ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿರುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ಟೆಸ್ಟ್ ತಂಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇನ್ನು ಐಪಿಎಲ್ನಲ್ಲಿ ಆರ್ಸಿಬಿ ಪರ ಮಿಂಚು ಹರಿಸಿದ್ದ ವೇಗಿ ಯಶ್ ದಯಾಳ್, ದುಲೀಪ್ ಟ್ರೋಫಿಯಲ್ಲೂ ಬಿಗುವಿನ ದಾಳಿ ಸಂಘಟಿಸಿದ್ದರು. ಹೀಗಾಗಿ ಅವರಿಗೆ ಆಡುವ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಹಲವು ಯುವ ಮುಖಗಳಿಗೆ ಬಿಸಿಸಿಐ ಆಯ್ಕೆ ಸಮಿತಿ ಅವಕಾಶ ನೀಡಿದ್ದು, ಟೀಮ್ ಇಂಡಿಯಾದ ಅನುಭವಿಗಳಾದ ಶ್ರೇಯಸ್ ಅಯ್ಯರ್ ಹಾಗೂ ಮೊಹಮ್ಮದ್ ಶಮಿ ಅವರನ್ನು ಕೈ ಬಿಡಲಾಗಿದೆ. ಈ ಇಬ್ಬರೂ ಆಟಗಾರರನ್ನು ಸೇರಸಿಕೊಳ್ಳದೇ ಇರುವುದಕ್ಕೇ ಕಾರಣ ಏನು ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಸದ್ಯ ದುಲೀಪ್ ಟ್ರೋಫಿಯಲ್ಲಿ ಅಂಗಳ ಪ್ರವೇಶಿಸಿದ್ದಾರೆ. ಆದರೆ ಅವರು ಬ್ಯಾಟ್ನಿಂದ ದೊಡ್ಡ ಇನಿಂಗ್ಸ್ ಮೂಡಿ ಬಂದಿಲ್ಲ. ಇದರ ಮಧ್ಯೆ ಅವರಿಗೆ ಫಿಟ್ನೆಸ್ ಸಮಸ್ಸೆ ಇರುವುದಾಗಿ ತಿಳಿದು ಬಂದಿದೆ.
ಬಿಸಿಸಿಐ ಶ್ರೇಯಸ್ ಅಯ್ಯರ್ ಹಾಗೂ ಇಶಾನ್ ಕಿಶನ್ಗೆ ರಣಜಿ ಟ್ರೋಫಿಯಲ್ಲಿ ಬ್ಯಾಟ್ ಮಾಡಿ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸುವಂತೆ ಸೂಚಿಸಿತ್ತು. ಆದರೆ ಆರಂಭದಲ್ಲಿ ಶ್ರೇಯಸ್ ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಬಳಿಕ ಮುಂಬೈ ಪರ ಅಖಾಡಕ್ಕೆ ಇಳಿದರು. ಆದರೆ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇನ್ನು ಬಿಸಿಸಿಐ ಸಹ ಇವರನ್ನು ಕೇಂದ್ರ ಗುತ್ತಿಗೆ ಒಪ್ಪಂದದಿಂದ ಕೈ ಬಿಟ್ಟಿತು.
ಶ್ರೇಯಸ್ ಅಯ್ಯರ್ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ರನ್ಗಳನ್ನು ಕಲೆ ಹಾಕಬೇಕಿದೆ. ಅಲ್ಲದೆ ಈಗಾಗಲೇ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಶ್ರೇಯಸ್ ದೇಶೀಯ ಟೂರ್ನಿಗಳಲ್ಲಿ ಆರ್ಭಟ ನಡೆಸಿದರೆ, ಬಿಸಿಸಿಐ ಆಯ್ಕೆ ಸಮಿತಿ ಇವರತ್ತ ನೋಡಬಹುದು. ರನ್ ಕಲೆ ಹಾಕುವಲ್ಲಿ ವಿಫಲರಾದರೆ, ಶ್ರೇಯಸ್ ಟೆಸ್ಟ್ ತಂಡ ಸೇರುವುದು ಕಷ್ಟ.

ಟೀಮ್ ಇಂಡಿಯಾದ ಸ್ವಿಂಗ್ ಬೌಲರ್ ಮೊಹಮ್ಮದ್ ಶಮಿ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಅವರು ನೆಟ್ಸ್ನಲ್ಲಿ ಅಭ್ಯಾಸವನ್ನು ಸಹ ಆರಂಭಿಸಿದ್ದಾರೆ. ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಬಿಸಿಸಿಐ ಆಯ್ಕೆ ಸಮಿತಿಯ ಅಜಿತ್ ಅಗರ್ಹರ್, ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಸೇರಬಹುದು ಎಂದು ತಿಳಿಸಿದ್ದರು. ಇನ್ನು ಶಮಿ ಆಯ್ಕೆಯ ಎಲ್ಲ ಬಾಕ್ಸ್ಗಳನ್ನು ಟಿಕ್ ಮಾಡಿಲ್ಲ. ಇನ್ನು ಶಮಿ ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್ನಲ್ಲೂ ತಂಡವನ್ನು ಸೇರುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಮೊಹಮ್ಮದ್ ಶಮಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದರು. ಆದರೆ ಫೈನಲ್ ಬಳಿಕ ಅವರು ಗಾಯಕ್ಕೆ ತುತ್ತಾದರು. ಅಲ್ಲದೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಈಗ ಗುಣಮುಖರಾಗುತ್ತಿದ್ದಾರೆ. ಇವರು ಅಕ್ಟೋಬರ್ 11 ರಿಂದ ಪ್ರಾರಂಭವಾಗುವ ರಣಜಿ ಟ್ರೋಫಿಗೆ ಬಂಗಾಳ ತಂಡದ ಪರ ಆಡುವ ಸಾಧ್ಯತೆ ಇದ್ದು, ಈ ವೇಳೆ ಶಮಿ ತಮ್ಮ ಫಿಟ್ನೆಸ್ ಸಾಬೀತು ಪಡಿಸಲಿದ್ದಾರೆ.