ನವದೆಹಲಿ: ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಟಿ20 ತಂಡಕ್ಕೆ ಮರಳಿದ್ದಾರೆ. ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಶುಕ್ರವಾರ ಬದಲಿ ಆಟಗಾರನನ್ನು ಘೋಷಣೆ ಮಾಡಿದೆ. ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಿಕೊಳ್ಳಲಿದ್ದಾರೆ.
ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಕ್ಕೆ ತುತ್ತಾಗಿದ್ದರಿಂದ ಇವರು ಟಿ20 ಸರಣಿಯಿಂದಲೂ ಹೊರ ನಡೆದಿದ್ದಾರೆ. ವಾಷಿಂಗ್ಟನ್ ಸುಂದರ್ ಅವರು ರಾಯ್ಪುರದಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದ ವೇಳೆ ಬೌಲಿಂಗ್ ಮಾಡುವಾಗ ಸ್ನಾಯು ಸೆಳೆತ ಅನುಭವಿಸಿದ್ದರಿಂದ ಅವರು ಸರಣಿಯಿಂದ ಹೊರ ನಡೆದಿದ್ದಾರೆ.

ಟೀಮ್ ಇಂಡಿಯಾ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರು 2023ರ ಬಳಿಕ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ಕೊನೆಯ ಪಂದ್ಯವನ್ನು ಆಡಿದ್ದರು. ಶ್ರೇಯಸ್ ಅಯ್ಯರ್ ಅವರನ್ನು 2024 ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಅಂದಿನಿಂದ ಇವರು ಚುಟುಕು ಫಾರ್ಮೆಟ್ಗೆ ಮರಳಿರಲಿಲ್ಲ. ಈಗ ಮತ್ತೆ ಅಯ್ಯರ್ ತಂಡ ಸೇರಿದ್ದಾರೆ.
ಶ್ರೇಯಸ್ ಅಯ್ಯರ್ ಅವರು 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ. ಇವರನ್ನು ಕೆಕೆಆರ್ ಮೆಗಾ ಹರಾಜಿನ ಅಂಗಳಕ್ಕೆ ಬಿಟ್ಟಾಗ ಪಂಜಾಬ್ ಇವರಿಗೆ ಮಣೆ ಹಾಕಿತು. ಇವರು 2025ರ ಐಪಿಎಲ್ನಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿ ಫೈನಲ್ಗೆ ಕೊಂಡೊಯ್ಯುವಲ್ಲಿ ಸಫಲರಾಗಿದ್ದರು. ಶ್ರೇಯಸ್ 18ನೇ ಆವೃತ್ತಿಯ ಐಪಿಎಲ್ನಲ್ಲಿ 175ರ ಸ್ಟ್ರೈಕ್ ರೇಟ್ನಲ್ಲಿ 604 ರನ್ ಸಿಡಿಸಿದ್ದಾರೆ.

ಬಿಸಿಸಿಐ ಬದಲಿ ಆಟಗಾರರನ್ನು ಘೋಷಣೆ ಮಾಡಿದೆ. ಟಿ20 ಕ್ರಿಕೆಟ್ನ ಮಧ್ಯಮ ಕ್ರಮಾಂಕದ ಆಟಗಾರ ತಿಲಕ್ ವರ್ಮಾ ಸಹ ಗಾಯಕ್ಕೆ ತುತ್ತಾಗಿದ್ದು ಇವರ ಬದಲಿಗೆ ಶ್ರೇಯಸ್ ಅಯ್ಯರ್ ತಂಡವನ್ನು ಸೇರಿದ್ದಾರೆ. ಇನ್ನು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಬದಲಿಗೆ ಸ್ಪಿನ್ ಬೌಲರ್ ರವಿ ಬಿಷ್ಣೋಯಿ ತಂಡಕ್ಕೆ ಎಂಟ್ರಿ ನೀಡಿದ್ದಾರೆ.
ವಾಷಿಂಗ್ಟನ್ ಸುಂದರ್ ಮೊದಲ ಏಕದಿನ ಪಂದ್ಯದ ಬಳಿಕ ಸ್ಕ್ಯಾನ್ಗೆ ಒಳಪಟ್ಟಿದ್ದಾರೆ. ಇದರಲ್ಲಿ ಇವರಿಗೆ ಆದ ಗಾಯದ ಬಗ್ಗೆ ತಿಳಿದು ಬಂದಿದ್ದು, ಇವರು ಬೆಂಗಳೂರಿನಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ವರದಿ ಮಾಡಿಕೊಳ್ಳಲಿದ್ದಾರೆ. ಇವರು ಟಿ20 ಸರಣಿಯಿಂದ ಹೊರ ನಡೆಯುತ್ತಿದ್ದಂತೆ, ಬಿಸಿಸಿಐ ಆಯ್ಕೆ ಸಮಿತಿ ರವಿ ಬಿಷ್ಣೋಯಿ ಅವರಿಗೆ ತಂಡದಲ್ಲಿ ಸೇರಿಸಿಕೊಂಡಿದೆ.
ವಿಜಯ್ ಹಜಾರೆ ಟ್ರೋಫಿಯ ಪಂದ್ಯವನ್ನು ಆಡುವ ವೇಳೆ ತಿಲಕ್ ಗಾಯಕ್ಕೆ ತುತ್ತಾಗಿದ್ದಾರೆ. ರಾಜ್ಕೋಟ್ನಲ್ಲಿ ತಿಲಕ್ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯ ಕಾಣಿಸಿಕೊಂಡಿದೆ. ಇವರು ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಗಳು ಬಂದಿವೆ.
ಶ್ರೇಯಸ್ ಅಯ್ಯರ್ ಸಹ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯದ ವೇಳೆ ಕ್ಯಾಚ್ ಹಿಡಿಯುವಾಗ ಗಾಯಕ್ಕೆ ತುತ್ತಾಗಿದ್ದು, ಶ್ರೇಯಸ್ ಈಗ ಚೇತರಿಸಿಕೊಂಡಿದ್ದು, ಏಕದಿನ ಸರಣಿಗಳಲ್ಲಿ ಆಡುತ್ತಿದ್ದಾರೆ. ಇವರು ಟಿ20 ವಿಶ್ವಕಪ್ಗೆ ಇನ್ನು ಕೆಲವೇ ದಿನಗಳು ಇರುವಾಗಲೇ ತಂಡ ಸೇರಿದ್ದು, ಅವರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ.
ಟೀಮ್ ಇಂಡಿಯಾದ ಭರವಸೆಯ ಬ್ಯಾಟರ್ ಶ್ರೇಯಸ್ ಅಯ್ಯರ್ ಏಕದಿನ ತಂಡದ ಖಾಯಂ ಸದಸ್ಯ. ಆದರೆ ಇವರು 2 ವರ್ಷಗಳಿಂದ ಟಿ20 ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇವರು ಭಾರತದ ಪರ 51 ಟಿ20 ಪಂದ್ಯಗಳನ್ನು ಆಡಿದ್ದು, 30ರ ಸರಾಸರಿಯಲ್ಲಿ 1104 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 8 ಅರ್ಧಶತಕಗಳು ಸಹ ಸೇರಿವೆ.