ಶುಕ್ರವಾರ, ಸೆಪ್ಟೆಂಬರ್ 15ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ.
ಬಾಂಗ್ಲಾದೇಶ ವಿರುದ್ಧದ ಅನೌಪಚಾರಿಕ ಪಂದ್ಯದ ಮೊದಲು ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅಭ್ಯಾಸದಲ್ಲಿ ಭಾಗವಹಿಸಿದರು.
ಸುದೀರ್ಘ ದಿನಗಳ ಗಾಯದ ಚೇತರಿಕೆ ನಂತರ ಶ್ರೇಯಸ್ ಅಯ್ಯರ್ ಅವರು ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಗುಂಪು ಪಂದ್ಯಗಳಿಗಾಗಿ ಭಾರತದ ಆಡುವ 11ರ ಬಳಗಕ್ಕೆ ಮರಳಿದರು.

ಆದರೆ, ಬೆನ್ನು ಸೆಳೆತ ಕಾಣಿಸಿಕೊಂಡಿದ್ದರಿಂದ ಶ್ರೇಯಸ್ ಅಯ್ಯರ್ ಅವರು ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧದ ಸೂಪರ್ 4 ಪಂದ್ಯಗಳಿಂದ ಹೊರಗುಳಿಯಬೇಕಾಯಿತು. ಈ ಎರಡೂ ಪಂದ್ಯಗಳನ್ನೂ ಭಾರತ ಗೆದ್ದಿದ್ದು, ಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಎರಡು ಸೂಪರ್ 4 ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಅವರ ಬದಲಿಗೆ ಕೆಎಲ್ ರಾಹುಲ್ ತಂಡದಲ್ಲಿ ಸ್ಥಾನ ಪಡೆದು ಪುನರಾಗಮನ ಮಾಡಿದರು ಮತ್ತು ಪಾಕಿಸ್ತಾನ ವಿರುದ್ಧ ಭರ್ಜರಿ ಶತಕ ಮತ್ತು ಶ್ರೀಲಂಕಾ ವಿರುದ್ಧ ಅಮೂಲ್ಯ 39 ರನ್ ಗಳಿಸಿದರು.
ಇದೀಗ, ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೂ ಮುನ್ನ ಶ್ರೇಯಸ್ ಅಯ್ಯರ್ ಅವರು ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದು, ಸಂಪೂರ್ಣ ಫಿಟ್ನೆಸ್ಗೆ ಮರಳುವುದನ್ನು ಸೂಚಿಸುತ್ತದೆ.
ಶ್ರೇಯಸ್ ಅಯ್ಯರ್ ಅವರ ಬೆನ್ನುನೋವು ಸಣ್ಣ ಪ್ರಮಾಣದ್ದಾಗಿದೆ ಎಂದು ಹೇಳಲಾಗುತ್ತದೆ. ಆದರೆ ಅವರು ಶುಕ್ರವಾರದ ಬಾಂಗ್ಲಾದೇಶದ ಪಂದ್ಯಕ್ಕೆ ಲಭ್ಯರಾಗುತ್ತಾರೆಯೇ ಎಂಬುದರ ಕುರಿತು ಕಾದು ನೋಡಬೇಕಿದೆ.
ಒಂದು ವೇಳೆ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡರೆ, ಯಾರನ್ನು ಹೊರಗಿಡಲಾಗುತ್ತದೆ ಎಂಬುದು ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ಅವರ ಬದಲಿ ಸ್ಥಾನ ಪಡೆದು ಕೆಎಲ್ ರಾಹುಲ್ ಎರಡು ಪಂದ್ಯಗಳಲ್ಲಿ ಮಿಂಚಿದ್ದಾರೆ ಮತ್ತು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.
ಇನ್ನು ಇಶಾನ್ ಕಿಶನ್ ಕೂಡ ಬ್ಯಾಟಿಂಗ್ನಲ್ಲಿ ಪಾಕಿಸ್ತಾನ ವಿರುದ್ಧ 82 ರನ್ ಗಳಿಸಿ ಭಾರತ ತಂಡದ ಸಂಕಷ್ಟದ ಸಮಯದಲ್ಲಿ ನೆರವಾಗಿದ್ದಾರೆ. ಶ್ರೀಲಂಕಾ ವಿರುದ್ಧವೂ ಉಪಯುಕ್ತ 33 ರನ್ ಗಳಿಸಿದರು. ಹೀಗಾಗಿ ಶ್ರೇಯಸ್ ಅಯ್ಯರ್ಗೆ ಆಡುವ 11ರ ಬಳಗದಲ್ಲಿ ಅವಕಾಶ ನೀಡಬೇಕೆ ಎಂಬ ಪ್ರಶ್ನೆ ಭಾರತ ತಂಡದ ಮ್ಯಾನೇಜ್ಮೆಂಟ್ಗೆ ತಲೆನೋವಾಗಿ ಪರಿಣಮಿಸಿದೆ.

ಇನ್ನು ಶ್ರೇಯಸ್ ಅಯ್ಯರ್ ಹೊರತುಪಡಿಸಿ, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಶಮಿ ಮತ್ತು ಪ್ರಸಿದ್ಧ್ ಕೃಷ್ಣ ಕೂಡ ಬಾಂಗ್ಲಾದೇಶದ ವಿರುದ್ಧ ಅನೌಪಚಾರಿಕ ಪಂದ್ಯದಲ್ಲಿ ಆಡಬಹುದು. ಏಕೆಂದರೆ ಭಾರತ ತಂಡ ಭಾನುವಾರ, ಸೆಪ್ಟೆಂಬರ್ 17ರಂದು ನಡೆಯುವ ಫೈನಲ್ ಪಂದ್ಯದಲ್ಲಿ ರೀಫ್ರೆಶ್ ಮೂಡ್ನಲ್ಲಿ ಬಯಸಿದೆ.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಪ್ರಸಿದ್ಧ್ ಕೃಷ್ಣ.