ಈಗಾಗಲೇ ಸೀಮಿತ ಓವರ್ಗಳ ತಂಡಕ್ಕೆ ಕಂ ಬ್ಯಾಕ್ ಮಾಡಿರುವ ಶ್ರೇಯಸ್ ಅಯ್ಯರ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶೀಯ ಬುಚ್ಚಿ ಬಾಬು ಟೂರ್ನಿಯಲ್ಲಿ ರನ್ ಕಲೆ ಹಾಕಿ ಬಿಸಿಸಿಐ ಆಯ್ಕೆ ಸಮಿತಿಯ ಕದ ತಟ್ಟುವ ಪ್ಲ್ಯಾನ್ ಹಾಕಿಕೊಂಡಿದ್ದರು. ಆದರೆ ದೇಶೀಯ ಟೂರ್ನಿಯಲ್ಲಿ ಶ್ರೇಯಸ್ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದಾರೆ.
ಬುಚ್ಚಿ ಬಾಬು ಟೂರ್ನಿಯಲ್ಲಿ ಬ್ಯಾಟ್ ಮಾಡುತ್ತಿರುವ ಶ್ರೇಯಸ್ ಅಯ್ಯರ್ ಎರಡನೇ ಇನಿಂಗ್ಸ್ನಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ಈ ಮೂಲಕ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಕ್ಕೆ ಪ್ರವೇಶ ಪಡೆಯಬೇಕು ಎಂಬ ಕನಸು ದೂರ ಸರಿದಂತೆ ಕಾಣುತ್ತಿದೆ. ಬರೀ ಈ ಸ್ಥಿತಿ ಈ ಒಬ್ಬ ಆಟಗಾರನದ್ದು ಅಷ್ಟೇ ಅಲ್ಲ, ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿರುವ ಮುಂಬೈ ತಂಡದ ಬ್ಯಾಟರ್ಗಳದ್ದಾಗಿದೆ.

ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮಗೆ ಅವಕಾಶ ಸಿಗತ್ತದೋ ಇಲ್ಲವೋ ತನಗೆ ತಿಳಿದಿಲ್ಲ ಎಂದು ತಿಳಿಸಿರುವ ಸರ್ಫರಾಜ್ ಖಾನ್ ಸಹ, ಬುಚ್ಚಿ ಬಾಬು ಕ್ರಿಕೆಟ್ ಟೂರ್ನಿಯಲ್ಲಿ ರನ್ ಕಲೆ ಹಾಕುವಲ್ಲಿ ಪರದಾಟ ನಡೆಸಿದರು. ಪರಿಣಾಮ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರೂ, ಇವರಿಗೆ ಮುಂಬರುವ ಬಾಂಗ್ಲಾ ವಿರುದ್ಧ ಟೆಸ್ಟ್ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟವಾಗಿದೆ. ಈ ಸ್ಟಾರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರಿಂದ ಮುಂಬೈಗೆ ಸೋಲಿನ ಭೀತಿ ಎದುರಾಗಿದೆ.
ಮುಂಬೈ ತಂಡದಲ್ಲಿ ಸ್ಥಾನ ಪಡೆದಿರುವ ಸ್ಟಾರ್ ಬ್ಯಾಟರ್ಗಳು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡುವಲ್ಲಿ ವಿಫಲರಾದರು. ಮೊದಲ ಇನಿಂಗ್ಸ್ನಂತೆ ಎರಡನೇ ಇನಿಂಗ್ಸ್ನಲ್ಲೂ ಶ್ರೇಯಸ್ ಅಯ್ಯರ್ ಹಾಗೂ ಸರ್ಫರಾಜ್ ಖಾನ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ಇನಿಂಗ್ಸ್ನಲ್ಲಿ 72 ಎಸೆತಗಳನ್ನು ಎದುರಿಸಿದ ಶ್ರೇಯಸ್ 22 ರನ್ ಬಾರಿಸಿ ಔಟ್ ಆದರು. ಸರ್ಫರಾಜ್ ಖಾನ್ ಮೊದಲ ಇನಿಂಗ್ಸ್ನಲ್ಲಿ 10ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ, ಎರಡನೇ ಇನಿಂಗ್ಸ್ನಲ್ಲಿ ಸೊನ್ನೆ ಸುತ್ತಿದರು.

ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಗೆ ಇನ್ನು ತಂಡವನ್ನು ಪ್ರಕಟಿಸಿಲ್ಲ. ಮುಂದಿನ ತಿಂಗಳು ಮೊದಲ ವಾರದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಂಡಿದ್ದ ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್ ಆಸೆಗೆ ಆರಂಭದಲ್ಲಿ ಪೆಟ್ಟು ಬಿದ್ದಿದೆ.
ಸೆಪ್ಟೆಂಬರ್ 5 ರಿಂದ ದುಲೀಪ್ ಟ್ರೋಫಿ ನಡೆಯಲಿದೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾಕ್ಕೆ ಮರಳಲು ಯೋಚಿಸಿರುವ ಎಲ್ಲ ಕ್ರಿಕೆಟ್ ಆಟಗಾರರು ಮೈದಾನಕ್ಕೆ ಇಳಿಯಲಿದ್ದಾರೆ. ಇಲ್ಲಿ ನೀಡುವ ಪ್ರದರ್ಶನ ಟೆಸ್ಟ್ ತಂಡ ಸೇರಲು ವೇದಿಕೆ ಆಗಬಹುದು.
ತಮಿಳುನಾಡು ವಿರುದ್ಧದ ಬುಚ್ಚಿ ಬಾಬು ಟೂರ್ನಿಯಲ್ಲಿ ಮುಂಬೈ ತಂಡ ಸಂಕಷ್ಟದಲ್ಲಿದೆ. ಮುಂಬೈ ಪಂದ್ಯ ಗೆಲ್ಲಲು ಇನ್ನೂ 400 ರನ್ ಗಳಿಸಬೇಕಿದ್ದು ಐದು ವಿಕೆಟ್ಗಳು ಮಾತ್ರ ಬಾಕಿ ಉಳಿದಿವೆ. ಬುಚ್ಚಿಬಾಬು ಪಂದ್ಯಾವಳಿಯ ಪಂದ್ಯ ನಾಲ್ಕು ದಿನಗಳ ಕಾಲ ನಡೆಯುತ್ತದೆ.