
ಭಾರತ ಹಾಗೂ ಶ್ರೀಲಂಕಾ ಸೀಮಿತ ಓವರ್ಗಳ ಸರಣಿಯಲ್ಲಿ ಜುಲೈ ತಿಂಗಳಲ್ಲಿ ಸೆಣೆಸಾಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಘೋಷಿಸಿದ್ದಾರೆ. ಭಾರತ ತಂಡ ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಯಲ್ಲಿ ಭಾಗಿಯಾಗುತ್ತಿರುವಂತೆಯೇ ಪ್ರತ್ಯೇಕವಾದ ತಂಡ ಶ್ರೀಲಂಕಾ ಪ್ರವಾಸಕ್ಕೆ ತೆರಳಲಿದೆ ಎಂಬುದನ್ನು ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಏಕದಿನ ಸ್ಪೆಶಲಿಸ್ಟ್ಗಳ ಈ ತಂಡದಲ್ಲಿ ಶ್ರೇಯಸ್ ಐಯ್ಯರ್ ಕೂಡ ಸ್ಥಾನವನ್ನು ಪಡೆಯಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಲಿದೆ.
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭುಜದ ನೋವಿಗೆ ಒಳಗಾಗಿದ್ದ ಶ್ರೇಯಸ್ ಐಯ್ಯರ್ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಸಂಪೂರ್ಣ ಐಪಿಎಲ್ನಿಂದಲೂ ಐಯ್ಯರ್ ಹೊರಗುಳಿದಿದ್ದರು. ಈಗ ಶ್ರೀಲಂಕಾ ವಿರುದ್ಧದ ಪ್ರವಾಸದ ಸಂದರ್ಭದಲ್ಲಿಯೂ ಶ್ರೇಯಸ್ ಐಯ್ಯರ್ ಸಂಪೂರ್ಣವಾಗಿ ಗುಣಮುಖರಾಗುವುದು ಅನುಮಾನವಾಗಿದೆ.
ಏಪ್ರಿಲ್ 8 ರಂದು ಶ್ರೇಯಸ್ ಐಯ್ಯರ್ಗೆ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಭಾಗಿಯಾಗುವ ಮುನ್ನ ಐಯ್ಯರ್ಗೆ ಕನಿಷ್ಠ 3 ತಿಂಗಳ ವಿಶ್ರಾಂತಿಯ ಅಗತ್ಯವಿದೆ. ಅದರಲ್ಲೂ ಮುಂಬರುವ ಟಿ20 ವಿಶ್ವಕಪ್ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಸಿಸಿಐನ ವೈದ್ಯಕೀಯ ಸಿಬ್ಬಂದಿಗಳು, ತಂಡದ ಮ್ಯಾನೇಜ್ಮೆಂಟ್ ಹಾಗೂ ರಾಷ್ಟ್ರೀಯ ಆಯ್ಕೆಗಾರರು ಆಟಗಾರ ಸಂಪೂರ್ಣ ಗಾಯದಿಂದ ಮುಕ್ತವಾಗಿರುವ ಗುರಿಯನ್ನು ಹೊಂದಿದ್ದಾರೆ.
ಶ್ರೇಯಸ್ ಐಯ್ಯರ್ ಅಲಭ್ಯತೆಯಿಂದಾಗಿ ಮುಂಬರುವ ಶ್ರೀಲಂಕಾ ವಿರುದ್ಧದ ಸರಣಿಗೆ ಶಿಖರ್ ಧವನ್ ಅಥವಾ ಹಾರ್ದಿಕ್ ಪಾಂಡ್ಯ ನಾಯಕತ್ವದ ರೇಸ್ನಲ್ಲಿದ್ದಾರೆ. ಜುಲೈ 13ರಿಂದ 27ರ ವರೆಗೆ ಶ್ರೀಲಂಕಾ ವಿರುದ್ಧದ ಮೂರು ಏಕದಿನ ಹಾಗೂ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.