ಭಾರತೀಯ ಬ್ಯಾಟರ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್ ತಮ್ಮ ಗಾಯಗೊಂಡ ಬೆನ್ನಿನ ಶಸ್ತ್ರಚಿಕಿತ್ಸೆಗಾಗಿ ಲಂಡನ್ಗೆ ತೆರಳಲಿದ್ದಾರೆ. ಈ ಮೂಲಕ ಅವರು ಅಧಿಕೃತವಾಗಿ ಐಪಿಎಲ್ 2023ರ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ. ಐಪಿಎಲ್ ಮಾತ್ರವಲ್ಲದೆ ಜೂನ್ನಲ್ಲಿ ಲಂಡನ್ನ ಓವಲ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಿಂದ ಕೂಡ ಹೊದಬಿದ್ದಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಇದು ದೊಡ್ಡ ಹಿನ್ನಡೆಯಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಿಂದ ಹೊರಬಿದ್ದ ಬಳಿಕವೇ ಪರೀಕ್ಷೆ ನಡೆಸಿದ್ದ ಎನ್ಸಿಎ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸೂಚನೆ ನೀಡಿತ್ತು. ಆದರೆ, ಗಾಯದ ಸುಧಾರಣೆಯ ನಿರೀಕ್ಷೆಯಲ್ಲಿದ್ದ ಅಯ್ಯರ್ ಐಪಿಎಲ್ನ ಕೆಲವು ಪಂದ್ಯಗಳಲ್ಲಾದರೂ ಆಡುವ ವಿಶ್ವಾಸದಲ್ಲಿದ್ದರು. ಐಪಿಎಲ್ ಆರಂಭವಾದರೂ ಅವರ ಪರಿಸ್ಥಿತಿ ಸುಧಾರಣೆಯಾಗದ ಹಿನ್ನಲೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡಿದ್ದಾರೆ. ಅಯ್ಯರ್ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಕನಿಷ್ಠ 5 ತಿಂಗಳ ಕಾಲ ವಿಶ್ರಾಂತಿ ಪಡೆಯುವ ಅಗತ್ಯವಿರುತ್ತದೆ.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮೊದಲನೇ ದಿನದಿಂದಲೇ ಅಯ್ಯರ್ಗೆ ಶಸ್ತ್ರಚಿಕಿತ್ಸೆಗೆ ಹೋಗುವಂತೆ ಸೂಚಿಸಿತ್ತು. ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದ ಅಯ್ಯರ್, ಆಯುರ್ವೇದ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ, ಈಗ ಹಾರ್ದಿಕ್ ಪಾಂಡ್ಯ ಅವರಂತೆ ಉಬ್ಬುವ ಡಿಸ್ಕ್ನ ಆಪರೇಷನ್ ಮಾಡಿಸಿಕೊಳ್ಳಲು ಲಂಡನ್ಗೆ ತೆರಳಲಿದ್ದಾರೆ. ಶಸ್ತ್ರಚಿಕಿತ್ಸೆಯ ಸಮಯವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಮತ್ತು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಲು ಕನಿಷ್ಠ 5 ತಿಂಗಳುಗಳು ಬೇಕಾಗುತ್ತವೆ ಮತ್ತು ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿರುವ 50-ಓವರ್ಗಳ ವಿಶ್ವಕಪ್ನಲ್ಲಿ ಅವರ ಭಾಗವಹಿಸುವಿಕೆ ಕೂಡ ಅನುಮಾನಾಸ್ಪದವಾಗುತ್ತದೆ.

ಭಾರತಕ್ಕೆ ದೊಡ್ಡ ಹಿನ್ನಡೆ
"ಶ್ರೇಯಸ್ ಅಯ್ಯರ್ ವಿದೇಶದಲ್ಲಿ ತಮ್ಮ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಆಪರೇಷನ್ ಬಳಿಕ ಅವರು ಕನಿಷ್ಠ ಐದು ತಿಂಗಳು ಕ್ರಿಕೆಟ್ನಿಂದ ದೂರ ಉಳಿಯಬೇಕಾಗುತ್ತದೆ." ಎಂದು ಬಿಸಿಸಿಐನ ಉನ್ನತ ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಜೂನ್ 7ರಿಂದ ಲಂಡನ್ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವನ್ನು ಆಡಲಿದೆ. ಮಹತ್ವದ ಪಂದ್ಯಕ್ಕೆ ಅಯ್ಯರ್ ಅಲಭ್ಯವಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ವೇಳೆ ಅವರು ಬೆನ್ನಿನ ಗಾಯಕ್ಕೆ ತುತ್ತಾಗಿದ್ದರು. ಮೊದಲ ಮೂರು ಪಂದ್ಯಗಳಲ್ಲಿ ಆಡಿದ್ದ ಅವರು, ಕೊನೆಯ ಪಂದ್ಯದಲ್ಲಿ ಗಾಯದ ಕಾರಣ ಹೊರಗುಳಿದಿದ್ದರು. ನಂತರ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಕೂಡ ಹೊರಗುಳಿದರು. ಕಳೆದ ವರ್ಷ ಅಯ್ಯರ್ ಭಾರತದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಟೆಸ್ಟ್ ಮಾದರಿಯಲ್ಲಿ 2022ರಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.

ಕೆಕೆಆರ್ ತಂಡಕ್ಕೆ ಭಾರಿ ಹಿನ್ನಡೆ
ಶ್ರೇಯಸ್ ಅಯ್ಯರ್ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಬಿದ್ದಿರುವುದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಫ್ರಾಂಚೈಸಿ ಅಯ್ಯರ್ ಚೇತರಿಸಿಕೊಂಡು ಹಲವು ಪಂದ್ಯಗಳಲ್ಲಿ ಆಡುವ ವಿಶ್ವಾಸದಲ್ಲಿದ್ದರು. ಈಗ ಅವರು ಬದಲೀ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅವಕಾಶ ಸಿಕ್ಕಿದೆ. ಅಯ್ಯರ್ ಬದಲಾಗಿ ನಿತೀಶ್ ರಾಣಾ ತಂಡಕ್ಕೆ ನಾಯಕರಾಗಿ ಆಯ್ಕೆಯಾಗಿದ್ದು, ಮೊದಲನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲನುಭವಿಸಿದೆ. ಎರಡನೇ ಪಂದ್ಯವನ್ನು ಬಲಿಷ್ಠ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸೆಣೆಸಲಿದೆ. ಏಪ್ರಿಲ್ 6ರಂದು ಈಡನ್ ಗಾರ್ಡನ್ ಅಂಗಳದಲ್ಲಿ ಈ ಪಂದ್ಯ ನಡೆಯಲಿದೆ.