಾರರು 2024ರ ರಣಜಿ ಟ್ರೋಫಿ ಪಂದ್ಯಾವಳಿ ಆಡುವಂತೆ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಬಿಸಿಸಿಐ ಸೂಚಿಸಿದ್ದರೂ ಆಡಿರಲಿಲ್ಲ. ಅದಕ್ಕಾಗಿ ಇದೀಗ ಬೆಲೆ ತೆತ್ತಿದ್ದಾರೆ.

"ಈ ಸುತ್ತಿನ ಶಿಫಾರಸ್ಸುಗಳಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರನ್ನು ವಾರ್ಷಿಕ ಒಪ್ಪಂದಗಳಿಗೆ ಪರಿಗಣಿಸಲಾಗಿಲ್ಲ ಎಂಬುದನ್ನು ಗಮನಿಸಿ," ಎಂದು ಬಿಸಿಸಿಐ ಹೇಳಿದೆ. ಇವರಿಬ್ಬರನ್ನು ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಕೈಬಿಡುವ ಬಗ್ಗೆ ಈಗಾಗಲೇ ಸಾಕಷ್ಟು ಅನುಮಾನಗಳು ಹಬ್ಬಿದ್ದವು.
ಇಶಾನ್ ಕಿಶನ್ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯದಲ್ಲಿ ವಿರಾಮ ತೆಗೆದುಕೊಂಡು ತವರಿಗೆ ವಾಪಸ್ಸಾದರು. ಅದರ ನಂತರ ಇಶಾನ್ ಕಿಶನ್ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಲಿಲ್ಲ.
ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ರಾಷ್ಟ್ರೀಯ ತಂಡಕ್ಕೆ ಮರಳಲು ಇಶಾನ್ ಕಿಶನ್ ಕೆಲವು ರೀತಿಯ ದೇಶೀಯ ಆಟವನ್ನು ಆಡಬೇಕು ಎಂದು ಸಂಪೂರ್ಣವಾಗಿ ಸ್ಪಷ್ಟಪಡಿಸಿದ್ದರು. ಆದಾಗ್ಯೂ, ಅವರು ತಮ್ಮ ರಾಜ್ಯ ತಂಡ ಜಾರ್ಖಂಡ್ಗಾಗಿ ರಣಜಿ ಟ್ರೋಫಿ ಪಂದ್ಯಗಳನ್ನು ತಪ್ಪಿಸಿಕೊಳ್ಳುತ್ತಲೇ ಇದ್ದರು.
ಶ್ರೇಯಸ್ ಅಯ್ಯರ್ ಇತ್ತೀಚೆಗೆ ಬೆನ್ನುನೋವಿನ ಕಾರಣ ಮುಂಬೈನ ರಣಜಿ ಟ್ರೋಫಿ ಪಂದ್ಯದಿಂದ ಹೊರಗುಳಿದಿದ್ದರು. ಈ ಹಿಂದೆ ಇವರಿಬ್ಬರನ್ನು ಬಿಸಿಸಿಐ ಗುತ್ತಿಗೆ ಪಟ್ಟಿಯಿಂದ ಕೈಬಿಡಲಾಗುವುದು ಎಂದು ಅನೇಕ ವರದಿಗಳು ಭವಿಷ್ಯ ನುಡಿದಿದ್ದವು.
"ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಹೊರಗಿಡುವ ಸಾಧ್ಯತೆಯಿದೆ. ಏಕೆಂದರೆ ಬಿಸಿಸಿಐನ ಆದೇಶದ ಹೊರತಾಗಿಯೂ ಇಬ್ಬರೂ ದೇಶೀಯ ಕ್ರಿಕೆಟ್ನಲ್ಲಿ ಆಡುತ್ತಿಲ್ಲ," ಎಂದು ಮೂಲಗಳು ತಿಳಿಸಿದ್ದವು.
ಇನ್ನು ಇತರ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರನ್ನು ಅತ್ಯಧಿಕ A+ ವಿಭಾಗದಲ್ಲಿ ಇರಿಸಲಾಗಿದೆ.
ಆರು ಆಟಗಾರರಾದ ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು A ವಿಭಾಗದಲ್ಲಿದ್ದಾರೆ.
"ಹೆಚ್ಚುವರಿಯಾಗಿ, ನಿಗದಿತ ಅವಧಿಯೊಳಗೆ ಕನಿಷ್ಠ 3 ಟೆಸ್ಟ್ ಅಥವಾ 8 ಏಕದಿನ ಅಥವಾ 10 ಟಿ20 ಪಂದ್ಯಗಳನ್ನು ಆಡುವ ಮಾನದಂಡವನ್ನು ಪೂರೈಸುವ ಕ್ರೀಡಾಪಟುಗಳನ್ನು ಸ್ವಯಂಚಾಲಿತವಾಗಿ ಅನುಪಾತದ ಆಧಾರದ ಮೇಲೆ ಗ್ರೇಡ್ Cಗೆ ಸೇರಿಸಲಾಗುತ್ತದೆ".
"ಉದಾಹರಣೆಗೆ, ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್ ಅವರು ಇಲ್ಲಿಯವರೆಗೆ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಧರ್ಮಶಾಲಾದಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುವ 5ನೇ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದರೆ, ಗ್ರೇಡ್ Cಗೆ ಸೇರ್ಪಡೆಗೊಳ್ಳುತ್ತಾರೆ," ಎಂದು ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ.
ಆಯ್ಕೆ ಸಮಿತಿಯು ಈ ಕೆಳಗಿನ ಕ್ರೀಡಾಪಟುಗಳಾದ ಆಕಾಶ್ ದೀಪ್, ವಿಜಯ್ ಕುಮಾರ್ ವೈಶಾಕ್, ಉಮ್ರಾನ್ ಮಲಿಕ್, ಯಶ್ ದಯಾಳ್ ಮತ್ತು ವಿದ್ವತ್ ಕಾವೇರಪ್ಪ ಅವರಿಗೆ ವೇಗದ ಬೌಲಿಂಗ್ ಒಪ್ಪಂದಗಳನ್ನು ಶಿಫಾರಸು ಮಾಡಿದೆ. ಎಲ್ಲಾ ಆಟಗಾರರು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಅವಧಿಯಲ್ಲಿ ದೇಶೀಯ ಕ್ರಿಕೆಟ್ನಲ್ಲಿ ಭಾಗವಹಿಸಲು ಆದ್ಯತೆ ನೀಡಬೇಕು ಎಂದು ಬಿಸಿಸಿಐ ಸೂಚನೆ ನೀಡಿದೆ.
ಗ್ರೇಡ್ A+ (4 ಆಟಗಾರರು): ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ.
ಗ್ರೇಡ್ A (6 ಆಟಗಾರರು): ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆಎಲ್ ರಾಹುಲ್, ಶುಭ್ಮನ್ ಗಿಲ್ ಮತ್ತು ಹಾರ್ದಿಕ್ ಪಾಂಡ್ಯ.
ಗ್ರೇಡ್ B (5 ಆಟಗಾರರು): ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್.
ಗ್ರೇಡ್ C (15 ಆಟಗಾರರು): ರಿಂಕು ಸಿಂಗ್, ತಿಲಕ್ ವರ್ಮಾ, ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಖೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಶ್ದೀಪ್ ಸಿಂಗ್, ಕೆಎಸ್ ಭರತ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ರಜತ್ ಪಾಟಿದಾರ್.